
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಆ.27): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆಗೆ ತೆರೆಮರೆಯಲ್ಲಿ ಕಸರತ್ತು ಆರಂಭಗೊಂಡಿರೋ ಬೆನ್ನಲ್ಲೆ ಆಕಾಂಕ್ಷಿಗಳು ಸಹ ಈಗಿನಿಂದಲೇ ಸಜ್ಜಾಗುತ್ತಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿಯೂ ಸಹ ಸ್ಪರ್ಧಾಕಾಂಕ್ಷಿಗಳ ಪೈಪೋಟಿ ಎದ್ದಿದೆ. ದಿನಕ್ಕೊಬ್ಬರು ನಾನು ಸಹ ಲೋಕಸಭೆ ಅಭ್ಯರ್ಥಿ ಆಕಾಂಕ್ಷಿ ಎನ್ನುವ ಮೂಲಕ ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ಹಾಗಾದ್ರೆ ಜಿಲ್ಲೆಯಲ್ಲಿ ಯಾರ್ಯಾರು ಪೈಪೋಟಿಗೆ ಇಳಿದಿದ್ದಾರೆ. ಏನೆಲ್ಲಾ ರಾಜಕೀಯ ಲೆಕ್ಕಾಚಾರ ನಡಿತಿದೆ ಅನ್ನೋದರ ಕುರಿತ ವರದಿ ಇಲ್ಲಿದೆ.
ರಾಜ್ಯದಲ್ಲಿ ಒಂದೆಡೆ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಜೋರಾಗಿದ್ದರೆ, ಮತ್ತೊಂದೆಡೆ ಆಯಾ ಪಕ್ಷಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಕದನ ಕಣ ರೆಡಿಯಾಗುತ್ತಿದೆ. ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಲೋಕಸಭಾ ಅಭ್ಯರ್ಥಿಗಳಾಗಲು ರಾಜಕೀಯ ನಾಯಕರು ತುದಿಗಾಲ ಮೇಲೆ ನಿಂತಿದ್ದು, ಈಗಿನಿಂದಲೇ ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ನಾವೇನೂ ಕಡಿಮೆಯಿಲ್ಲ ಎನ್ನುವಂತೆ ಘಟಾನುಘಟಿ ನಾಯಕರ ಮನೆಯ ಮಹಿಳಾ ಮಣಿಗಳು ಕೂಡ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಟಿಕೆಟ್ಗೆ ಲಾಭಿ ಆರಂಭಿಸಿದ್ದಾರೆ.
ಅತ್ಯಾಚಾರ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ದಾವಣಗೆರೆ ಪೊಲೀಸರು
ಮಹಿಳಾ ಕೋಟಾದಡಿ ಟಿಕೆಟ್ ಕೊಡವಂತೆ ವೀಣಾ ಪಟ್ಟು: ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಉಪಾಧ್ಯಕ್ಷೆಯಾಗಿರೋ ವೀಣಾ ಕಾಶಪ್ಪನವರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಎನ್ನುವ ಮೂಲಕ ಪಕ್ಷದ ನಾಯಕರಿಗೆ ಈಗಾಗಲೇ ಮನವೊಲಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ವೀಣಾ ಕಾಶಪ್ಪನವರ ಈ ಹಿಂದೆ ಬಾಗಲಕೋಟೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಕೆಲ್ಸ ಮಾಡಿ ಕಳೆದ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿ ಬಿಜೆಪಿಗೆ ಪೈಪೋಟಿಯನ್ನ ಕೊಟ್ಟಿದ್ದರು. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿರುವುದು ಕೈ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಇನ್ನಷ್ಟು ಆಸೆಯನ್ನ ಗರಿಗೆದುರುವಂತೆ ಮಾಡಿದೆ. ಶತಾಯ ಗತಾಯ ಟಿಕೆಟ್ ಪಡೆಯಲೇಬೆಕೆಂದು ಇನ್ನಿಲ್ಲದ ಪೈಪೋಟಿ ಶುರು ಮಾಡಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಮಾಡಿದ ಕೆಲಸಗಳು ನನಗೆ ಸಹಕಾರಿಯಾಗಲಿದ್ದು, ಜೊತೆಗೆ ರಾಜ್ಯದಲ್ಲಿ ಮಹಿಳೆಗೆ ಟಿಕೆಟ್ ನೀಡಬೇಕೆಂದಾದಲ್ಲಿ ಪಕ್ಷದ ಹಿರಿಯರು ನನಗೆ ಅವಕಾಶ ಮಾಡಿಕೊಡಬಹುದು. ಹೀಗಾಗಿ ನಾನೊಬ್ಬಳು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಎಂದು ವೀಣಾ ಕಾಶಪ್ಪನವರ ಹೇಳಿದ್ದಾರೆ.
ಸರನಾಯಕ್ ಮತ್ತು ತಪಶೆಟ್ಟಿ ಅವರಿಂದಲೂ ಟಿಕೆಟ್ಗೆ ಫೈಟ್: ಬಾಗಲಕೋಟೆ ಜಿಲ್ಲೆಯ 7 ಮತಕ್ಷೇತ್ರಗಳ ಪೈಕಿ ಈ ಬಾರಿ 5 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ. ಬಾಕಿ 2 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಮೇಲಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಭರವಸೆಗಳ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಸ್ಥಾನಗಳನ್ನೂ ಸಹ ಕಾಂಗ್ರೆಸ್ ಗೆಲ್ಲುವ ಹವಣಿಕೆಯಲ್ಲಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಸಹಜವಾಗಿಯೇ ಲೋಕಸಭಾ ಚುನಾವಣೆಗೆ ಕೈ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಏರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಮಾಜಿ ಸಚಿವ, ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಅಜಯಕುಮಾರ್ ಸರನಾಯಕ್ ಮತ್ತು ಬಸವೇಶ್ವರ ಬ್ಯಾಂಕ್ನ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಸೇರಿದಂತೆ ವಿವಿಧ ನಾಯಕರು ಈಗಾಗಲೇ ರಾಜ್ಯ ನಾಯಕರ ದುಂಬಾಲು ಬಿದ್ದಿದ್ದಾರೆ.
3 ಈಡಿಯಟ್ಸ್ ಸಿನಿಮಾ ಶೈಲಿಯಲ್ಲಿ ಹಸೆಮಣೆಯಿಂದ ಎದ್ದು ಹೋದ ಮಗಳನ್ನು ಪ್ರಿಯಕರನೊಂದಿಗೆ ಸೇರಿಸಿದ ಪೋಷಕರು
ಈಗ ಘಟಾನುಘಟಿ ನಾಯಕ ಇನ್ನಿಲ್ಲದ ಪೈಪೋಟಿ ಮಧ್ಯೆಯೇ ರಾಜ್ಯ ಕೈ ನಾಯಕರು ಅಳೆದು ತೂಗಿ ತಮ್ಮ ಅಭ್ಯರ್ಥಿಯನ್ನ ಘೋಷಿಸಬೇಕಿದೆ. ಯಾಕೆಂದ್ರೆ ಕಾಂಗ್ರೆಸ್ನಲ್ಲಿಯೂ ಸಹ ಮುಸುಕಿನ ಗುದ್ದಾಟ ಅಷ್ಟು ಸುಲಭವಾಗಿಲ್ಲ. ಇವುಗಳ ಮಧ್ಯೆ ನಾನು ಸಹ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಮಾಜಿ ಸಚಿವ ಅಜಯಕುಮಾರ್ ಸರನಾಯಕರ್ ತಮ್ಮ ಅಭಿಪ್ರಾಯವನ್ನ ಹೊರ ಹಾಕಿದ್ದಾರೆ. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ಫೈಟ್ ಈಗಿನಿಂದಲೇ ಶುರುವಾಗಿದ್ದು, ಇಷ್ಟಕ್ಕೂ ರಾಜ್ಯ ನಾಯಕರು ಯಾರ ಬೆನ್ನಿಗೆ ನಿಂತು ಒಗ್ಗಟ್ಟನ್ನು ಪ್ರದರ್ಶಿಸಿ ಮುನ್ನಡೆಯುತ್ತಾರೆ ಅಂತ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.