ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ತಲೆನೋವಾದ ಪಕ್ಷಾಂತರಿಗಳು!

Published : Feb 24, 2023, 09:59 AM IST
ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ತಲೆನೋವಾದ ಪಕ್ಷಾಂತರಿಗಳು!

ಸಾರಾಂಶ

ಮುಂಬರುವ ವಿಧಾಸಭಾ  ಚುನಾವಣೆಯಲ್ಲಿ ಕಾಫಿ ನಾಡಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಸ್ಪರ್ಧಾಳುಗಳ ಚಿತ್ರಣ ಸ್ಪಷ್ಟವಾಗಿದೆ. ಆದರೆ, ಕಾಂಗ್ರೆಸ್‌ ಪಕ್ಷ ಮಾತ್ರ ತನ್ನ ಅಭ್ಯರ್ಥಿಗಳ ಸುಳಿವಿನ ಒಂದು ಎಳೆಯೂ ಕೂಡ ಬಹಿರಂಗವಾಗಿ ತೋರಿಸುತ್ತಿಲ್ಲ.

ಆರ್‌. ತಾರಾನಾಥ್‌

ಚಿಕ್ಕಮಗಳೂರು (ಫೆ.24) : ಮುಂಬರುವ ವಿಧಾಸಭಾ  ಚುನಾವಣೆಯಲ್ಲಿ ಕಾಫಿ ನಾಡಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಸ್ಪರ್ಧಾಳುಗಳ ಚಿತ್ರಣ ಸ್ಪಷ್ಟವಾಗಿದೆ. ಆದರೆ, ಕಾಂಗ್ರೆಸ್‌ ಪಕ್ಷ ಮಾತ್ರ ತನ್ನ ಅಭ್ಯರ್ಥಿಗಳ ಸುಳಿವಿನ ಒಂದು ಎಳೆಯೂ ಕೂಡ ಬಹಿರಂಗವಾಗಿ ತೋರಿಸುತ್ತಿಲ್ಲ.

ಕಾಂಗ್ರೆಸ್‌ ಪಕ್ಷ(Congress party)ದ ಟಿಕೆಟ್‌ ಕೋರಿ ಜಿಲ್ಲೆಯ ಐದು ಕ್ಷೇತ್ರಗಳ ಆಕಾಂಕ್ಷಿಗಳು ಈಗಾಗಲೇ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಲಾಬಿ ಕೂಡ ಮುಂದುವರೆಸಿದ್ದಾರೆ. ಆದರೆ, ಇತ್ತೀಚೆಗೆ ಪಕ್ಷದಲ್ಲಿ ನಡೆದಿರುವ ಪಕ್ಷಾಂತರ ಬೆಳವಣಿಗೆ ಟಿಕೆಟ್‌ ಆಕಾಂಕ್ಷಿಗಳಿಗೆ ತಲೆನೋವಾಗಿದೆ. ಚಿಕ್ಕಮಗಳೂರು ಹಾಗೂ ಕಡೂರು ಕ್ಷೇತ್ರಗಳಲ್ಲಿ ಬಂದ ಪಕ್ಷಾಂತರ ಅಲೆ ಕಾಂಗ್ರೆಸ್‌ ಪಕ್ಷದ ಮಡಿಲಲ್ಲಿ ಗೊಂದಲ, ಟಿಕೆಟ್‌ ಯಾರಿಗೆ ಎಂಬ ಹೊಸ ಪ್ರಶ್ನೆ ಹುಟ್ಟು ಹಾಕಿದೆ. ಬರೀ ಇಷ್ಟೆಅಲ್ಲಾ ಸಾರ್ವಜನಿಕ ವಲಯದಲ್ಲೂ ಮೆಗಾ ಸಿರಿಯಲ್‌ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ.

Pancharatna rathayatre:: ಮೂರು ತಿಂಗಳು ತಡೀರಿ ಸೈಕಲ್ ಕೊಡ್ತೇನೆ; ಶಾಲಾ ಮಕ್ಕಳಿಗೆ ಮಾತುಕೊಟ್ಟ ಕುಮಾರಣ್ಣ

ಆಗಿದ್ದೇನು ?: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikmagalur Assembly Constituency)ದಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೋರಿ ಡಾ.ಡಿ.ಎಲ್‌.ವಿಜಯಕುಮಾರ್‌, ರೇಖಾ ಹುಲಿಯಪ್ಪಗೌಡ, ಎ.ಎನ್‌. ಮಹೇಶ್‌, ಸತೀಶ್‌ ಮಹಡಿಮನೆ, ಬಿ.ಎಚ್‌. ಹರೀಶ್‌, ನಯಾಜ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಸ್‌.ಆನಂದ್‌, ಕಡೂರು ಸಿ. ನಂಜಪ್ಪ, ಕೆ.ಎಂ. ವಿನಾಯಕ, ತೋಟದಮನೆ ಮೋಹನ್‌, ಸೋಮಶೇಖರ್‌, ಎಂ.ಎಚ್‌. ಚಂದ್ರಪ್ಪ, ಶರತ್‌ ಕೃಷ್ಣಮೂರ್ತಿ ಅರ್ಜಿ ಹಾಕಿದ್ದಾರೆ.

ಎಚ್‌.ಡಿ. ತಮ್ಮಯ್ಯ ಎಂಟ್ರಿ: ಪಕ್ಷದ ಟಿಕೆಟ್‌ ಕೋರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 6 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆ ನಂತರದಲ್ಲಿ ಪಕ್ಷದಲ್ಲಿ ಕೆಲವು ನಿರೀಕ್ಷಿತ, ಮತ್ತೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದರಿಂದ ಟಿಕೆಟ್‌ ಆಕಾಂಕ್ಷಿಗಳ ಲೆಕ್ಕಾಚಾರ ತಲೆ ಕೆಳಗಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 6 ಜನ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದೇವೆ. ಟಿಕೆಟ್‌ ಯಾರಿಗೆ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆಂದು ಅರ್ಜಿ ಸಲ್ಲಿಸಿದ ದಿನದಿಂದ ಇತ್ತೀಚಿನ ವರೆಗೆ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರದ ವಾರ್ಡ್‌ವಾರು ಸಭೆಯನ್ನು ನಡೆಸಿದ್ದರು.

ಈ ಸಿದ್ದತೆ ನÜಡುವೆ ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ, ಸಿ.ಟಿ. ರವಿ(CT Ravi) ಅವರ ಆಪ್ತ ಎಚ್‌.ಡಿ. ತಮ್ಮಯ್ಯ ಬಿಜೆಪಿಗೆ ಗುಡ್‌ ಬೈ ಹೇಳುತ್ತಿದ್ದಂತೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ವಾತಾವರಣ ಬದಲಾಯಿತು. ಬರೀ ಇಷ್ಟೆಮಾತ್ರವಲ್ಲ, ಅರ್ಜಿ ಸಲ್ಲಿಸಿರುವ ಟಿಕೆಟ್‌ ಆಕಾಂಕ್ಷಿಗಳಲ್ಲಿ ಗೊಂದಲ ಉಂಟಾಯಿತು. ತೆರೆಯ ಮರೆಯಲ್ಲಿ ಸಭೆಯನ್ನು ಕೂಡ ನಡೆಸಿದರು. ತಮ್ಮಯ್ಯ ಅವರು ಫೆ. 19 ರಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ಇನ್ನಷ್ಟುಚುರುಕುಗೊಳಿಸಿದರು, ಸಮಾನ ಮನಸ್ಕರೊಂದಿಗೆ ಪಕ್ಷದ ನಾಯಕರನ್ನು ಭೇಟಿ ಮಾಡಲು ಆರಂಭಿಸಿದರು. ಈ ಪ್ರಕ್ರಿಯೆ ಈಗಲೂ ಕೂಡ ಮುಂದುವರೆದಿದೆ.

ವೈಎಸ್‌ವಿ ದತ್ತ : ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೋರಿ 7 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲೂ ಕೂಡ ಆಕಾಂಕ್ಷಿಗಳ ನಡುವೆ ಟಿಕೇಟ್‌ಗಾಗಿ ಫೈಟ್‌(Ticket fight) ನಡೆಯುತ್ತಿತ್ತು. ಈ ಬೆಳವಣಿಗೆಯ ನಡುವೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಗರಡಿಯಲ್ಲಿ ಪಳಗಿದ, ಇತ್ತೀಚೆಗೆ ಜೆಡಿಎಸ್‌ ಪರಿವಾರಕ್ಕೆ ಗುಡ್‌ ಬೈ ಹೇಳಿರುವ ಮಾಜಿ ಶಾಸಕ ವೈಎಸ್‌ವಿ ದತ್ತ(YSV Datta) ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು, ಹೀಗಾಗಿ ಕಡೂರು ಕ್ಷೇತ್ರದಲ್ಲಿ ರಾಜಕೀಯ ವಿಶ್ಲೇಷಣೆ ಏರುಪೇರಾಯಿತು.

ಯಾವುದೇ ಷರತ್ತುಗಳು ಇಲ್ಲದೆ ಕಾಂಗ್ರೆಸ್‌ ಸೇರುತ್ತಿರುವುದಾಗಿ ಈಗಾಗಲೇ ವೈಎಸ್‌ವಿ ದತ್ತ ಹೇಳಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆ ಟಿಕೆಟ್‌ ಆಕಾಂಕ್ಷಿಗಳಿಗೆ ಮೇಲ್ನೋಟಕ್ಕೆ ಸಮಧಾನ ತಂದಿತಾದರೂ, ಆಂತರಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪಕ್ಷ ಸಂಘಟನೆಯನ್ನು ಒಂದು ಬದಿಗೆ ಸರಿಸಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಕೆಲವರು ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.

ಆಂತರಿಕ ಸರ್ವೆ: ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮೊದಲು ಹಾಗೂ ನಂತರದಲ್ಲಿ ಎರಡು ಬಾರಿ ಪಕ್ಷ ಕ್ಷೇತ್ರವಾರು ಸರ್ವೆಯನ್ನು ನಡೆಸಿತ್ತು. ಆಕಾಂಕ್ಷಿಗಳ ಕುರಿತು ಪಕ್ಷದ ಮುಖಂಡರ ಅಭಿಪ್ರಾಯವನ್ನು ಸಂಗ್ರಹ ಮಾಡಿತ್ತು. ಈ ಪ್ರಕ್ರಿಯೆ ಮುಗಿದ ಬಳಿಕ ಚಿಕ್ಕಮಗಳೂರು ಹಾಗೂ ಕಡೂರು ಕ್ಷೇತ್ರದಲ್ಲಿ ಪಕ್ಷಾಂತರ ಅಲೆ ಬೀಸಿದ್ದರಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ 6 ಮಂದಿಯ ಜತೆಗೆ ಎಚ್‌.ಡಿ.ತಮ್ಮಯ್ಯ ಹಾಗೂ ಎ.ವಿ. ಗಾಯತ್ರಿ ಶಾಂತೇಗೌಡ ಒಳಗೊಂಡಂತೆ 8 ಮಂದಿಯ ಬಗ್ಗೆ ಜನಾಭಿಪ್ರಾಯದ ಸರ್ವೆ ನಡೆಸಲಾಗುತ್ತಿದೆ. ಕಡೂರು ಕ್ಷೇತ್ರದಲ್ಲಿ 7 ಮಂದಿ ಟಿಕೆಟ್‌ ಆಕಾಂಕ್ಷಿಗಳ ಜತೆಗೆ ವೈಎಸ್‌ವಿ ದತ್ತ ಅವರ ಹೆಸರನ್ನು ಸೇರಿಸಿಕೊಂಡು ಸರ್ವೆ ನಡೆಸಲಾಗುತ್ತಿದೆ.

Shivaji Maharaj statue: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಾಕ್ ಕೊಟ್ಟ  ರಮೇಶ್ ಜಾರಕಿಹೊಳಿ!

ಈ ಸರ್ವೆ ವರದಿಯನ್ನು ಆಧರಿಸಿ ಟಿಕೆಟ್‌ ನೀಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ಲಾಬಿ ಮಾಡಲು ಬರುವವರಿಗೆ ಹೇಳಿ ಕಳುಹಿಸಿದ್ದಾರೆಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಒಟ್ಟಾರೆ, ಚಿಕ್ಕಮಗಳೂರು ಹಾಗೂ ಕಡೂರು ಕ್ಷೇತ್ರಗಳಲ್ಲಿ ಪಕ್ಷಾಂತರಿಗಳು, ಟಿಕೆಟ್‌ ಆಕಾಂಕ್ಷಿಗಳ ನಿದ್ದೆಗೆಡಿಸಿದ್ದಾರೆ.

ಯಾರಿಗೆ ಟಿಕೆಟ್‌ ಕೊಟ್ರು ಕೆಲಸ ಮಾಡ್ತೀನಿ, ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಯಾವುದೇ ಕಂಡಿಷನ್‌ ಇಲ್ಲ. ಸರ್ವೆ ಮಾಡಿ, ಜನಾಭಿಪ್ರಾಯ ಯಾರ ಕಡೆ ಇದಿಯೋ ಅವರಿಗೆ ಟಿಕೇಟ್‌ ಕೊಟ್ಟರೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು.

- ಎಚ್‌.ಡಿ. ತಮ್ಮಯ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ