
ಗೋಕಾಕ[ಫೆ.10]: ಪ್ರಮಾಣ ವಚನ ಸ್ವೀಕರಿಸುವ ಮನಸ್ಸು ನನಗೆ ಇರಲಿಲ್ಲ. ನನ್ನನ್ನು ನಂಬಿದ ಕುಮಟಳ್ಳಿ ಮತ್ತು ಇತರರು ಮಂತ್ರಿಯಾಗಲಿಲ್ಲ ಎನ್ನುವ ಕೊರಗು ಇತ್ತು. ಆದರೆ, ಮಹೇಶ್ ಕುಮಟಳ್ಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಮನವಿ ಮೇರೆಗೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವರಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಅಭಿಮಾನಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್, ವಿಶ್ವನಾಥ್ ಚುನಾವಣೆಯಲ್ಲಿ ಸೋತರು. ಆದರೆ, ಮಹೇಶ್ ಕುಮಟಳ್ಳಿ, ಆರ್.ಶಂಕರ್, ಮುನಿರತ್ನ, ಪ್ರತಾಪ್ಗೌಡ ಪಾಟೀಲ್ಗೆ ಸ್ಥಾನ ಮಾನ ಸಿಗದಿರುವುದ್ದಕ್ಕೆ ಬೇಸರವಿತ್ತು. ಅವರೆಲ್ಲರೂ ತನ್ನ ಕಣ್ಣ ಮುಂದೆಯೇ ಬರುತ್ತಿದ್ದರು. ಹೀಗಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುವ ಬಗ್ಗೆ ಹಿಂದೇಟು ಹಾಕಿದ್ದೆ. ನಮಗೆ ನೀರಾವರಿ ಖಾತೆಯಾದರೂ ಸಿಗಲಿ, ಲೈಬ್ರರಿ ಖಾತೆಯಾದರೂ ಸಿಗಲಿ ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಂಬಿದ್ದೇನೆ ಎಂದರು.
ಡಿಕೆಶಿ ವಿರೋಧ ಮಾಡಿದ್ದಕ್ಕೆ ಲೀಡರ್ ಆದೆ:
ಡಿ.ಕೆ.ಶಿವಕುಮಾರ್ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ. ಅವರು ವಿರೋಧಿಸಿದ್ದಕ್ಕೆ ಲೀಡರ್ ಆದೆ. ದೇವರ ದಯೆ, ಕ್ಷೇತ್ರದ ಜನರ ಆಶೀರ್ವಾದದಿಂದ ಯಶಸ್ಸು ಸಿಕ್ಕಿದೆ. ಅದಕ್ಕಾಗಿಯೇ ಇಂದು ಶಿವಕುಮಾರ್ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಸತೀಶ್ಗೆ ಸಿಎಂ ಆಗುವ ಅರ್ಹತೆ ಇದೆ:
ಮನೆತನದ ವಿಷಯ ಬಂದಾಗ ನಾವೆಲ್ಲ ಜಾರಕಿಹೊಳಿ ಸಹೋದರರು ಒಂದೇ. ರಾಜಕೀಯ ಬಂದಾಗ ನಾವೆಲ್ಲಾ ಬೇರೆ ಬೇರೆ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಸತೀಶ್ಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಸುಮ್ಮನಿದ್ದರೆ ಒಳ್ಳೆಯದು ಎಂದು ಹೇಳಿದರು.
ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಸಂಭಾವ್ಯ ಪಟ್ಟಿ
500 ಕೇಜಿ ಸೇಬು ಹಾರ ಹಾಕಿ ರಮೇಶ್ಗೆ ಭರ್ಜರಿ ಸ್ವಾಗತ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಮೊದಲ ಬಾರಿಗೆ ಸ್ವಕ್ಷೇತ್ರ ಗೋಕಾಕ ನಗರಕ್ಕೆ ಭಾನುವಾರ ಆಗಮಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಗೋಕಾಕ ನಗರಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಿ, ಹೂವಿನ ಹಾರ ಹಾಕಿ ಸ್ವಾಗತಿಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಕ್ರೇನ್ ಮೂಲಕ 5 ಕ್ವಿಂಟಲ್ ತೂಕದ ಸೇಬಿನ ಹಾರ ಹಾಕಿದರು.
ತಂದೆ-ತಾಯಿಯ ಸಮಾಧಿಗೆ ಪೂಜೆ:
ಗೋಕಾಕ ನಗರಕ್ಕೆ ಆಗಮಿಸುತ್ತಿದ್ದಂತೆ ಮೊದಲು ಗ್ರಾಮದೇವತೆ ಲಕ್ಷ್ಮೇದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಅದಾದ ನಂತರ ತಂದೆ ತಾಯಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ರಮೇಶ್ ಮನೆಗೆ ಆಗಮಿಸುತ್ತಿದ್ದಂತೆ ಪತ್ನಿ ಆರತಿ ಬೆಳಗಿ ಹೂವಿನ ಹಾರಹಾಕಿ ಮನೆಯೊಳಗೆ ಬರಮಾಡಿಕೊಂಡರು.
ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಸಂಭಾವ್ಯ ಪಟ್ಟಿ
‘ಗೋಕಾಕದ ಬೆಂಕಿ ಚೆಂಡು ಎಂದಿದ್ದೆವು’
ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವ ಮೊದಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಳಗಾವಿ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಗೋಕಾಕ ಬೆಂಕಿಯ ಚೆಂಡು ಎಂದು ಸೂಕ್ಷ್ಮವಾಗಿ ಹೇಳಿದ್ದೆವು. ಆದ್ರೆ ಅವರು ಕೇಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಿಜೆಪಿಗೆ ಬರಬೇಕಾಯಿತು. ರಮೇಶ್ ಅವರಿಗೆ ಜಲಸಂಪನ್ಮೂಲ ಖಾತೆ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ.
-ಮಹೇಶ್ ಕುಮಟಳ್ಳಿ, ಅಥಣಿ ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.