Karnataka BJP: ಚುನಾವಣೆ ಕಾರ್ಯತಂತ್ರ, ಬಿಜೆಪಿ ನಾಯಕರಿಗೆ ನಂದಿ ಬೆಟ್ಟದಲ್ಲಿ ಕ್ಯಾಂಪ್

By Suvarna NewsFirst Published Dec 31, 2021, 1:08 PM IST
Highlights

* ಕರ್ನಾಟಕ ವಿಧಾನಸಭೆ ಚುನಾವಣೆಗೆ ಪೂವಭಾವಿ ತಯಾರಿ
* ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ತರಬೇತಿ
 * ತರಬೇರಿ ಕ್ಯಾಂಪ್‌ನಲ್ಲಿ ನಡ್ಡಾ, ಸಂತೋಷ್ ಭಾಗಿ ಸಾಧ್ಯತೆ

ಬೆಂಗಳೂರು, (ಡಿ.31): ವಿಧಾನಸಭೆ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇದೆ. ಆಗಲೇ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ತಾಲೀಮು ಶುರುಮಾಡಿಕೊಂಡಿವೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ರೆ, ಜೆಡಿಎಸ್ ಜಲಧಾರೆ ಕೈಗೊಂಡಿದೆ. ಇನ್ನು ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ತರಬೇತಿ ನೀಡಲು ಮುಂದಾಗಿದ್ದು, ಚುನಾವಣೆ ನಡೆಸುವ ಬಗ್ಗೆ ಕಾರ್ಯತಂತ್ರಗಳ ಟ್ರೈನಿಂಗ್ ನಡೆಯಲಿದೆ.

Karnataka Politics:ಮಹತ್ವದ ಬೆಳವಣಿಗೆ, ಕರ್ನಾಟಕದತ್ತ ಬಿಜೆಪಿ ಹೈಕಮಾಂಡ್

 ಸಚಿವರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಜನವರಿ 7 ಮತ್ತು 8 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಎರಡು ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. 

ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತು ತರಬೇತಿ ಶಿಬಿರದಲ್ಲಿ ಸವಿಸ್ತಾರವಾಗಿ ಮನನ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗಿಯಾಗುವ ಸಾಧ್ಯತೆ ಇದೆ.

ಇತ್ತೀಚೆಗಿನ ಚುನಾವಣೆಗಳಲ್ಲಿನ ಸಾಧಾರಣ ಫಲಿತಾಂಶದ ಬೆನ್ನಲ್ಲೇ ಸಚಿವರು ಮತ್ತು ಪದಾಧಿಕಾರಿಗಳಿಗೆ ತರಬೇತಿ ನೀಡಲು ಬಿಜೆಪಿ ಮುಂದಾಗಿರುವುದು ಗಮನಾರ್ಹ. ಈ ಮಧ್ಯೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಧಾರಣ ಪ್ರದರ್ಶನದ ಹಿನ್ನೆಲೆ ರಾಜ್ಯದ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. 

ಸರಣಿ ಸಭೆ
ಅಮಿತ್ ಶಾ ಅವರು ಜನವರಿ 8 ಮತ್ತು 9ರಂದು ಎರಡು ದಿನಗಳ ಬೆಂಗಳೂರಿನಲ್ಲೇ ಠಿಕಾಣಿ ಹೂಡಲಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಹ ಜನವರಿ 9ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಡ್ಡಾಗಿಂತ ಒಂದು ದಿನ ಮೊದಲೇ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ, ಪಕ್ಷದ ಪದಾಧಿಕಾರಿಗಳು, ಶಾಸಕರು, ಸಚಿವರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಜನವರಿ 9ರಂದು ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, 2023ರ ವಿಧಾನಸಭೆ ಚುನಾವಣೆ ಸಿದ್ದತೆಯ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಅಮಿತ್ ಶಾ ಈ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎನ್ನಲಾಗಿದೆ.

ಬಳಿಕ ಅಂತಿಮವಾಗಿ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಸದ್ಯ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ವಿಷಯಕ್ಕೆ ಸಬಂಧಿಸಿದಂತೆ ಸ್ಪಷ್ಟ ಸಂದೇಶ ನೀಡುವ ಸಾಧ್ಯತೆಗಳಿವೆ. ಅಲ್ಲದೇ ಮುಂದಿನ ಚುನಾವಣೆಗೆ ಯಾರ ನಾಯಕತ್ವದಲ್ಲಿ ನಡೆಯಲಿದೆ ಎನ್ನುವುದನ್ನು ಘೋಷಣೆಯಾಗಲಿದೆ.

ಮುಂದಿನ ಚುನಾವಣೆಗೆ ಪೂರ್ವ ತಯಾರಿ
ಯೆಸ್....2023ರ ವಿಧಾನಸಭಾ ಚುನಾವಣೆಗೆ ಪಕ್ಷದ ನಾಯಕರನ್ನು ಬಡಿದೆಬ್ಬಿಸಲು ದೆಹಲಿ ನಾಯಕರು ಕರ್ನಾಟಕ ಪ್ರವಾಸ ಕೈಗೊಂಡಿದಂತಿದೆ. ಬೆಲೆ ಏರಿಕೆ ಸೇರಿದಂತೆ ಕೆಲ ಅಂಶಗಳಿಂದ ಕರ್ನಾಟಕದಲ್ಲಿ ಬಿಜೆಪಿ ಕೊಂಚ ಕಳೆ ಕಳೆದುಕೊಂಡಂತೆ ಹೈಕಮಾಂಡ್ ನಾಯಕರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಳೆ ಹೆಚ್ಚಿಸಲು ಹೈಕಮಾಂಡ್ ಮುಂದಾಗಿದೆ.  ಮುಂಬರುವ ಚುನಾವಣೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎನ್ನುವ ತಂತ್ರಗಾರಿಗೆ ಚರ್ಚೆ ಆಗಲಿದೆ. ಅಲ್ಲದೇ ಈಗಿನಿಂದಲೇ ಪಕ್ಷ ಸಂಘಟನೆಗೆ ಏನೆಲ್ಲಾ ರೂಪರೇಷಗಳನ್ನ ಮಾಡಿಕೊಳ್ಳಬೇಕು ಎನ್ನುವುದನ್ನು ನಾಯಕರುಗಳಿಗೆ ಮನದಟ್ಟು ಮಾಡಿಕೊಡಲಿದ್ದಾರೆ. 

ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆ?
ಸಿಎಂ ಬದಲಾವಣೆ ಮಾತ್ರವಲ್ಲದೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ಬಗ್ಗೆಯೂ ಚರ್ಚೆಯಾಗಲಿದೆ ಎನ್ನಲಾಗಿದೆ. ನಳೀನ್ ಕುಮಾರ್ ಕಟೀಲ್ ಅವರನ್ನು ಮುಂದುವರೆಸಬೇಕೋ‌ ಬೇಡವೋ ಎಂಬ ಬಗ್ಗೆ ಕೂಡ ಜೆಪಿ ನಡ್ಡ ಮತ್ತು ಅರುಣ್ ಸಿಂಗ್ ‌ಮಾಹಿತಿ ಸಂಗ್ರಹಿಸಲಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರನ್ನೇ ಮುಂದಿಟ್ಟುಕೊಂಡು 2023ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವೇ, ಬದಲಾವಣೆ ಅಗತ್ಯ ಇದೆಯೇ? ಎನ್ನುವ ಬಗ್ಗೆ ಚರ್ಚಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್‌ ಎಂದಿದ್ದ ಶಾ
ಹೌದು..ಅಮಿತ್ ಶಾ ಅವರು ದಾಣಗೆರೆಗೆ ಆಗಮಿಸಿದ್ದ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರು. ಅಮಿತ್‌ ಶಾ ನೀಡಿದ ಹೇಳಿಕೆಗೆ  ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಯಾಕೆಂದರೆ ಚುನಾವಣೆ ಹಾಗೂ ಪ್ರಮುಖ ನಿರ್ಧಾರಗಳ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ತೆಗೆದುಕೊಳ್ಳಬಹುದು ಅಂದುಕೊಂಡಿದ್ದ ರಾಜ್ಯ ಬಿಜೆಪಿಯಲ್ಲಿ ಇದು ತಲ್ಲಣ ಸೃಷ್ಟಿಸಿತ್ತು. ಆದ್ರೆ, ಇದೀಗ ಏಕಾಏಕಿ ಬೊಮ್ಮಾಯಿ ಬದಲಾವಣೆ ಮಾತುಗಳು ಕೇಳಿಬರುತ್ತಿವೆ.

click me!