ಕೆಆರ್‌ಪಿಪಿ ಸೇರ್ಪಡೆ ಆಗ್ತಾರಾ ಎಚ್.ಆರ್.ಶ್ರೀನಾಥ್: ಭುಗಿಲೆದ್ದ ಭಿನ್ನಮತ ನೋಡಿ ಗೇಮ್ ಶುರುಮಾಡಿದ ಜನಾರ್ದನ ರೆಡ್ಡಿ

By Govindaraj SFirst Published Apr 9, 2023, 10:35 AM IST
Highlights

ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿರುವ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್ ಇದೀಗ ಕೆಆರ್‌ಪಿಪಿ ಪಕ್ಷಕ್ಕೆ ಸೇರ್ಪಡೆ ಆಗ್ತಾರಾ ಎಂಬ ಅನುಮಾನ ಶುರುವಾಗಿದೆ.

ಕೊಪ್ಪಳ (ಏ.09): ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿರುವ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್ ಇದೀಗ ಕೆಆರ್‌ಪಿಪಿ ಪಕ್ಷಕ್ಕೆ ಸೇರ್ಪಡೆ ಆಗ್ತಾರಾ ಎಂಬ ಅನುಮಾನ ಶುರುವಾಗಿದೆ. ಹೌದು! ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ ನೋಡಿ ಜನಾರ್ದನ ರೆಡ್ಡಿ ಗೇಮ್ ಶುರು ಮಾಡಿದ್ದು, ರಾತ್ರೋರಾತ್ರಿ ಕಾಂಗ್ರೆಸ್ ಹಿರಿಯ ಮುಖಂಡರ ಮನೆಗೆ ಭೇಟಿ ನೀಡಿದ್ದು, ಶ್ರೀನಾಥ್ ಕಾಂಗ್ರೆಸ್‌ ಬಿಟ್ಟು ಫುಟ್ಬಾಲ್ ಹಿಡಿತಾರಾ ಎಂಬುದನ್ನು ಕಾದು ನೋಡಬೇಕಿದೆ. ಗಂಗಾವತಿಯಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ,ಮಾಜಿ ಸಂಸದ ಹೆಚ್.ಜಿ.ರಾಮುಲು, ಹೆಚ್.ಆರ್.ಶ್ರೀನಾಥ್ ಅವರನ್ನು ರೆಡ್ಡಿ ಭೇಟಿ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾಗೊಂಡಿರುವ ಹೆಚ್.ಆರ್.ಶ್ರೀನಾಥ್, ಪರೋಕ್ಷವಾಗಿ ರೆಡ್ಡಿ ಕಡೆ ಬ್ಯಾಟಿಂಗ್ ಮಾಡಿದ್ದಾರೆ. ನಮಗೆ ಟಿಕೆಟ್ ಸಿಗದಿದ್ದರೆ ರೆಡ್ಡಿ ಗೆಲ್ಲಬಹುದು. ಹಿಂದಿನ ಇಂದಿರಾಗಾಂಧಿ ಕಾಂಗ್ರೆಸ್ ಇಲ್ಲ. ಇದು ಸಿದ್ದರಾಮಯ್ಯ ಕಾಂಗ್ರೆಸ್ ಎಂದಿದ್ದು, ಇದೇ 19 ರ ತನಕ ಗಡುವು ನೀಡಿದ್ದಾರೆ. ಇನ್ನೂ ಹಿರಿಯರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಇದು ಸೌಹಾರ್ಧಯುತ ಭೇಟಿ, ಕೆಆರ್‌ಪಿಪಿಗೆ ಆಹ್ವಾನ ಇಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದು, ರೆಡ್ಡಿ ಹಾಗೂ ಎಚ್.ಆರ್.ಶ್ರೀನಾಥ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

Latest Videos

ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿಗೆ ವೇಗ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಶ್ರೀನಾಥ ಮನೆಗೆ ಬಿಜೆಪಿಗರ ದೌಡು: ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿರುವ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ನಿವಾಸಕ್ಕೆ ಗಂಗಾವತಿ ಹಾಗೂ ಕನಕಗಿರಿ ಕ್ಷೇತ್ರದ ಶಾಸಕರು ಭೇಟಿ ನೀಡಿ ಬೆಂಬಲಿಸುವಂತೆ ಕೋರಿದರು. ಭಿನ್ನಮತದಿಂದ ಕಾಂಗ್ರೆಸ್‌ ವರಿಷ್ಠರ ಮೇಲೆ ಹರಿಹಾಯುತ್ತಿರುವ ಶ್ರೀನಾಥ ನಡೆಯನ್ನು ಗಮನಿಸಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಸರತಿಯಲ್ಲಿ ನಿಂತು ಭೇಟಿ ನೀಡಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

ಶಾಸಕ ಪರಣ್ಣ ಮುನವಳ್ಳಿ ಅವರು ಮಾಜಿ ಸಂಸದ ಎಚ್‌.ಜಿ. ರಾಮುಲು ಮತ್ತು ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಅವರ ಜತೆ ಪ್ರತ್ಯೇಕವಾಗಿ 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನಕಗಿರಿ ಕ್ಷೇತ್ರದಲ್ಲಿ ನಿಮ್ಮ ಸಮುದಾಯದವರು ಅಧಿಕವಾಗಿದ್ದು, ಬಿಜೆಪಿ ಬೆಂಬಲಿಸುವಂತೆ ಬೆಂಬಲಿಗರಿಗೆ ಸೂಚಿಸಬೇಕು ಎಂದು ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ. ವರಿಷ್ಠರು ಟಿಕೆಟ್‌ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಈಗ ಯಾವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಶ್ರೀನಾಥ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿಗೆ ಹಲವು ಹಳ್ಳಿ ಸೇರಿಸಿದ್ದಕ್ಕೆ ಈಗ ಡಾಂಬರೀಕರಣ: ಎಚ್‌.ಡಿ.ಕುಮಾರಸ್ವಾಮಿ

ದೌಡಾಯಿಸಿದ ಬಿಜೆಪಿಗರು: ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿದ್ದ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ನಿವಾಸಕ್ಕೆ ಬಿಜೆಪಿ ಮುಖಂಡರು ದೌಡಾಯಿಸಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಭೇಟಿ ಆನಂತರ ಇನ್ನೋರ್ವ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಕಳಕನಗೌಡ ಹಾಗೂ ಬಿಜೆಪಿ ಸೇರ್ಪಡೆ ಆಗಲಿರುವ ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸೇರಿದಂತೆ ಪಂಚಮಸಾಲಿ ಸಮುದಾಯದ ಮುಖಂಡರು ಮಾಜಿ ಸಂಸದ ಎಚ್‌.ಜಿ. ರಾಮುಲು ಮತ್ತು ಎಚ್‌.ಆರ್‌. ಶ್ರೀನಾಥ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!