ದಿಲ್ಲಿಯಲ್ಲಿ ಈಗ ಸಂಪುಟ ಸರ್ಕಸ್; ಹಲವರು ಪರೋಕ್ಷವಾಗಿ ಲಾಬಿ..!

By Kannadaprabha NewsFirst Published Sep 18, 2020, 7:38 AM IST
Highlights

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂರು ದಿನಗಳ ಡೆಲ್ಲಿ ಪ್ರವಾಸವನ್ನು ಕೈಗೊಂಡಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ನವದೆಹಲಿ(ಸೆ.18): ರಾಜ್ಯದಲ್ಲಿ ಮತ್ತೆ ಸಂಪುಟ ಕಸರತ್ತು ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ನಾಯಕರು ನೀಡುವ ಸೂಚನೆ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿಸಿವೆ.

ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ತಡರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸಮಾಲೋಚನೆ ನಡೆಸಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕವೇ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಕೆಲ ಸಚಿವಾಕಾಂಕ್ಷಿಗಳೂ ಗುರುವಾರ ಪ್ರತ್ಯೇಕವಾಗಿ ದೆಹಲಿಗೆ ದೌಡಾಯಿಸಿದ್ದಾರೆ. ಶಾಸಕರಾದ ಎಚ್‌.ವಿಶ್ವನಾಥ್‌, ಸಿ.ಪಿ.ಯೋಗೇಶ್ವರ್‌, ಎಂ.ಪಿ.ರೇಣುಕಾಚಾರ್ಯ ಅವರು ಪರೋಕ್ಷವಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಇಂದು ಚರ್ಚಿ​ಸು​ವೆ- ಸಿಎಂ:

ಈ ನಡುವೆ ‘ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದರೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಸಬೇಕೋ ಅಥವಾ ಪುನರ್‌ ರಚನೆ ಮಾಡಬೇಕೋ ಎಂಬ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನವದೆಹಲಿ ಹಾಗೂ ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಪುಟ ವಿಸ್ತರಣೆ ಮೂಲಕ ಸಚಿವಾಕಾಂಕ್ಷಿಗಳಿಗೆ ಆದಷ್ಟು ಬೇಗ ಸಿಹಿ ಸುದ್ದಿ ನೀಡಬೇಕೆನ್ನುವುದು ನನ್ನ ಅಪೇಕ್ಷೆ. ಕೇಂದ್ರ ನಾಯಕರು ಗ್ರೀನ್‌ ಸಿಗ್ನಲ್‌ ನೀಡಿದಲ್ಲಿ ತಕ್ಷಣದಿಂದಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ’ ಎಂದರು.

ಏಮ್ಸ್‌ ರಾಯಚೂರಿಗೆ ತರಲು ಹೋರಾಟಕ್ಕೂ ಸಿದ್ಧ: ಡಿಸಿಎಂ ಸವದಿ

ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳುವ, ಈಗಿರುವವರಲ್ಲಿ ಕೆಲವರನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಮೋದಿ ಹಾಗೂ ಜೆ.ಪಿ.ನಡ್ಡಾ ಅವರ ಭೇಟಿಗೆ ಶುಕ್ರವಾರ ಸಮಯ ನಿಗಿದಿಯಾಗಿದೆ. ಈ ವೇಳೆ ಅಭಿವೃದ್ಧಿ ವಿಚಾರಗಳ ಜತೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚಿಸುವೆ. ರಾಜ್ಯದಲ್ಲಿ ಸಚಿವ ಸಂಪುಟದ ಪುನಾರಚನೆ ಅಥವಾ ವಿಸ್ತರಣೆ ಮಾಡುವುದು ಕೇಂದ್ರ ನಾಯಕರ ನಿರ್ಧಾರದ ಮೇಲೆ ಅವಲಂಬಿಸಿದೆ’ ಎಂದು ತಿಳಿಸಿದರು.

ವಿಶ್ವ​ನಾಥ್‌ ದಿಲ್ಲಿ​ಗೆ:

ಇದೇ ವೇಳೆ ಎಚ್‌.ವಿಶ್ವನಾಥ್‌ ಅವರು ನಾನು ದೆಹಲಿಗೆ ಬಂದಿದ್ದಾರೆ. ‘ಶಫರ್ಡ್‌ ಆರ್ಗನೈಸೇಶನ್‌ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ. ಸಚಿವ ಸ್ಥಾನದ ವಿಚಾರವಾಗಿ ಈಗ ತಾವು ಯಾರನ್ನೂ ಭೇಟಿಯಾಗುತ್ತಿಲ್ಲ’ ಎಂದು ತಿಳಿಸಿದರು. ‘ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಟ್ಟವಿಚಾರ. ಸಚಿವ ಸ್ಥಾನಕ್ಕಾಗಿ ನಾವು ಬೇಡಿಕೆ ಇಡುತ್ತೇವೆ, ಆದರೆ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್‌ನದು. ಈಗಾಗಲೇ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿದ್ದೇನೆ. ಯಡಿಯೂರಪ್ಪ ಅವರ ಜತೆಗೂ ಮಾತನಾಡಿದ್ದೇನೆ. ನನ್ನ ಅನುಭವ ಬಳಸಿಕೊಳ್ಳುವಂತೆ ಕೇಳಿಕೊಂಡಿದ್ದೇನೆ’ ಎಂದರು.

ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದರೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಸಬೇಕೋ ಅಥವಾ ಪುನರ್‌ ರಚನೆ ಮಾಡಬೇಕೋ ಎಂಬ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. - ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ
 

click me!