
ವರದಿ: ಶರಣಯ್ಯ ಹಿರೇಮಠ, ಕಲಬುರಗಿ
ಕಲಬುರಗಿ (ಏ.14): ಪ್ರಿಯಾಂಕ್ ಖರ್ಗೆ ಅವರನ್ನ ಶತಾಯಗತಾಯವಾಗಿ ಸೋಲಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಬಿಜೆಪಿ ಕಾರ್ಯಕರ್ತರಲ್ಲಿಯೇ ಇದೀಗ ಒಡಕು ಮೂಡಿದೆ. ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ ರಾಠೋಡ್ ಗೆ ಟಿಕೆಟ್ ಸಿಗುತ್ತಿದ್ದಂತೆಯೇ ಚಿತ್ತಾಪುರ ಬಿಜೆಪಿಯಲ್ಲಿ ಬಂಡಾಯ ಭುಗಿಲೆತ್ತಿದೆ. ಕಲಬುರಗಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ, ಅಫಜಲಪುರ ಮತ್ತು ಜೇವರ್ಗಿನಲ್ಲಿ ಬಿಜೆಪಿಗೆ ಈಗಾಗಲೇ ಬಂಡಾಯ ಎದುರಾಗಿದೆ. ಅಫಜಲಪೂರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಸ್ವತ ಅವರ ತಮ್ಮ ನಿತಿನ್ ಗುತ್ತೇದಾರ ತೊಡೆತಟ್ಟಿದ್ದಾರೆ. ಅಷ್ಟೇ ಅಲ್ಲದೇ ಅವರು ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಹ ಸಲ್ಲಿಸಿದ್ದಾರೆ. ಇನ್ನೊಂದೆಡೆ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಅಧಿಕೃತ ಅಭ್ಯರ್ಥಿ ಶಿವರಾಜ್ ಪಾಟೀಲ್ ರದ್ದೇವಾಡಗಿ ವಿರುದ್ಧ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಸಿಡಿದೆದ್ದು ನಿಂತಿದ್ದು, ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿ ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿಗೆ ಮೂರನೇ ಬಂಡಾಯ ಕ್ಷೇತ್ರ ಚಿತ್ತಾಪೂರ: ಜೇವರ್ಗಿ ಮತ್ತು ಅಫಜಲಪೂರದಲ್ಲಿನ ಬಂಡಾಯದ ನಂತರ ಇದೀಗ ಬಿಜೆಪಿಗೆ ಚಿತ್ತಾಪೂರದಲ್ಲಿಯೂ ಬಂಡಾಯ ಸೃಷ್ಟಿಯಾಗಿದೆ. ಚಿತ್ತಾಪೂರದಲ್ಲಿ ಬಿಜೆಪಿ ಮಣಿಕಂಠ ರಾಠೋಡಗೆ ಟಿಕೆಟ್ ನೀಡಿದೆ. ಅಲ್ಲಿ, ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ವಿರುದ್ದ ಬಂಡಾಯ ಸಾರಲು ಸಜ್ಜಾಗಿದ್ದಾರೆ. ಚಿತ್ತಾಪೂರದಲ್ಲಿ ಪ್ರಭಾವಿ ನಾಯಕರಾಗಿರುವ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಹಾಗೂ ಇನ್ನೊಬ್ಬ ಸ್ಥಳಿಯ ಪ್ರಭಾವಿ ನಾಯಕ ಬಾಸರೆಡ್ಡಿ ಅವರ ಬೆಂಬಲ ಅರವಿಂದ ಚವ್ಹಾಣ ಅವರಿಗೆ ಇದೆ. ಮಣಿಕಂಠ ರಾಠೋಡ್ ಗೆ ನೀಡಲಾಗಿರುವ ಟಿಕೆಟ್ ಪುನ ಪರಾಮರ್ಶೆ ನಡೆಸಿ ಅರವಿಂದ ಚವ್ಹಾಣಗೆ ನೀಡಬೇಕು ಎಂದು ಚಿತ್ತಾಪೂರದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.
ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾಯಣ
ಚಿತ್ತಾಪೂರದಲ್ಲಿ ಬಿಜೆಪಿ ವರ್ಚಸ್ ಬಿಜೆಪಿ: ಚಿತ್ತಾಪೂರ ಬಿಜೆಪಿ ಟಿಕೆಟ್ ಮಣಿಕಂಠ ರಾಠೋಡ್ ಗೆ ಸಿಗುತ್ತಿದ್ದಂತೆಯೇ ಚಿತ್ತಾಪೂರ ಬಿಜೆಪಿ ಎರಡು ಗುಂಪಾಗಿದೆ. ಮಣಿಕಂಠ ರಾಠೋಡ್ ಬೆಂಬಲಿಗರ ಒಂದು ಗುಂಪು ಮತ್ತು ಅರವಿಂದ ಚವ್ಹಾಣ ಬೆಂಬಲಿಗರ ಇನ್ನೊಂದು ಗುಂಪಿನ ನಡುವೆ ಪರಸ್ಪರ ಸಂಘರ್ಷ ನಡೆಯುತ್ತಿವೆ.
ಬಿಜೆಪಿ ಸಭೆಯಲ್ಲಿಯೇ ಮಾರಾಮಾರಿ: ಚಿತ್ತಾಪೂರದ ಬಾಪುಗೌಡ ಕಲ್ಯಾಣ ಮಂಟಪದಲ್ಲಿಂದು ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಗಮಿಸುತ್ತಿದ್ದಂತೆಯೇ ಅರವಿಂದ ಚವ್ಹಾಣ ಬೆಂಬಲಿಗರ ಆಕ್ರೋಶದ ಕಟ್ಟೆ ಒಡೆಯಿತು. ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ದ ಘೋಷಣೆಗಳು ಮೊಳಗಿದವು. ಅರವಿಂದ ಅರವಿಂದ ಎನ್ನುವ ಘೋಷಣೆ ಮೊಳಗಿಸುವ ಮೂಲಕ ಮಣಿಕಂಠ ರಾಠೋಡಗೆ ತೀವ್ರ ಮುಜುಗರ ಉಂಟು ಮಾಡಿದರು.
ಪಂಚಾಯತ್ ಹೆಸರು ಹೇಳಿ ಟಿಕೆಟ್ ಪಡೆಯಿರಿ: ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅರವಿಂದ ಚವ್ಹಾಣ ನೆಂಬಲಿಗರು,, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಣಿಕಂಠ ರಾಠೋಡ್ ಗೆ ಮುತ್ತಿಗೆ ಹಾಕಿ, ಚಿತ್ತಾಪೂರ ಕ್ಷೇತ್ರದಲ್ಲಿನ ಗ್ರಾಮ ಪಂಚಾಯತಗಳ ಹೆಸರು ಹೇಳಿ ಟಿಕೆಟ್ ಪಡೆಯಿರಿ ಎಂದು ಸವಾಲು ಹಾಕಿದರು. ಈ ಹಂತದಲ್ಲಿ ಅರವಿಂದ್ ಚೌಹಾಣ್ ಬೆಂಬಲಿಗರು ಮತ್ತು ಮಣಿಕಂಠ ರಾಠೋಡ್ ಬೆಂಬಲಿಗರ ನಡುವೆ ಗಲಾಟೆ ವಿಕೋಪಕ್ಕೆ ಹೋಗಿ ಕೈ ಮೇಲಾಯಿಸುವ ಹಂತ ತಲುಪಿತು. ಈ ಗಲಾಟೆಯಲ್ಲಿ ಅರವಿಂದ್ ಚವಾಣ್ ಅವರ ಬೆಂಬಲಿಗ ಮತ್ತು ವಾಡಿ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ ಕಾಲಿಗೆ ಗಾಯ ರಕ್ತ ಸುರಿಯುವಂತಾಯಿತು. ಈ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಣಿಕಂಠ ರಾಠೋಡರದ್ದು ರೌಡಿ ಬ್ಯಾಗ್ರೌಂಡ್: ಪ್ರಿಯಾಂಕ ಖರ್ಗೆ ವಿರುದ್ಧ ಅವರನ್ನು ಪ್ರಿಯಾಂಕ ಖರ್ಗೆ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ, ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸುವ ಭರದಲ್ಲಿ ರೌಡಿ ಬ್ಯಾಗ್ರೌಂಡ್ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ನೀಡಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ಕಲ್ಬುರ್ಗಿಯ ಹಿಂದಿನ ಪೊಲೀಸ್ ಕಮಿಷನರ್ ಏನ ರವಿಕುಮಾರ್ ಇವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಮಣಿಕಂಠ ರಾಠೋಡ ಈ ಆದೇಶದ ವಿರುದ್ದ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಗಡಿಪಾರು ಆದೇಶ ರದ್ದುಪಡಿಸಿತ್ತು. ರೌಡಿ ಬ್ಯಾಗ್ರೌಂಡ್ ಹಿನ್ನೆಲೆಯ ಮಣಿಕಂಠ ರಾಠೋಡ್ ಗಿಂತ ಸಜ್ಜನ ರಾಜಕಾರಣಿ ಅರವಿಂದ ಚವ್ಹಾಣ ಗೆ ಟಿಕೆಟ್ ನೀಡಬೇಕು ಎನ್ನುವುದು ಬಿಜೆಪಿಯ ಸ್ಥಳಿಯ ನಾಯಕರು ಮತ್ತು ಕಾರ್ಯಕರ್ತರ ಆಗ್ರಹವಾಗಿದೆ.
ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್
ಸ್ವತಂತ್ರವಾಗಿ ಸ್ಪರ್ದೆಗೆ ಅರವಿಂದ ಚವ್ಹಾಣ ಸಜ್ಜು: ಈ ನಡುವೆ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಜಿಪಂ ಸದಸ್ಯ ಅರವಿಂದ್ ಚವಾಣ್ ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ರಾಜಕೀಯ ಗುರುಗಳಾದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಅವರ ಬೆಂಬಲ ಪಡೆದು ಸ್ವತಂತ್ರ ಅಭರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಂಡಾಯ ಶಮನವಾಗದೇ ಅರವಿಂದ ಚವ್ಹಾಣ ಸ್ವತಂತ್ರವಾಗಿ ಸ್ಪರ್ದಿಸಿದರೆ, ಲಂಬಾಣಿ ಸಮುದಾಯದ ಮತಗಳು ವಿಭಜನೆಯಾಗಿ ಮತ್ತೆ ಪ್ರೀಯಾಂಕ್ ಖರ್ಗೆ ಅವರಿಗೆ ಅನುಕೂಲ ಆಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.