ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!

By Suvarna NewsFirst Published Apr 12, 2023, 5:32 PM IST
Highlights

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಕ್ಷೇತ್ರಕ್ಕೆ ಟಿಕೆಟ್ ಕಾಯ್ದಿರಿಸಿದ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ್ದ ಜಗದೀಶ್ ಶೆಟ್ಟರ್ ಇದೀಗ ಟಿಕೆಟ್‌ಗಾಗಿ ತೀವ್ರ ಕಸರತ್ತು ಆರಂಭಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಗಿನ ಚರ್ಚೆ ಬಳಿಕ ಇದೀಗ ಜೆಪಿ ನಡ್ಡಾ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಇತ್ತ ಬಿಎಸ್ ಯಡಿಯೂರಪ್ಪ ಶೆಟ್ಟರ್ ಟಿಕೆಟ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನವದೆಹಲಿ(ಏ.12): ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದ ತಲೆನೋವು ಹೆಚ್ಚಾಗಿದೆ. ಬಂಡಾಯ ನಾಯಕರ ಪಟ್ಟಿ ಬೆಳೆಯುುತ್ತಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಟಿಕೆಟ್‌ ಕೈತಪ್ಪುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಂಡಾಯದ ಬಾವುಟ ಹಾರಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಇತ್ತ ತೆರೆಮನರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿರುವ ಜಗದೀಶ್ ಶೆಟ್ಟರ್ ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಚರ್ಚೆ ನಡೆಸಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಗದೀಶ್ ಶೆಟ್ಟರ್‌ಗೆ ಶೇಕಡಾ 99 ರಷ್ಟು ಟಿಕೆಟ್ ಸಿಗುವು ಸಾಧ್ಯತೆ ಇದೆ ಎಂದಿದ್ದಾರೆ.

ಕೆಎಸ್ ಈಶ್ವರಪ್ಪರಿಗೆ ಸೂಚಿಸಿದಂತೆ ಯುವಕರಿಗೆ ಕ್ಷೇತ್ರ ಬಿಟ್ಟುಕೊಡಲು ಜಗದೀಶ್ ಶೆಟ್ಟರ್‌ಗೂ ಸೂಚನೆ ನೀಡಲಾಗಿತ್ತು. ಆದರೆ ವರಿಷ್ಠರ ನಿರ್ಧಾರಕ್ಕೆ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಬಿಜೆಪಿ ವರಿಷ್ಠರಿಗೆ ಕೌಂಟರ್ ಪ್ರಶ್ನೆ ಹಾಕಿದ್ದರು. ಇಷ್ಟೇ ಅಲ್ಲ ಟಿಕೆಟ್ ಸಿಗದಿದ್ದರೆ, ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸೂಚ್ಯವಾಗಿ ತಿಳಿಸಿದ್ದರು. ಹೀಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ ಟಿಕೆಟ್ ಕಾಯ್ದಿರಿಸಲಾಗಿತ್ತು. ಇದರ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಮಾಧ್ಯಮದ ಮುಂದೆ ಅಸಮಾಧಾನ ಹೊರಹಾಕಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಜಗದೀಶ್ ಶೆಟ್ಟರ್‌ಗೆ ದೆಹಲಿಯಿಂದ ಬುಲಾವ್ ನೀಡಿ ಕರೆಯಿಸಿಕೊಳ್ಳಲಾಗಿತ್ತು. ಇದೀಗ ಜೆಪಿ ನಡ್ಡಾ ಮನೆಗೆ ತೆರಳಿ ಮಾತುಕತೆಯಲ್ಲಿ ತೊಡಗಿದ್ದಾರೆ.

Latest Videos

ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಟಿಕೆಟ್ ಕೈತಪ್ಪಿದ ಆರ್ ಶಂಕರ್ ರಾಜೀನಾಮೆ!

ಶೆಟ್ಟರ್‌ಗೆ ಟಿಕೆಟ್ ಅನುಮಾನದ ಮಾತುಗಳು ಕೇಳಿಬರುತ್ತಿದ್ದಂತೆ, ಅವರ ಬೆಂಬಲಿಗರು ಕೂಡ ಪ್ರತಿಭಟನೆಯನ್ನೂ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾತ್ರೋರಾತ್ರಿ ಬೆಂಬಲಿಗರು ಹುಬ್ಬಳ್ಳಿಯಲ್ಲಿ ರಸ್ತೆ ತಡೆಯನ್ನೂ ನಡೆಸಿದ್ದರು. ಮಧ್ಯಾಹ್ನದಿಂದಲೇ ಬೆಂಬಲಿಗರು ಶೆಟ್ಟರ್‌ ಮನೆ ಮುಂದೆಯೇ ಜಮೆಯಾಗಿದ್ದರು. ಶೆಟ್ಟರ್‌ ಕೂಡ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದು ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿತ್ತು. ಮತ್ತೇಲ್ಲಿ ಬಂಡಾಯದ ಕೂಗು ಕೇಳಿ ಬರಬಾರದೆಂಬ ಆತಂಕ ಹೈಕಮಾಂಡ್‌ ಮಟ್ಟದಲ್ಲಿ ಕೇಳಿ ಬಂದಿತ್ತು. ಆದಕಾರಣ ಟಿಕೆಟ್‌ ಘೋಷಣೆ ಮಾಡದೇ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಲು ನಿರ್ಧರಿಸಿದೆ.

ಈ ಸಲ ಕ್ಷೇತ್ರ ತ್ಯಾಗ ಮಾಡಿ. ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಬಿಜೆಪಿ ವರಿಷ್ಠರು ಶೆಟ್ಟರ್‌ಗೆ ಸೂಚನೆ ನೀಡಿದ್ದರು. ಅದಕ್ಕೆ ಶೆಟ್ಟರ್‌ ಅವರು, ನನಗೆ ಟಿಕೆಟ್‌ ನಿರಾಕರಿಸಲು ಕಾರಣವೇನು? ಏನಾದರೂ ಕಪ್ಪು ಚುಕ್ಕೆ ಇದೆಯಾ? ವಯಸ್ಸಾಗಿದೆಯಾ? ಸಮೀಕ್ಷೆಯಲ್ಲಾದರೂ ನೆಗೆಟಿವ್‌ ವರದಿ ಬಂದಿದೆಯಾ? ಎಂದು ಕೇಳಿದ್ದಾರೆ. ನೆಗೆಟಿವ್‌ ರಿಪೋರ್ಚ್‌ ಏನೂ ಬಂದಿಲ್ಲ. ಆದರೆ, ಆರು ಸಲ ಗೆದ್ದಿದ್ದೀರಿ. ನೀವು ಸಿನಿಯರ್‌ ಇದ್ದೀರಿ. ಈ ಸಲ ಹೊಸಬರಿಗೆ ಅವಕಾಶ ಸಿಗಲಿ ಅಂತ ಹೇಳಿದ್ದಾರೆ. ಅದಕ್ಕೆ ಶೆಟ್ಟರ್‌ ಅವರು ಚುನಾವಣೆ ತಯಾರಿ ಮಾಡಿಕೊಂಡಿದ್ದೇನೆ. ಈ ಸಲ ನಾನೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ವರಿಷ್ಠರು, ಚರ್ಚಿಸಿ ತಿಳಿಸುವುದಾಗಿ ತಿಳಿಸಿದ್ದಾರಂತೆ. ಇದಾದ ಬಳಿಕ ಶೆಟ್ಟರ್‌ ಅವರು, ಯಡಿಯೂರಪ್ಪ, ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮೊಬೈಲ್‌ ಮೂಲಕ ಮಾತನಾಡಿದ್ದಾರೆ.
 

click me!