ಸುಖ ನಿದ್ರೆಗೆ ಅಕ್ಕ ಪೆಗ್ ಜಾಸ್ತಿ ಹಾಕಬೇಕು, ಹೆಬ್ಬಾಳ್ಕರ್ ಬಗ್ಗೆ ಕೀಳು ಹೇಳಿಕೆಗೆ ಪಾಟೀಲ್‌ಗೆ ಮಹಿಳಾ ಆಯೋಗ ನೊಟೀಸ್

By Suvarna NewsFirst Published Apr 15, 2024, 10:46 AM IST
Highlights

ಸುಖ ನಿದ್ರೆಗೆ ಅಕ್ಕ ಇವತ್ತು ಒಂದು ಪೆಗ್ ಜಾಸ್ತಿ ಹಾಕಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ಸಂಜಯ್ ಪಾಟೀಲ್‌ ಗೆ ಮಹಿಳಾ ಆಯೋಗ ನೋಟಿಸ್ ನೀಡಲು ಮುಂದಾಗಿದೆ. ಇದರ ಜೊತೆಗೆ ಹೆಚ್‌ಡಿಕೆಗೂ ನೋಟಿಸ್ ನೀಡಿದೆ,

ಬೆಂಗಳೂರು(ಏ.15): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತು ಅಪಮಾನಕಾರಿಯಾಗಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ  ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ. ಇದರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ರಾಜ್ಯ ಮಹಿಳಾ ಆಯೋಗ ಭಾನುವಾರ ನೋಟಿಸ್ ಜಾರಿ ಮಾಡಿದೆ. 

ಸುಖ ನಿದ್ರೆಗೆ ಅಕ್ಕ ಇವತ್ತು ಒಂದು ಪೆಗ್ ಜಾಸ್ತಿ ಹಾಕಬೇಕು ಎಂದು ಸಂಜಯ್ ಪಾಟೀಲ್‌ ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ‌. ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು. ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು‌, ಲಿಂಗಾಯತ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಾನು ಇಡೀ ರಾಜ್ಯದ ಮಹಿಳೆಯರಿಗೆ ಧಿಕ್ಕರಿಸಲು ಕರೆ ಕೊಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

PM Modi Mysuru Visit: ಕೈ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ಕಾಂಗ್ರೆಸ್‌ನಿಂದ ನೂರಾರು ಕೋಟಿ ಕಪ್ಪುಹಣ, ಮೋದಿ ಆರೋಪ

ಸಂಜಯ್ ಹೇಳಿದ್ದೇನು?: ಲೋಕಸಭಾ ಚುನಾವಣೆ ಪ್ರಚಾರ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕೀಳು ಹೇಳಿಕೆಯೊಂದನ್ನು ನೀಡಿ, ಬಿಜೆಪಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವುದನ್ನು ನೋಡಿ ಹೆಬ್ಬಾಳ್ಕರ್‌ ಗೆ ರಾತ್ರಿ ನಿದ್ದೆ ಬರಲ್ಲ. ನಿದ್ದೆ ಮಾತ್ರೆ ತೆಗೆದುಕೊಂಡು ಮಲಬೇಕಾಗುತ್ತದೆ. ಅವರು ಒಂದು ಎಕ್ಸ್‌ಟ್ರಾ ಪೆಗ್‌ ಹೊಡೆಯಬೇಕಾಗುತ್ತದೆ ಎಂದು ಕೀಳು ಹೇಳಿಕೆ ನೀಡಿದ್ದಾರೆ. ಪಾಟೀಲರ ಈ ಹೇಳಿಕೆ  ತೀವ್ರ ವಿವಾದಕ್ಕೆ ಕಾರಣವಾಗಿದೆ.

ಮಹಿಳಾ ಆಯೋಗದಿಂದ ಎಚ್‌ಡಿಕೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು:
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದು ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ಭಾನುವಾರ ನೋಟಿಸ್ ಜಾರಿ ಮಾಡಿದೆ. ಕುಮಾರಸ್ವಾಮಿಯವರ ಹೇಳಿಕೆಯಿಂದ ಮಹಿಳೆಯರ ಚಾರಿತ್ರ್ಯಕ್ಕೆ ಹಾಗೂ ಗೌರವಕ್ಕೆ ಧಕ್ಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಮಹಿಳೆಯರ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಈ ವಿಚಾರವನ್ನು ಸಾಮಾಜಿಕ ದೃಷ್ಟಿಕೋನದಿಂದ ಗಂಭೀರವಾಗಿ ಪರಿಗಣಿಸಿ ಮಹಿಳಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!