
ಬೆಂಗಳೂರು (ಸೆ.01): ಲೋಕಸಭಾ ಚುನಾವಣೆಯಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೊಪದಲ್ಲಿ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣನನ್ನು ಅನರ್ಹಗೊಳಿಸಿದ ಹೈಕೋರ್ಟ್ನಿಂದ ಅವರ ಪ್ರಜ್ವಲ್ ತಂದೆ ಹೆಚ್.ಡಿ. ರೇವಣ್ಣಗೂ ಶಾಕ್ ನೀಡಿದೆ.
ಹೌದು, ಒಂದುಕಡೆ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ ಹೈಕೋರ್ಟ್ನಿಂದ ಶಾಸಕ ಹೆಚ್.ಡಿ. ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಮತನಾದ ನಡೆಯುವ ವೇಳೆ ಶಾಸಕ ರೇವಣ್ಣ ಮತನಾದನ ಬೂತ್ನಲ್ಲಿ ಕುಳಿತುಕೊಂಡು ವೋಟ್ ಹಾಕಿಸಿದ್ದರು ಎಂಬ ಆರೋಪ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರಿಗೂ ನ್ಯಾಯಾಲಯದಿಂದ ನೋಟಿಸ್ ನೀಡಲಾಗಿದೆ. ಇನ್ನು ಮಗನ ಪ್ರಕರಣ ಮುಕ್ತಾಯಗೊಂಡ ಬೆನ್ನಲ್ಲೇ ಈಗ ತಂದೆ ರೇವಣ್ಣ ಕೋರ್ಟ್ ಮೆಟ್ಟಿಲು ಹತ್ತಬೇಕಿದೆ. ಮತ್ತೊಂದೆಡೆ, ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಸೂರಜ್ ರೇವಣ್ಣ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ.
ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶ
ಶಾಸಕ ಎ. ಮಂಜು ಕೂಡ ಅಕ್ರಮದಲ್ಲಿ ಭಾಗಿ: ಲೋಕಸಭಾ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ.ಮಂಜು ಕೂಡ ಅಕ್ರಮವಾಗಿ ಭಾಗಿಯಾಗಿದ್ದಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎ.ಮಂಜು ಅವರೂ ಚುನಾವಣಾ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ತರಾಟೆ ತೆಗೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಎ.ಮಂಜು ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆಯೇ ಎಂಬುದರ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ದೂರು ಕೊಟ್ಟಾಗ ಬಿಜೆಪಿ ನಾಯಕ, ತೀರ್ಪು ಬಂದಾಗ ಜೆಡಿಎಸ್ ಶಾಸಕ:
ಇನ್ನು ಲೋಕಸಭಾ ಚುನಾವಣೆ ವೇಳೆ ಅನರ್ಹಗೊಂಡ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಯಿಂದ ಎ.ಮಂಜು ಸ್ಪರ್ಧೆ ಮಾಡಿದ್ದರು. ಚುನಾವಣಾ ಫಲಿತಾಂಶದಲ್ಲಿ ಎ. ಮಂಜು ಅವರಿಗೆ ಸೋಲುಂಟಾಗಿದ್ದರಿಂದ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಿ ನನಗೆ ಸಂಸದ ಸ್ಥಾನವನ್ನು ನೀಡಬೇಕು ಎಂದು ಎ.ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇರುವ ಬೆನ್ನಲ್ಲಿಯೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ, ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯವರು ಔಟ್ ಸೋರ್ಸ್ ಮೂಲಕವಾದ್ರೂ ವಿಪಕ್ಷ ನಾಯಕನ ಆರಿಸಿ: ನಾಗತಿಹಳ್ಳಿ ಚಂದ್ರಶೇಖರ್ ಸಲಹೆ
ಬಿಜೆಪಿಯಲ್ಲಿದ್ದಾಗ ಅರ್ಜಿ ಹಾಕಿದ್ದೆನು, ನಮ್ಮ ಪರವಾಗಿ ಆದೇಶ ಬಂದಿದೆ:
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ. ಮಂಜು ಅವರು, ಹೈಕೋರ್ಟ್ ಆದೇಶ ಸ್ಬಾಗತಿಸುತ್ತೇನೆ. ಆದೇಶದ ಪ್ರತಿ ನೋಡಿ ಮುಂದೆ ಕಾನೂನು ಹೋರಾಟ ಮಾಡುವ ಬಗ್ಗೆ ತಿರ್ಮಾನ ಮಾಡಲಾಗುತ್ತದೆ. ಈಗ ಒಂದೇ ಪಕ್ಷದಲ್ಲಿ ಇದ್ದೇವೆ. ದೇವೆಗೌಡರು, ರೇವಣ್ಣ ಹಾಗೂ ಪ್ರಜ್ವಲ ಜೊತೆಗೆ ಚರ್ಚೆ ಆಗಲಿದೆ. ನಂತರ ಮುಂದೇನು ಅಂತ ತಿರ್ಮಾನ ಮಾಡ್ತೇನೆ. ನಾನು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡುವ ಬಗ್ಗೆ ಮುಂದೆ ತಿರ್ಮಾನ ಮಾಡುತ್ತೇನೆ. ನನ್ನ ಮನವಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅರ್ಜಿ ಹಾಕುವಾಗ ಪಕ್ಷ ಬೇರೆಯಾಗಿತ್ತು. ನಾನು ಬಿಜೆಪಿ ಯಲ್ಲಿ ಇದ್ದಾಗ ಅರ್ಜಿ ಹಾಕಿದ್ದೆನು. ಈಗ ಜೆಡಿಎಸ್ ನಲ್ಲಿಇದ್ದೇನೆ. ಕೊನೆಗಾದರೂ ಆದೇಶ ನಮ್ಮ ಪರ ಬಂದಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.