
ಗುಂಡ್ಲುಪೇಟೆ/ಹಾಸನ/ಹುಬ್ಬಳ್ಳಿ (ಏ.24): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಮೈಸೂರು, ಚಾಮರಾಜನಗರ, ಹಾಸನ, ಹುಬ್ಬಳ್ಳಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಗೆ ಭೇಟಿ ನೀಡಲಿದ್ದು, ರೋಡ್ ಶೋ ಹಾಗೂ ಬಿಜೆಪಿ ನಾಯಕರ ಜತೆಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ 9.40ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಅವರು, ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆಯುವರು. ಮತ್ತೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಗುಂಡ್ಲುಪೇಟೆಗೆ ತೆರಳುವರು.
ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು, ದೇವರಾಜು ಅರಸು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ನಿಂದ ಮೈಸೂರು-ಊಟಿ ಹೆದ್ದಾರಿಯಲ್ಲಿ ಹಳೇ ಬಸ್ ನಿಲ್ದಾಣದವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವರು, ಮಧ್ಯಾಹ್ನ 12.40ಕ್ಕೆ ಗುಂಡ್ಲುಪೇಟೆಯ ತಾತ್ಕಾಲಿಕ ಹೆಲಿಪ್ಯಾಡ್ನಿಂದ ನೇರವಾಗಿ ಹಾಸನ ಜಿಲ್ಲೆ ಆಲೂರಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಪರ ಮಧ್ಯಾಹ್ನ 2.25 ರಿಂದ 3.25ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಸಂಜೆ 3.35ಕ್ಕೆ ಅಲ್ಲಿಂದ ಹೊರಟು ಮೈಸೂರು ವಿಮಾನ ನಿಲ್ದಾಣದ ಮೂಲಕ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುವರು.
ನಾನು ಲಿಂಗಾಯತ ವಿರೋಧಿ ಅಲ್ಲ: ಸಿದ್ದರಾಮಯ್ಯ
ಹುಬ್ಬಳ್ಳಿಯಲ್ಲೇ ರಾತ್ರಿ ವಾಸ್ತವ್ಯ ಹೂಡಲಿರುವ ಅವರು, ಖಾಸಗಿ ಹೋಟೆಲ್ನಲ್ಲಿ ಒಂದು ಗಂಟೆಗೂ ಹೆಚ್ಚು ಗಂಟೆ ಕಾಲ ಪಕ್ಷದ ಪ್ರಮುಖರೊಂದಿಗೆ ಆಂತರಿಕ ಸಭೆ ನಡೆಸಲಿರುವರು. ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಕ್ಷದ ಅಭ್ಯರ್ಥಿಗಳು ಸೇರಿ ಹಲವು ಪ್ರಮುಖರು ಈ ವೇಳೆ ಪಾಲ್ಗೊಳ್ಳುವರು. ನಾಳೆ ರಬಕವಿಯಲ್ಲಿ ಸಮಾವೇಶ: ಸೋಮವಾರ ರಬಕವಿಯ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಬಿಜೆಪಿ ಬೃಹತ್ ಬಹಿರಂಗ ಸಭೆಯಲ್ಲಿ ಶಾ ಪಾಲ್ಗೊಳ್ಳಲಿದ್ದಾರೆ.
ನಾಳೆ ರಬಕವಿಗೆ ಅಮಿತ್ ಶಾ ಆಗಮನ: ಬಿಜೆಪಿ ಬೃಹತ್ ಬಹಿರಂಗ ಸಭೆ ಏ.25ರಂದು ಬೆಳಿಗ್ಗೆ 10 ಗಂಟೆಗೆ ರಬಕವಿಯ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ತೇರದಾಳ ಬಿಜೆಪಿ ಕ್ಷೇತ್ರ ವೀಕ್ಷಕ ಅರುಣ ಶಹಾಪುರ ತಿಳಿಸಿದರು. ಭಾನುವಾರ ಬನಹಟ್ಟಿಯ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಬಕವಿಯ ಹಜಾರೆ ಟೆಕ್ಸಟೈಲ್ಸ್ ಬಳಿಯ ಮೈದಾನದಲ್ಲಿನ ಹೆಲಿಪ್ಯಾಡ್ಗೆ ಬಂದಿಳಿದು ದೇವರ ದರ್ಶನದ ಬಳಿಕ ಬಹಿರಂಗ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸಲು ನೆರವಾಗಲಿದೆ.
ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ನಾಮಪತ್ರಗಳ ಹಿಂತೆಗೆತದ ಧಾವಂತದಲ್ಲಿದ್ದರೆ, ಬಿಜೆಪಿ ರಾಷ್ಟ್ರೀಯ ನಾಯಕರಿಂದ ಪ್ರಚಾರ ಆರಂಭಿಸೋ ಮೂಲಕ ಚುನಾವಣೆಗೆ ಮೆರಗು ತುಂಬಲಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳು, ಶಾಸಕ ಸಿದ್ದು ಸವದಿ ಕ್ಷೇತ್ರಾದ್ಯಂತ ಮಾಡಿರುವ ಜನಪರ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿಗೆ ಜಯ ತಂದುಕೊಡುವುದು ಶತಃಸಿದ್ಧ ಎಂದರು. ಶಾಸಕ ಸಿದ್ದು ಸವದಿ ಮಾತನಾಡಿ, ಬಹಿರಂಗ ಸಭೆಗೆ ಅಂದಾಜು 20 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಅಮಿತಜಿ ಅವರ ದೇಶಪ್ರೇಮ, ಪಕ್ಷ ಸಂಘಟನಾ ಚಾತುರ್ಯ ಕಾರ್ಯಕರ್ತರಲ್ಲಿ ಅಪರಿಮಿತ ಬಲ ನೀಡಲಿದೆ ಎಂದರು.
ರಾಹುಲ್ ಗಾಂಧಿ ಲಿಂಗಾಯತ ಮತ ಬೇಟೆ: ಬಸವಣ್ಣ ಬಗ್ಗೆ ಶ್ರೀಗಳಿಂದ ಮಾಹಿತಿ ಸಂಗ್ರಹ
ಈ ಸಂದರ್ಭದಲ್ಲಿ ಸಿದ್ಧನಗೌಡ ಪಾಟೀಲ, ಸಿದ್ರಾಮ ಸವದತ್ತಿ, ನಗರಾಧ್ಯಕ್ಷ ಸಂಜಯ ತೆಗ್ಗಿ, ನಗರ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಗ್ರಾಮೀಣಾಧ್ಯಕ್ಷ ಸುರೇಶ ಅಕ್ಕಿವಾಟ, ಆನಂದ ಕಂಪು, ಶಿವಕುಮಾರ ಭದ್ರನ್ನವರ, ವರ್ಧಮಾನ ಕೋರಿ, ಶಂಕರ ಹುನ್ನೂರ, ಪುಂಡಲೀಕ ಪಾಲಭಾಂವಿ ಮುಂತಾದವರಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.