ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ಅನಿರೀಕ್ಷಿತ ಅಭ್ಯರ್ಥಿಗಳ ಘೋಷಣೆ!

Published : Jun 08, 2020, 01:25 PM ISTUpdated : Jun 08, 2020, 02:46 PM IST
ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ಅನಿರೀಕ್ಷಿತ ಅಭ್ಯರ್ಥಿಗಳ ಘೋಷಣೆ!

ಸಾರಾಂಶ

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರು| ಸಂಘದ ಹಿನ್ನೆಲೆ ಇರುವ ಇಬ್ಬರು ಹಿರಿಯ ಮುಖಂಡರಿಗೆ ರಾಷ್ಟ್ರೀಯ ನಾಯಕರ ಮಣೆ| ಕತ್ತಿ, ಕೋರೆ ಬದಿಗಿಟ್ಟ ಹೈಕಮಾಂಡ್

ಬೆಂಗಳೂರು(ಜೂ.08): ತೀವ್ರ ಕುತೂಹಲ ಮೂಡಿಸಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರುಗಳನ್ನು ಘೋಷಿಸಿದೆ. ರಾಜ್ಯಸಭಾ ಚುನಾವಣೆಗೆ ಪಕ್ಷದ ರಾಜ್ಯ ಕೋರ್‌ ಕಮಿಟಿ ಅಂತಿಮಗೊಳಿಸಿ ಕಳುಹಿಸಿದ್ದ ಉಮೇದುವಾರರ ಹೆಸರುಗಳಿಗೆ ಮನ್ನಣೆ ಕೊಡದೆ , ಸಂಘದ ಹಿನ್ನೆಲೆ ಇರುವ ಇಬ್ಬರು ಹಿರಿಯ ಮುಖಂಡರಿಗೆ ರಾಷ್ಟ್ರೀಯ ನಾಯಕರು ಮಣೆ ಹಾಕಿದ್ದಾರೆ. ಹೌದು ಕತ್ತಿ, ಕೋರೆ ಬದಿಗಿಟ್ಟ ಹೈಕಮಾಂಡ್ ರಾಯಚೂರಿನ ಅಶೋಕ್ ಗಸ್ತಿ, ಈರಣ್ಣ ಕಡಡಿಯವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.

ಹೌದು ಬಿಜೆಪಿಯಲ್ಲಿ ತೀವ್ರ ಕಗ್ಗಂಟಾಗಿದ್ದ ರಾಜ್ಯಸಭಾ ಅಭ್ಯರ್ಥಿ ಸ್ಥಾನಕ್ಕೆ ಕೊನೆಗೂ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಕರ್ನಾಟಕದಿಂದ ಆಯ್ಕೆ ಮಾಡಿ ಕಳುಹಿಸಿದ ಹೆಸರಿಗೆ ಮನ್ನಣೆ ಕೊಡದೆ, ಸಂಘದ ಹಿನ್ನೆಲೆ ಇರುವ ಇಬ್ಬರು ಹಿರಿಯ ಮುಖಂಡರಿಗೆ ರಾಷ್ಟ್ರೀಯ ನಾಯಕರು ಮಣೆ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ ಸಂಘದ ಮುಖಂಡರಲ್ಲಿ ಒಬ್ಬರಾದ ರಾಯಚೂರಿನ ಅಶೋಕ್ ಗಸ್ತಿ ಹಾಗೂ ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡ ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ ಈರಣ್ಣ ಕಡಾಡಿ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಿಸಿದೆ.

ರಾಜ್ಯಸಭೆ ಚುನಾವಣೆಗೂ ಮುನ್ನ ರಾಜೀನಾಮೆ ಕೊಟ್ಟ ಮೂವರು ಕೈ ಶಾಸಕರು

ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಅಶೋಕ್ ಗಸ್ತಿ

ಅಶೋಕ್ ಗಸ್ತಿ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಮುಖಂಡರಲ್ಲಿ ಒಬ್ಬರು ಎಂಬುವುದು ಉಲ್ಲೇಖನೀಯ. ಹೌದು ರಾಯಣ್ಣ ಬ್ರಿಗೇಡ್ ಚಟುವಟಿಕೆ ವೇಳೆ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಅಶೋಕ್ ಗಸ್ತಿ, ಅವರ ವಿರುದ್ಧ ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ್ದರು.

ಈರಣ್ಣ ಕಡಾಡಿ

ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ 01-06-1966ರಂದು ಜನಿಸಿದ ಈರಣ್ಣ ಕಡಾಡಿ, 1989 ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಸುತ್ತಿದ್ದಾರೆ. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ಈರಣ್ಣ, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದವರು. 1994 ರಲ್ಲಿ ಅರಭಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈರಣ್ಣ ಕಾಂಗ್ರೆಸ್‌ನ ಮಾಜಿ ಸಚಿವ ವಿ.ಎಸ್.ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹಾಗೂ 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಕಸಿರುವ ಈರಣ್ಣ ಮೊದಲಿನಿಂದಲೂ ಆರ್‌ಎಸ್‌ಎಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಈರಣ್ಣ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಕೋರ್ ಕಮಿಟಿ ಸಭೆ ಅಂತ್ಯ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್

ಇನ್ನು ಈರಣ್ಣ ಕರಾಡಿ ಆಯ್ಕೆಯ ಹಿಂದೆ ಜಾರಕಿಹೊಳಿ ಕುಟುಂಬದ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗಿದೆ. ಲಿಂಗಾಯತ ಗಾಣಿಗ ಸಮಾಜದ ಈರಣ್ಣ ಕರಾಡಿ ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಗೆ ಅಡ್ಡಿಯಾಗುವ ಆತಂಕವಿತ್ತು. ಹೀಗಾಗಿ ರಾಜ್ಯಸಭೆಗೆ ಕಳುಹಿಸಿ ಕೈತೊಳೆದುಕೊಳ್ಳುವಲ್ಲಿ ಜಾರಕಿಹೊಳಿ ಕುಟುಂಬ ಯಶಸ್ವಿಯಾಗಿದೆ ಎನ್ನಲಾಗಿದೆ. ಅಲ್ಲದೇ ಈರಣ್ಣ ಬಗ್ಗೆ ಇತ್ತೀಚೆಗೆ ಪಕ್ಷದ ಮುಖಂಡರ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಬಹಳ ಮೃಧುವಾಗಿ ಮಾತನಾಡಿದ್ದರು. ಸಹೋದರನ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ನಿಟ್ಟಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಪ್ಲಾನ್‌ ಯಶಸ್ವಿಯಾಗಿದೆ ಎಂಬ ಮಾತು ಸದ್ಯ ಕೇಳಿ ಬಂದಿದೆ.

ಪಕ್ಷದ ನಿಷ್ಠಾವಂತರಿಗೆ ಮಣೆ: ಈಶ್ವರಪ್ಪ

ಇನ್ನು ಬಿಜೆಪಿ ಈ ಇಬ್ಬರ ಹೆಸರು ಘೋಷಿಸುವ ಮೂಲಕ ಪಕ್ಷದಲ್ಲಿ ನಿಷ್ಠಾವಂತರಿಗೆ ಮಣೆ ಹಾಕಲಾಗುತ್ತದೆ ಎಂಬ ಸಂದೇಶ ಕೊಟ್ಟಿದೆ. ಸಾಮಾನ್ಯ ಕಾರ್ಯಕರ್ತ ಕೂಡ ರಾಜ್ಯಸಭೆಗೆ ಹೋಗುವ ಅವಕಾಶ ಬಿಜೆಪಿಯಲ್ಲಿದೆ. ಬಿಜೆಪಿಯನ್ನು ಟೀಕರ ಮಾಡೋರು ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಮಾಡಿದವರಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ