ಶೆಟ್ಟರ್‌, ಸವದಿ ತಪ್ಪು ಹೆಜ್ಜೆ: ವಿಧಾನಸಭಾಧ್ಯಕ್ಷ ಕಾಗೇರಿ ಬೇಸರ

By Kannadaprabha NewsFirst Published Apr 22, 2023, 12:53 PM IST
Highlights

ಜಗದೀಶ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಹಿರಿಯರಾಗಿ ಪಕ್ಷದ ನಿರ್ಣಯ ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕಿತ್ತು. ಪಕ್ಷಕ್ಕೆ ಹಾನಿ ಮಾಡುವ ಕಾರ್ಯಕ್ಕೆ ಮುಂದಾಗಬಾರದಿತ್ತು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು. 

ಶಿರಸಿ (ಏ.22): ಜಗದೀಶ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಹಿರಿಯರಾಗಿ ಪಕ್ಷದ ನಿರ್ಣಯ ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕಿತ್ತು. ಪಕ್ಷಕ್ಕೆ ಹಾನಿ ಮಾಡುವ ಕಾರ್ಯಕ್ಕೆ ಮುಂದಾಗಬಾರದಿತ್ತು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈ ಇಬ್ಬರೂ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿ ಸಂಸ್ಕೃತಿಯಲ್ಲಿ ಬೆಳೆದು ಕಾಂಗ್ರೆಸ್‌ ಸೇರ್ಪಡೆಗೊಂಡಿರುವುದು ನೋವುಂಟು ಮಾಡಿದೆ. ಹಿರಿಯ ನಾಯಕರಾಗಿ ಅವರ ವರ್ತನೆ ಸರಿಯಲ್ಲ ಎಂದರು.

ವಿಧಾನ ಸಭಾಧ್ಯಕ್ಷನಾಗಿ ರಾಜ್ಯದ ಉದ್ದಗಲ ಚುನಾವಣೆ ಸುಧಾರಣೆ ಕುರಿತು ಕಾರ್ಯಕ್ರಮ ನಡೆಸಿದ್ದೇನೆ. ಇಂದಿನ ತಂತ್ರಜ್ಞಾನದ ಕಾರಣದಿಂದಾಗಿ ಚುನಾವಣೆಯಲ್ಲೂ ಹೊಸ ಪ್ರಯೋಗ ಆಗುತ್ತಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಈಗ ಅವಕಾಶ ಮಾಡಿಕೊಡಲಾಗಿದೆ. ಯುವ ಜನತೆ, ಮಹಾನಗರದಲ್ಲಿ ಉದ್ಯೋಗದಲ್ಲಿರುವವರು ಮತದಾನದ ಅವಕಾಶ ಇರುವಲ್ಲಿ ಕಡ್ಡಾಯ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು. ಮತದಾನ ಮಾಡುವುದು ಜವಾಬ್ದಾರಿ ಎಂದರು.

Latest Videos

ಮುಂದುವರಿದ ಡಿಕೆ​ಶಿ ‌ಟೆಂಪಲ್ ರನ್: ರಾಜ್ಯದ ಮುಖ್ಯಮಂತ್ರಿ ಗಾದಿಗಾಗಿ ಈಶ್ವರನಿಗೆ ರುದ್ರಾಭಿಷೇಕ!

ಶಿರಸಿ-ಸಿದ್ದಾಪುರ ಕ್ಷೇತ್ರದ ಜನತೆ ಪ್ರಜ್ಞಾವಂತ ಮತದಾರರಾಗಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಕಾರ್ಯ ನಡೆಸುತ್ತಿದ್ದೇನೆ. ಈ ಬಾರಿ ದಾಖಲೆ ಮತದಿಂದ ಗೆಲ್ಲುವ ವಿಶ್ವಾಸ ಜಾಸ್ತಿ ಆಗುತ್ತಿದೆ. ನರೇಂದ್ರ ಮೋದಿ ಅವರ ಪ್ರಭಾವ, ರಾಜ್ಯ ಸರ್ಕಾರದ ಸಾಧನೆ, ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯ ಜನತೆಯ ಮನಸ್ಸಿನ ಆಳದಲ್ಲಿ ಶಾಶ್ವತವಾಗಿ ಬೇರೂರಿದ ಸ್ಥಿತಿ ಇದೆ. ಕಾರ್ಯಕರ್ತರು ಬೂತ್‌ ಸಮಿತಿ, ಪೇಜ್‌ ಪ್ರಮುಖರ ಮೂಲಕ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ಉಳಿದ ಪಕ್ಷದವರೂ ನನಗೇ ಮತ ಹಾಕುವ ಸಾಧ್ಯತೆ ಕ್ಷೇತ್ರದಲ್ಲಿದೆ. ಕಾಂಗ್ರೆಸ್‌ನಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಬಗ್ಗೆ ಜನತೆಯಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಮೋದಿ, ರಾಜ್ಯ ಸರ್ಕಾರ ಬಗ್ಗೆ ಭರವಸೆ ಇದೆ ಎಂದರು.

ಬಿಜೆಪಿಯ ಗಾಳಿ ಜೋರಾಗಿ ಬೀಸುತ್ತಿದೆ: ಹಳ್ಳಿ ಹಾಗೂ ನಗರದ ಸಮಗ್ರ ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ. ಸುರಕ್ಷತೆಯ ಬದುಕಿಗೆ, ನೆಮ್ಮದಿಯ ಕಾರಣಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗಾಳಿ ಜೋರಾಗಿ ಬೀಸುತ್ತಿದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಟಗುಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಅಭಿವೃದ್ದಿಗೆ ಕಂಡ ಕನಸು ನನಸು ಮಾಡಲು ಯುವ ಪಡೆ ಹೆಚ್ಚೆಚ್ಚು ಕೈ ಜೋಡಿಸುತ್ತಿದೆ. ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿಯೂ ಕಳೆದ ಮೂರು ವರ್ಷದಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 

ಸುಳ್ಯದಲ್ಲಿ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಪಾಸಾದ ತಾಯಿ ಮಗಳು!

ಅಭಿವೃದ್ದಿ ಎಂಬುದು ನಿರಂತರವಾಗಿದ್ದು, ಮುಂದೆ ಕೂಡ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಬಿಜೆಪಿ ಎಂದರೆ ಸರ್ವ ಜನ, ಸರ್ವ ಹಿತ ಪಕ್ಷ. ಅಭಿವೃದ್ದಿಯೇ ಮೂಲ ಮಂತ್ರ. ನಿರ್ಭೀತ ಬದುಕು, ರೈತಾಪಿ ವರ್ಗದ ನೆಮ್ಮದಿಗಾಗಿ ಬಿಜೆಪಿ ಕಂಕಣ ತೊಟ್ಟಿದೆ ಎಂದರು. ಈ ವೇಳೆ ಗ್ರಾಮೀಣ ಮಂಡಳದ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ, ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ, ಇಟಗುಳಿ ಪಂಚಾಯಿತಿ ಅಧ್ಯಕ್ಷ ರಮೇಶ, ಗ್ರಾಪಂ ಸದಸ್ಯರಾದ ಶ್ರೀಪತಿ ಹೆಗಡೆ, ರಾಮಾ ಪೂಜಾರಿ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!