
ಬೆಂಗಳೂರು (ಫೆ.25): ರಾಜ್ಯಾದ್ಯಂತ ಭಾರತದ ಸಂವಿಧಾನ ಮತ್ತು ಐಕ್ಯತಾ ಸಮಾವೇಶದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಜಾಪ್ರಭುತ್ವಕ್ಕೆ ಸಂವಿಧಾನಕ್ಕೆ ಬಂದಿರುವ ಆತಂಕವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯಿಂದ, ನರೇಂದ್ರ ಮೋದಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಬಿಜೆಪಿ ಅಥವಾ ಆರ್ಎಸ್ಎಸ್ ಸಂವಿಧಾನಕ್ಕೆ ಗೌರವ ಕೊಡಲ್ಲ. ಹೀಗಾಗಿ, ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಮುಂಚೆ ಅನೇಕ ದೇಶಗಳ ಸಂವಿಧಾನ ವನ್ನು ಅಭ್ಯಾಸ ಮಾಡಿ ನಮ್ಮ ಸಂವಿಧಾನ ರಚನೆ ಮಾಡಿದ್ದಾರೆ. ಇದು ಜಾರಿಯಾದ ದಿನದಿಂದ ಬಿಜೆಪಿ ಇದನ್ನು ಆಂತರಿಕವಾಗಿ ವಿರೋಧ ಮಾಡ್ತಾ ಇದೆ. ಆರ್ಎಸ್ಎಸ್ನ ಗೋಲ್ವಾಲ್ಕರ್ ಅವರು ಇದನ್ನು ಒಂದು ಗೊಂದಲದ ಗೂಡು ಅಂತ ಕರೆದರು. ಬಿಜೆಪಿ ಅಥವಾ ಆರ್ಎಸ್ಎಸ್ ಸಂವಿಧಾನಕ್ಕೆ ಗೌರವ ಕೊಡಲ್ಲ. ಸಾಮಾಜಿಕ ನ್ಯಾಯ, ಬಡವರು, ದಲಿತರಿಗೆ ವಿರುದ್ದವಾಗಿ ಇರುವ ಪಕ್ಷ ಬಿಜೆಪಿಯಾಗಿದೆ. ಸಂಸದ ಅನಂತ ಕುಮಾರ್ ಹೆಗಡೆ , ನಾವು ಅಧಿಕಾರ ಕ್ಕೆ ಬಂದಿದ್ದೇ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿ ಎಂದರು. ಇದನ್ನು ಬಿಜೆಪಿ, ಆರ್ಎಸ್ಎಸ್ನವರು ಖಂಡಿಸಲಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಇವರ ಮೇಲೆ ಯಾವುದೇ ಕ್ರಮ ತೆಗದುಕೊಳ್ಳಲಿಲ್ಲ. ಅದರ ಅರ್ಥ ಸರ್ಕಾರದ ನಿಲುವನ್ನು ಅನಂತಕುಮಾರ್ ಹೆಗಡೆ ಮೂಲಕ ಹೇಳಿಸಿದ್ದಾರೆ. ಸಂವಿಧಾನ ಬದಲಾವಣೆ ಆದರೆ ನಾವು ಯಾರೂ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ದೇಶದಲ್ಲಿ ಹೊಸ ಸಂವಿಧಾನ ರಚನೆಗೆ ಸಂಚು ನಡೀತಿದೆ; ಮೋದಿ ಮೇಲ್ನೋಟಕ್ಕೆ ರಕ್ಷಿಸುವ ಮಾತನಾಡ್ತಾರೆ: ಮಲ್ಲಿಕಾರ್ಜುನ ಖರ್ಗೆ
ಸುಳ್ಳು ಬಿಜೆಪಿಯ ಮನೆ ದೇವರು. ಭಾರತೀಯ ಜನತಾ ಪಾರ್ಟಿ ಸಾಮಾಜಿಕ ನ್ಯಾಯದ ವಿರೋಧಿಗಳು. ಮನುಸ್ಮೃತಿ ಯಲ್ಲಿ ನಂಬಿಕೆ ಇಟ್ಟುಕೊಂಡವರು. ಸಂವಿಧಾನ ರದ್ದು ಮಾಡಿದ್ರೆ ರಕ್ತ ಪಾತ ಆಗುತ್ತೆ ಅಂತ ಹೇಳಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡ್ತಾ ಇದಾರೆ. ನಾವು ಕಿತ್ತು ಎಸೆಯಬೇಕಾಗಿದ್ದು ಸಂವಿಧಾನ ವಿರೋಧಿಗಳನ್ನು. ಸಂವಿಧಾನ ಉಳಿದ್ರೆ ನಾವೆಲ್ಲಾ ಉಳಿಯಲು ಸಾದ್ಯ. ಇದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಇವರು ಪರೋಕ್ಷವಾಗಿ ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ಮಾಡ್ತಾ ಇದಾರೆ. ಸಂವಿಧಾನದ ಪರವಾಗಿ ಇರುವವರ ಕೈಯಲ್ಲಿ ಅಧಿಕಾರ ಇರಬೇಕು. ಆಗ ಮಾತ್ರ ಸಂವಿಧಾನ ಉಳಿಯುತ್ತೆ ಅಂತ ಅಂಬೇಡ್ಕರ್ ಹೇಳಿದ್ದರು. ಸಂವಿಧಾನದ ಬಗ್ಗೆ ಬದ್ದತೆ ಇರುವವರ ಕೈಯಲ್ಲಿ ಅಧಿಕಾರ ಇರಬೇಕು. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ. ಸಂವಿಧಾನದ ಪರ ಇರುವ ಎಲ್ಲ ವಿರೋಧ ಪಕ್ಷಗಳನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಮಹದಾಯಿ ಯೋಜನೆಗೆ ದಾಖಲೆ ಕೊಡಲಿ, ಕೇಂದ್ರದಿಂದ ಅನುಮೋದನೆ ಕೊಡಿಸ್ತೇವೆ: ಬಸವರಾಜ ಬೊಮ್ಮಾಯಿ
ಜಾತಿ ವ್ಯವಸ್ಥೆ ಕಾರಣದಿಂದ ಇವತ್ತು ದೇಶದಲ್ಲಿ ಅಸಮಾನತೆ ಇದೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅವಕಾಶ ವಂಚಿತ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆವು. ಅವತ್ತು 165 ಭರವಸೆ ಕೊಟ್ಟಿದ್ದೆವು. ಅದರಲ್ಲಿ 158 ಈಡೇರಿಸಿದ್ದೆವು. ಈ ಸಲ 5 ಗ್ಯಾರಂಟಿ ಗಳನ್ನು ಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಐದೂ ಗ್ಯಾರಂಟಿ ಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು ಯಾವತ್ತೂ ನುಡಿದಂತೆ ನಡೆದಿಲ್ಲ. ಪ್ರಾಮಾಣಿಕವಾಗಿ ನಡೆದುಕೊಳ್ಳುವ ಸರ್ಕಾರ ಇದ್ರೆ ಅದು ಕಾಂಗ್ರೆಸ್ ಸರ್ಕಾರ. ಒಂದು ಕೋಟಿ ಇಪ್ಪತ್ತು ಲಕ್ಷ ಜನ ಗ್ಯಾರಂಟಿ ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ವಿರೋಧಿಗಳು ಅಪಪ್ರಚಾರ ಮಾಡ್ತಿದಾರೆ. ಗ್ಯಾರಂಟಿ ಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಮಾಡಿದ್ರೆ ರಾಜ್ಯ ದಿವಾಳಿ ಆಗುತ್ತದೆ ಅಂತ ನರೇಂದ್ರ ಮೋದಿ ಹೇಳಿದ್ದರು. ಈಗ ಅವರೇ ಇವತ್ತು ನರೇಂದ್ರ ಮೋದಿ ಗ್ಯಾರಂಟಿ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.