
ಧಾರವಾಡ (ಜೂ.10): ನಿರೀಕ್ಷೆಯಂತೆ ಕಾರ್ಮಿಕ ಸಚಿವರೂ ಆಗಿರುವ ಕಲಘಟಗಿ ಶಾಸಕರಾದ ಸಂತೋಷ ಲಾಡ್ ಅವರು ಧಾರವಾಡ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯವರಾದರೂ ಕಲಘಟಗಿ ಕ್ಷೇತ್ರ(Kalaghatagi assembly constituency)ದಿಂದ ಮೂರು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿದ್ದಾರೆ. ಒಂದು ಬಾರಿ ಸಂಡೂರಿನ ಶಾಸಕರಾಗಿದ್ದವರು ಲಾಡ್. ಈ ಮೊದಲು 2013ರಲ್ಲಿ ಕಾರ್ಮಿಕ ಸಚಿವರಾಗಿದ್ದ ಲಾಡ್ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಅನುಭವ ಸಹ ಹೊಂದಿದವರು. ಹೀಗಾಗಿ ಈ ಬಾರಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಲಿದ್ದಾರೆ ಎಂಬ ಮಾತುಗಳು ಕೈ ಪಡೆಯಲ್ಲಿರುವ ಕಾರಣ ಕಿತ್ತೂರು ಕರ್ನಾಟಕದ ಪ್ರಮುಖ ಜಿಲ್ಲೆಯನ್ನು ಅವರ ಕೈಗೆ ನೀಡಲಾಗಿದೆ.
ಪಾಕಿಸ್ತಾನ, ಕಾಂಗ್ರೆಸ್ ದೂರುವುದೇ ಬಿಜೆಪಿ ಕೆಲಸ: ಸಚಿವ ಸಂತೋಷ ಲಾಡ್
ಜಿಲ್ಲೆಯ ಉಸ್ತುವಾರಿಯನ್ನು ಬೆಳಗಾವಿ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕರಗೂ ಕೊಡಬಹುದು. ಲಾಡ್ ಅವರನ್ನು ಬಳ್ಳಾರಿಗೆ ಕಳುಹಿಸಲಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಜಿಲ್ಲೆಯ ಸಚಿವರನ್ನು ಬೇರೆ ಜಿಲ್ಲೆಗೆ ಕಳುಹಿಸಿ ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ತಪ್ಪು ಬೇಡ ಎಂದು ಲಾಡ್ ಅವರಿಗೆ ಜಿಲ್ಲೆಯ ಹೊಣೆಯನ್ನು ಹೊರೆಯಿಸಲಾಗಿದೆ.
ಇದರೊಂದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಹ ಬೇರೆ ಜಿಲ್ಲೆಯವರು ಉಸ್ತುವಾರಿ ಬೇಡ ಎಂದು ಪಕ್ಷದ ರಾಜ್ಯ ಮುಖಂಡರ ಗಮನ ಸೆಳೆದಿದ್ದರು. ಸ್ಥಳೀಯ ಸಮಸ್ಯೆ ಅರಿಯದ ಹಾಗೂ ಸ್ಥಳೀಯ ಕಾರ್ಯಕರ್ತರಿಗೆ ಕೆಲಸ ಮಾಡಿಸಿಕೊಳ್ಳಲು ತೊಂದರೆ ಆಗಲಿದ್ದು ಯಾವುದೇ ಕಾರಣಕ್ಕೂ ಹೆಬ್ಬಾಳ್ಕರ್ಗೆ ನೀಡುವುದು ಬೇಡ ಎಂದು ಅಭಿಪ್ರಾಯಗಳು ಕೈ ಮುಖಂಡರಿಂದ ವ್ಯಕ್ತವಾಗಿದ್ದವು. ಇದಲ್ಲದೇ, ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಶತಾಯ-ಗತಾಯ ಸೋಲಿಸಲು ಕಾಂಗ್ರೆಸ್ ಈಗಿನಿಂದಲೇ ತಂತ್ರ ಹೆಣೆಯುತ್ತಿದೆ. ಪೂರಕವಾಗಿ ಲಾಡ್ ಅವರನ್ನೇ ಉಸ್ತುವಾರಿಯನ್ನಾಗಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಲಾಡ್ ಅವರು ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕು ಪಂಚಾಯ್ತಿಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುಂಬರುವ ದಿನಗಳಲ್ಲಿ ಆಡಳಿತ ವ್ಯವಸ್ಥೆಯ ಪಾಠ ಮಾಡಿದ್ದಾರೆ. ಬರುವ ದಿನಗಳಲ್ಲಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಲಿದ್ದಾರೆ ಎಂಬ ನಂಬಿಕೆ ಜಿಲ್ಲೆಯ ಜನರದ್ದಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಸಹಕಾರ ಇರಲಿ: ಸಚಿವ ಸಂತೋಷ ಲಾಡ್
ರಾಜ್ಯದ 2ನೇ ಅತೀ ದೊಡ್ಡ ಹು-ಧಾ ಅವಳಿ ನಗರ ಹೊಂದಿರುವ ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡಿದ್ದು ಸಮರ್ಥವಾಗಿ ಜಿಲ್ಲೆಯ ಆಡಳಿತವನ್ನು ನಡೆಸುತ್ತೇನೆ. ಈ ಮೊದಲು ಉಸ್ತುವಾರಿ ವಹಿಸಿದ ಅನುಭವದ ಆಧಾರದ ಮೇಲೆ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ಜಿಲ್ಲೆಯ ಜನತೆಯ ಸಹಕಾರದಿಂದ ಆಡಳಿತ ವ್ಯವಸ್ಥೆ ಸುಧಾರಿಸುವ ಕೆಲಸ ಮಾಡುವೆ.
ಸಂತೋಷ ಲಾಡ್, ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.