
ಕುಂದಗೋಳ (ಮಾ.09): ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಕೆ ಕಂಡು ಬರುತ್ತಿದೆ. ಇದಕ್ಕಾಗಿ ಶೀಘ್ರ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಅವರು ತಾಲೂಕಿನ ಕಮಡೊಳ್ಳಿ ಗ್ರಾಮದ ಆರ್.ಎಫ್. ಪಾಟೀಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2023-24 ನೇ ಸಾಲಿನ ಎಸ್.ಡಿ.ಪಿ. ಯೋಜನೆಯಡಿ ₹4.5 ಕೋಟಿ ಅನುದಾನದಲ್ಲಿ ಹೆಚ್ಚುವರಿ ಕೊಠಡಿಗಳ ಹಾಗೂ ಕಾರ್ಯಾಗಾರ ಕಟ್ಟಡಗಳ ಕಾಮಗಾರಿಗೆ ಭೂಮಿಪೂಜೆ, ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪಾಲಕರು ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳತ್ತ ಗಮನಹರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಲ್ಲಿರುವ ಸೌಲಭ್ಯಗಳಂತೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒದಗಿಸುವ ದೃಷ್ಟಿಯಿಂದ 2000 ಉಪನ್ಯಾಸಕಲ್ಲಿ 941 ಉಪನ್ಯಾಸಕರನ್ನು ತಾಂತ್ರಿಕ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ತಮ್ಮ ಆಸ್ತಿ ಸಂರಕ್ಷಿಸಿಕೊಳ್ಳುತ್ತಿರುವವರಲ್ಲಿ ಶಿಕ್ಷಣಕ್ಕೆ ಗ್ರಾಮದ ವೆಂಕನಗೌಡ ಹನಮಂತಗೌಡ ಪಾಟೀಲ್ ಅವರು ಸ್ವಯಂ ಪ್ರೇರಿತರಾಗಿ 4 ಎಕರೆ ಭೂಮಿ ದಾನಮಾಡಿ ಬಡ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣಕ್ಕೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷೆ ವಹಿಸಿದ್ದ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯುಲು ಗ್ರಾಮಕ್ಕೆ ಆಗಮಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಕಾಲೇಜಿನ ಪ್ರಾಚಾರ್ಯ ಅಶೋಕ ಕಬ್ಬೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂ ದಾನಿಗಳಾದ ಫಕ್ಕೀರಗೌಡ ಪಾಟೀಲ್, ಚಂದ್ರಶೇಖರ ಜುಟ್ಟಲ್, ಸತೀಶ್ ಕೊಬ್ಬಯ್ಯನವರ, ಅನೀಲ್ ಕುಮಾರ್ ಪಾಟೀಲ್, ನಾಗನಗೌಡ ಸಾತ್ಮಾರ, ಗುರುಗೌಡ ಪಾಟೀಲ್, ಮಹಾಂತೇಶ ಶ್ಯಾಗೋಟಿ, ಹಜರತ್ ಅಲಿ ಜೋಡಮನಿ, ಇಮಾಮಸಾಬ್ ಅಲ್ಲಿಖಾನವರ, ಗ್ರಾಪಂ ಮಾಜಿ ಅಧ್ಯಕ್ಷ ಮಾಬುಸಾಬ್ ಗುಡದೂರ, ಖಲಂದರ ಕಾಳಾ, ತಾಪಂ ಇಒ ಪ್ರಶಾಂತ್ ಟಿ, ತಹಸೀಲ್ದಾರ್ ನಾಗರತ್ನಾ ಶಿವಪೂರ, ಧೃತಿ ಸಾಲ್ಮನಿ, ಕೆ.ಜಿ. ನಾಗಭೂಷಣ, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ದೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.