Karnataka election results 2023: ರಾಮನಗರದಲ್ಲಿಯೂ ರಾಜಕೀಯ ನೆಲೆ ಕಾಣದ ನಿಖಿಲ್‌ ಕುಮಾರಸ್ವಾಮಿ

By Sathish Kumar KHFirst Published May 13, 2023, 2:08 PM IST
Highlights

ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ರಾಮನಗರ ರಾಜಕಾರಣದ ಕುರುಕ್ಷೇತ್ರದಲ್ಲಿ ಮತದಾರರು ಭರ್ಜರಿ ಸೋಲಿನ ರುಚಿಯನ್ನು ತೋರಿಸಿದ್ದಾರೆ.

ರಾಮನಗರ (ಮೇ 13): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ರಾಮನಗರ ರಾಜಕಾರಣದ ಕುರುಕ್ಷೇತ್ರದಲ್ಲಿ ಮತದಾರರು ಭರ್ಜರಿ ಸೋಲಿನ ರುಚಿಯನ್ನು ತೋರಿಸಿದ್ದಾರೆ. ಜೆಡಿಎಸ್‌ ಭದ್ರಕೋಟೆಯಲ್ಲಿ ದೇವೇಗೌಡರ ಮೂರನೇ ತಲೆಮಾರಿನ ಕುಡಿಯನ್ನು ಕೈಬಿಟ್ಟಿದ್ದಾರೆ.

ರಾಜ್ಯದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ ರಾಮನಗರವನ್ನು ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿಗೆ ಬಿಟ್ಟುಕೊಟ್ಟು ಮುಖ್ಯಮಂತ್ರಿ ಮಾಡಿದ್ದರು. ಇನ್ನು 2ನೇ ತಲೆಮಾರು ಮುಕ್ತಾಯಗೊಳಿಸಿ 3ನೇ ತಲೆಮಾರು ನಿಖಿಲ್‌ ಕುಮಾರಸ್ವಾಮಿಯನ್ನು ರಾಜಕೀಯ ಸಾರಥಿ ಮಾಡಬೇಕು ಎಂಬ ಆಸೆಗೆ ಮತದಾರರು ಭಾರಿ ತಣ್ಣೀರು ಎರಚಿದ್ದಾರೆ. ಇನ್ನು ರಾಮನಗರ ವಿಧಾನಸಭಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದೇನೆ ತನ್ನನ್ನು ಗೆಲ್ಲಿಸಿ ಎಂದು ಚನ್ನಪಟ್ಟಣದಲ್ಲಿ ಮನವಿ ಮಾಡಿದ್ದ ಕುಮಾರಸ್ವಾಮಿಯನ್ನು ಜನರು ಕೈ ಹಿಡಿದಿದ್ದಾರೆ.

Latest Videos

Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು...

ರಾಜಕಾರಣ ಕುರುಕ್ಷೇತ್ರದಲ್ಲಿ ಅಭಿಮನ್ಯವಾದ ನಿಖಿಲ್‌: ಮಹಾಭಾರತದ ಕುರುಕ್ಷೇತ್ರದಲ್ಲಿ ವೀರ ಅಭಿಮನ್ಯು ಕೌರವರ ಚಕ್ರವ್ಯೂಹಕ್ಕೆ ನುಗ್ಗಿ ಸಾವನ್ನಪ್ಪಿದ್ದನು. ಆದರೆ, ರಾಜಕೀಯವೆಂಬ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯು ನಿಖಿಲ್‌ ಕುಮಾರಸ್ವಾಮಿ ಎರಡನೇ ಬಾರಿಯೂ ಸೋಲು ಕಂಡಿದ್ದಾನೆ. ಮಂಡ್ಯದಲ್ಲಿ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್‌ ವಿರುದ್ಧ ಸ್ಪರ್ಧೆ ಮಾಡಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ನಿಖಿಲ್‌ ಕುಮಾರಸ್ವಾಮಿಗೆ, ಸುಮಲತಾಳ ಸ್ವಾಭಿಮಾನ ಹಾಗೂ ಅಂಬರೀಶ್‌ ಸಾವನ್ನಪ್ಪಿದ್ದ ವೇಳೆ ಅನುಕಂಪದ ಅಲೆಯಿಂದ ಸೋಲು ಉಂಟಾಗಿತ್ತು. ಅಲ್ಲಿಯೂ ರಾಜಕೀಯ ನೆಲೆ ಸಿಗದೇ ರಾಮನಗರಕ್ಕೆ ಬಂದ ನಿಖಿಲ್‌ ಕುಮಾರಸ್ವಾಮಿಗೆ ರಾಜ್ಯ ರಾಜಕಾರಣದಲ್ಲಿಯೂ ಕೂಡ ನೆಲೆ ಸಿಗದಂತೆ ಮಾಡಿದ್ದಾರೆ. 

ಕುಮಾರಸ್ವಾಮಿ ಗೆದ್ದರೂ ಸೋತಂತೆ: ಇನ್ನು ರಾಜ್ಯ ರಾಜಕಾರಣದ ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಬಂದರೆ ತಾವೇ ಕಿಂಗ್‌ ಮೇಕರ್‌ ಆಗಬಹುದು ಎಂದು ಭಾವಿಸಿದ್ದ ಕುಮಾರಸ್ವಾಮಿಗೆ ಕಾಂಗ್ರೆಸ್‌ ಬಹುಮತ ಗಳಿಸುವ ಮೂಲಕ ಮೊದಲ ಹಿನ್ನಡೆ ಉಂಟಾಗಿತ್ತು. ಈಗ ಚನ್ನಪಟ್ಟಣದಲ್ಲಿ ತಾವು ಗೆದ್ದರೂ, ತಮ್ಮ ಮಗನನ್ನು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.  ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ(ನಿಖಿಲ್‌ ಕುಮಾರಸ್ವಾಮಿ)ಯನ್ನು ಸೋಲಿಸಿದ್ದರ ಬಗ್ಗೆ ಈಗ ಕಾಂಗ್ರೆಸ್‌ನವರು ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಜೆಡಿಎಸ್‌ ವಿರುದ್ಧ ಈಗಲೂ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಅದರಂತೆ ಷಡ್ಯಂತ್ರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ. 

karnataka election results 2023: ಗೂಗಲ್‌ ಸರ್ಚ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಟಾಪ್‌ ಟ್ರೆಂಡಿಂಗ್‌

ಮುಸ್ಲಿಂ ಮತಗಳೇ ನಿರ್ಣಾಯಕ:  ರಾಜ್ಯದ ಜೆಡಿ​ಎಸ್‌ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ವಿರುದ್ಧ ರಾಮನಗರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಸ್ಪರ್ಧೆ ಮಾಡಿದ್ದರು. ಇನ್ನು ರಾನಗರ ಕ್ಷೇತ್ರದಲ್ಲಿ ಶೇ.30ಕ್ಕೂ ಅಧಿಕ ಮತಗಳು ಮುಸ್ಲಿಂ ಮತಗಳಾಗಿದ್ದು, ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಆದರೆ, ರಾಮನಗರದಲ್ಲಿ ಈಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಮೂಲಕ ಭಾರಿ ತಂತ್ರವನ್ನೇ ರೂಪಿಸಿತ್ತು. ಇನ್ನು ರಾಜ್ಯದಲ್ಲಿ ಭಜರಂಗದಳ ನಿಷೇಧ ಮಾಡುವ ಪ್ರಣಾಳಿಕೆ ಘೋಷಣೆ ಮಾಡಿದ್ದರಿಂದ ಎಲ್ಲ ಮುಸ್ಲಿಂ ಮತಗಳು ಕಾಂಗ್ರೆಸ್‌ ಅಭ್ಯರ್ಥಿಗೆ ಒಲಿದಿವೆ. ಈ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಸೋಲಾಗಿದೆ.

click me!