
ಬೆಂಗಳೂರು (ಮೇ.30): ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್(DK Shivakumar) ಅವರ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರಿಂದ ಭಾರೀ ಪೈಪೋಟಿ ಶುರುವಾಗಿರುವುದರಿಂದ ಹೈಕಮಾಂಡ್ಗೆ ಕಗ್ಗಂಟಾಗಿ ಪರಿಣಮಿಸಿದೆ.
ಹೊಸ ಸಂಪುಟದಲ್ಲಿ ವಾಸ್ತವವಾಗಿ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲು ಹೈಕಮಾಂಡ್ ಯೋಜಿಸಿತ್ತು. ಈ ಪೈಕಿ ಪಶಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಸಮುದಾಯಗಳಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಇರಾದೆ ಇತ್ತು. ಆದರೆ, ಹಿಂದುಳಿದ ವರ್ಗ ಹೊರತುಪಡಿಸಿ ಉಳಿದ ಮೂರೂ ಸಮುದಾಯದಲ್ಲೂ ಇಬ್ಬರು, ಮೂವರು ನಾಯಕರಿಂದ ಪೈಪೋಟಿ, ಲಾಬಿ ತೀವ್ರವಾಗಿರುವುದರಿಂದ ಹೈಕಮಾಂಡ್ಗೆ ತಲೆನೋವು ತರಿಸಿದೆ.
ಪರಿಶಿಷ್ಠ ಜಾತಿಯಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್ನಲ್ಲಿತ್ತು. ಆದರೆ, ಈಗ ಅಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಸರ್ಕಾರದಲ್ಲಿ (2013-18) ಬಲಗೈ ನಾಯಕರಾದ ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಈಗ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಬಲಗೈ ಸಮುದಾಯಕ್ಕೇ ಆ ಸ್ಥಾನ ಸಿಗಲಿದೆ. ಹಾಗಾಗಿ ಈ ಬಾರಿ ನಮಗೆ ಆ ಸ್ಥಾನ ನೀಡಬೇಕೆಂದು ಎಡಗೈ ಸಮುದಾಯದ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಪ್ರಮುಖವಾಗಿ ಎಡಗೈನಲ್ಲಿ ಕೆ.ಎಚ್.ಮುನಿಯಪ್ಪ ಅವರು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಲಗೈ ಸಮುದಾಯದಿಂದ ಪ್ರಿಯಾಂಕ್ ಖರ್ಗೆ ಅವರ ಜೊತೆಗೆ ಪರಮೇಶ್ವರ್ ಅವರ ಹೆಸರೂ ಪರಿಗಣನೆಗೆ ಬರುತ್ತಿದೆ. ಹಾಗಾಗಿ ಇದನ್ನು ಹೇಗೆ ನಿಭಾಯಿಸುವುದು ಹೈಕಮಾಂಡ್ಗೆ ತಿಳಿಯದಾಗಿದೆ.
ಇನ್ನು, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್ ಮತ್ತು ಈಶ್ವರ್ ಖಂಡ್ರೆ ಅವರ ನಡುವೆ ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅಲ್ಪಸಂಖ್ಯಾತರಲ್ಲಿ ಜಮೀರ್ ಅಹಮದ್ ಖಾನ್ ಅವರ ಹೆಸರು ಕೇಳಿಬರುತ್ತಿದ್ದರೂ, ಮತ್ತೊಂದೆಡೆ ಯು.ಟಿ.ಖಾದರ್ ಅವರೂ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಹಿಂದುಳಿದ ವರ್ಗದಿಂದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್ಗಿತ್ತು.
ಆದರೆ, ಸ್ವತಃ ಸಿದ್ದರಾಮಯ್ಯ ಅವರೇ ಬೇಡ ಎಂದು ಹೇಳಿದ್ದಾರೆ. ಹಾಗಾಗಿ ಮೂರು ಡಿಸಿಎಂ ಸ್ಥಾನಗಳಿಗೆ ಪೈಪೋಟಿ ನಡೆಯುತ್ತಿರುವುದರಿಂದ ಕಗ್ಗಂಟಾಗಿದೆ. ಆದರೂ, ಹೈಕಮಾಂಡ್ ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲೇ ಬೇಕೆಂದು ನಿರ್ಧರಿಸಿದೆ. ಕಗ್ಗಂಟು ನಿಭಾಯಿಸುವ ಜೊತೆಗೆ ಎಷ್ಟು ಡಿಸಿಎಂ ಸ್ಥಾನಗಳಿಗೆ ಒಪ್ಪಿಗೆ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.