
ಸೋಮರಡ್ಡಿ ಅಳವಂಡಿ
ಕೊಪ್ಪಳ (ಮೇ.20) : ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ನಂಟು ಕೊಪ್ಪಳಕ್ಕೂ ಉಂಟು. ಆ ನಂಟಿನಿಂದಾಗಿಯೇ ಕೊಪ್ಪಳ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ.
1991ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಬಸವರಾಜ ಪಾಟೀಲ್ ವಿರುದ್ಧ ಕೇವಲ 12 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು.
Karnataka Government Formation: ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡಲು ಆಗ್ರಹ
ಹೀಗೆ ಒಂದು ಬಾರಿ ಸ್ಪರ್ಧೆ ಮಾಡಿರುವ ಮೂಲಕ ಕೊಪ್ಪಳ ನಂಟು ಉಳಿಸಿಕೊಂಡಿರುವ ಅವರು, ಇಂದಿಗೂ ಅದನ್ನು ಮರೆತಿಲ್ಲ. ಚುನಾವಣೆಯ ಪ್ರಚಾರಕ್ಕೆ ಮತ್ತು ಇನ್ನಿತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತು ಪ್ರಾರಂಭಿಸುತ್ತಿದ್ದಂತೆ ನನ್ನ ಮೇಲೆ ಕೊಪ್ಪಳ ಜನರ ಋುಣ ಇದೆ. ನಾನು ಇಲ್ಲಿ ಸ್ಪರ್ಧೆ ಮಾಡಿ ಪರಾಭವಗೊಡಿದ್ದರೂ ಸಹ ಅವರು ತೋರಿದ ಪ್ರೀತಿ ಮರೆಯುವಂತೆ ಇಲ್ಲ. ನನ್ನನ್ನು ಮತದಾರರು ಗೆಲ್ಲಿಸಿದ್ದರು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮತ ಎಣಿಕೆ ಕುರಿತು ಗೊಂದಲ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೀಗಾಗಿ, ಅವರು ನನ್ನ ಮೇಲೆ ಕೊಪ್ಪಳ ಜಿಲ್ಲೆಯ ಜನರ ಋುಣ ಇದ್ದು, ಕೊಪ್ಪಳದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಇಲ್ಲಿಯ ಜನರ ಬಗ್ಗೆ ವಿಶೇಷ ಕಾಳಜಿ ಇದೆ. ಇಲ್ಲಿಂದ ಒಮ್ಮೆ ಸ್ಪರ್ಧೆ ಮಾಡುವ ಬಯಕೆಯೂ ಇದೆ ಎಂದು ಅನೇಕ ಬಾರಿ ಹೇಳಿದ್ದರು. ಕೊಪ್ಪಳ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತೇನೆ ಎನ್ನುತ್ತಿದ್ದರು. ಈ ಬಾರಿ ಸ್ಪರ್ಧೆ ಮಾಡುವ ದಿಸೆಯಲ್ಲಿ ಚರ್ಚೆಗಳು ನಡೆದವು.ಆ ಂತರಿಕ ಸರ್ವೆ ನಡೆಸಲಾಯಿತು. ಆದರೆ, ಶೇ.50 ಕ್ಕಿಂತ ಕಡಿಮೆ ಬೆಂಬಲ ದೊರೆತಿದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಲಾಗಿದೆ. ಹೀಗಾಗಿ, ಅವರಿಗೆ ಕೊಪ್ಪಳ ಎಂದರೆ ಅಚ್ಚುಮೆಚ್ಚು. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಕೊಪ್ಪಳಕ್ಕೆ ಅನೇಕ ಯೋಜನೆ, ಅಪಾರ ಅನುದಾನ ನೀಡಿದ್ದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತಮ್ಮ ಮಾನಸಪುತ್ರರಂತೆ ನೋಡಿಕೊಳ್ಳುತ್ತಾರೆ.
ಈಗಾಗಲೇ ಉತ್ತರ ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಕ್ರಿಯೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪ್ರಮುಖಪಾತ್ರ ನಿಭಾಯಿಸಿದ್ದಾರೆ. ರಾಜ್ಯರಾಜಕೀಯ ಬೆಳವಣಿಗೆ ನಡೆಯುವ ವೇಳೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದರೆ ಅವರ ಜೊತೆಯಲ್ಲಿ ರಾಘವೇಂದ್ರ ಹಿಟ್ನಾಳ ಇದ್ದೇ ಇರುತ್ತಾರೆ. ಈ ಬಾರಿಯೂ ಸಿಎಂ ಆಯ್ಕೆಯ ಗೊಂದಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇದ್ದ ಅಷ್ಟುದಿನಗಳು ರಾಘವೇಂದ್ರ ಹಿಟ್ನಾಳ ಜೊತೆಯಲ್ಲಿಯೇ ಇದ್ದರು. ಹೀಗಾಗಿ, ಕೊಪ್ಪಳದ ಮೇಲೆ ಪ್ರೀತಿ ಇದ್ದ ಸಿದ್ದರಾಮಯ್ಯ ಅವರು ಈಗ ಇಲ್ಲಿಯ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತಮ್ಮ ಮಾನಸಪುತ್ರರಂತೆ ನೋಡಿಕೊಳ್ಳುತ್ತಿದ್ದಾರೆ. ವಿಶೇಷ ಆದ್ಯತೆ ನೀಡುವ ಮೂಲಕ ತಮ್ಮ ಕೊಪ್ಪಳ ಋುಣ ತೀರಿಸುತ್ತಿದ್ದಾರೆ. ಇದನ್ನು ಸ್ವತಃ ಅವರೇ ಸಾರ್ವಜನಿಕ ವೇದಿಕೆಯಲ್ಲಿಯೂ ಹೇಳಿಕೊಂಡಿದ್ದಾರೆ. ಹೀಗಾಗಿ, ಈ ಸಿದ್ದರಾಮಯ್ಯ ಅವರು ಪುನಃ ಸಿಎಂ ಆಗಿ ಆಯ್ಕೆಯಾಗುತ್ತಿರುವುದರಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಸಂಭ್ರಮ ಮನೆ ಮಾಡುವಂತೆ ಮಾಡಿದೆ. ಇಡೀ ಜಿಲ್ಲೆಯಲ್ಲಿ ಹೊಸ ಹೊಸ ಭರವಸೆಗಳು ಮೂಡ ತೊಡಗಿವೆ. ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಬಂಪರ್ ಗ್ಯಾರಂಟಿ ಎನ್ನುವ ಮಾತು ಕೇಳಿ ಬರುತ್ತದೆ.
Koppal assembly constituency: ಸಚಿವ ಸ್ಥಾನಕ್ಕಾಗಿ ಪೈಪೋಟಿ,ಯಾರಿಗೆ ಅದೃಷ್ಟ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಅಂದರೆ ಎಲ್ಲಿಲ್ಲದ ಪ್ರೀತಿ. ಅವರು ಸಿಎಂ ಆಗಿದ್ದ ವೇಳೆಯಲ್ಲಿ ಭರಪೂರ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಿದ್ದರು. ಹೀಗಾಗಿ, ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ.
ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.