
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಮತದ ಬೆಂಕಿ ಮತ್ತೆ ಹೊಗೆಯಾಡಲು ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉಚ್ಚಾಟಿಸುವ ಕುರಿತು ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಕೇಂದ್ರದ ಪ್ರಭಾವಿ ನಾಯಕರೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.
ಲೀಕ್ ಆಗಿರುವ ಆಡಿಯೋ ಸಂಭಾಷಣೆಯ ಪ್ರಕಾರ, ಬಿ.ವೈ. ವಿಜಯೇಂದ್ರ ಅವರನ್ನು ಸದ್ಯಕ್ಕೆ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸದಂತೆ ಸದಾನಂದಗೌಡರು ಕೇಂದ್ರದ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
"ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನೇ ಮುಂದುವರೆಯಲು ಬಿಡಿ. ಈಗಲೇ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ಬಿಜೆಪಿ ಪಕ್ಷವು 'ಲಿಂಗಾಯತ ವಿರೋಧಿ' ಎಂಬ ಹಣೆಪಟ್ಟಿ ಹೊರಬೇಕಾಗುತ್ತದೆ. ಇದು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆ ಹಾಗೂ ಡ್ಯಾಮೇಜ್ ಉಂಟುಮಾಡಲಿದೆ. ಆದ್ದರಿಂದ ಸೂಕ್ತ ಸಮಯದವರೆಗೂ ಕಾಯ್ದು, ಆ ಬಳಿಕ ವಿಜಯೇಂದ್ರ ಅವರನ್ನು ಒದ್ದು ಕಿತ್ತು ಬಿಸಾಕಿ," ಎಂದು ಸದಾನಂದಗೌಡರು ಹೇಳಿರುವುದು ಆಡಿಯೋದಲ್ಲಿದೆ ಎನ್ನಲಾಗಿದೆ.
ಇದೇ ಸಂಭಾಷಣೆಯ ವೇಳೆ ಕೇಂದ್ರದ ನಾಯಕನೆನ್ನಲಾದ ವ್ಯಕ್ತಿಯು, "ಅಲ್ಲಿ ಬಿ.ಎಲ್. ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ಇದ್ದಾರೆ ಎಂದು ಪ್ರಸ್ತಾಪಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿರುವ ಸದಾನಂದಗೌಡರು, ನಾನು ಕೇವಲ ದೇವರನ್ನು ಮಾತ್ರ ನಂಬಿದ್ದೇನೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮಾತುಗಳು ಈಗ ಬಿಜೆಪಿಯೊಳಗೆ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿವೆ.
ಈ ವಿವಾದಾತ್ಮಕ ಆಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳ ಎದುರು ಬಂದ ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ (No Comments). ನೋ ಕಾಮೆಂಟ್ಸ್, ನನ್ನದಲ್ಲದ ವಿಡಿಯೋ ಹಾಗೂ ಆಡಿಯೋಗಳ ಬಗ್ಗೆ ನಾನು ಇದುವರೆಗೆ ತಲೆಕೆಡಿಸಿಕೊಂಡಿಲ್ಲ, ಉತ್ತರವನ್ನೂ ಕೊಟ್ಟಿಲ್ಲ. ಸತ್ಯ ಏನೆಂಬುದನ್ನು ಮಾಧ್ಯಮದವರೇ ತನಿಖೆ ನಡೆಸಿ ಕಂಡುಹಿಡಿಯಲಿ. ಈ ಕುರಿತು ನಾನೇಕೆ ಪೊಲೀಸರಿಗೆ ದೂರು ನೀಡಬೇಕು? ನಾನೇನು ತಪ್ಪು ಮಾಡಿಲ್ಲ, ನಾನೇನು ಕಳ್ಳನಲ್ಲ. ಕಳ್ಳನಾಗಿದ್ದರೆ ಬಾಗಿಲು ಹಾಕಿಕೊಂಡು ಮನೆಯೊಳಗೆ ಕೂರುತ್ತಿದ್ದೆ, ಎಂದು ಭುಸುಗುಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಕೆಲವು ಮಾಧ್ಯಮಗಳು ಈ ವಿಷಯದಲ್ಲಿ ತಮ್ಮ ಟಿಆರ್ಪಿ ಹಾಗೂ ಮೈಲೇಜ್ಗಾಗಿ ರಾಜಕೀಯ ಮಾಡುತ್ತಿವೆ. ಆದರೆ ಸುವರ್ಣ ನ್ಯೂಸ್ನವರು ನನಗೆ ಕರೆ ಮಾಡಿ ಮಾಹಿತಿ ಕೇಳಿದ ರೀತಿ ನನಗೆ ಅತ್ಯಂತ ಖುಷಿ ತಂದಿದೆ. ಈ ಬಗ್ಗೆ ನಾನು ಯಾರೊಂದಿಗೂ ಚರ್ಚಿಸುವುದಿಲ್ಲ. ರಾಷ್ಟ್ರೀಯ ನಾಯಕರು ಈ ಬಗ್ಗೆ ವಿವರಣೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸುತ್ತೇನೆ. ನಾನು ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ನೋಡಿಯೇ ಇಲ್ಲಿಗೆ ಬಂದಿದ್ದೇನೆ. ನೀವು ಬೇಕಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕರೆಸಿ, ಅವರ ಸಮ್ಮುಖದಲ್ಲೇ ನನ್ನನ್ನು ಮಾತನಾಡಿಸಿ. ಅದನ್ನು ಬಿಟ್ಟು ರಾಮನ ಜೊತೆ, ಸೋಮನ ಜೊತೆ ಮಾತನಾಡಿ ಎಂದು ಕೇಳಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಫುಲ್ ಗರಂ ಆದರು.
ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಬ್ಯಾಟಿಂಗ್ ಮಾಡಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಡಿ.ವಿ. ಸದಾನಂದಗೌಡರು ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದರು.
"ಎಸ್.ಆರ್. ವಿಶ್ವನಾಥ್ ಹಿನ್ನೆಲೆ ಏನು? ಆತ ಹಿಂದೆ ಭೂಗತ ಪಾತಕಿ ಮುತ್ತಪ್ಪ ರೈ ಕೈಕೆಳಗೆ ಇದ್ದುಕೊಂಡು ಲೂಟಿ ಹೊಡೆಯುತ್ತಿದ್ದ ವ್ಯಕ್ತಿ. ಬೆಂಗಳೂರಿನಲ್ಲಿ ಗುಂಡಾಗಿರಿ ಮಾಡಿಕೊಂಡಿದ್ದ ವಿಶ್ವನಾಥ್ ಬಗ್ಗೆ ನಾನು ಮಾತನಾಡಬೇಕಾ? ಕೊಳ್ಳೆ ಹೊಡೆಯುವುದು ಮತ್ತು ಹಣ ಮಾಡುವುದಷ್ಟೇ ಆತನ ಕೆಲಸ. ಅಂತಹ ವ್ಯಕ್ತಿ ನನ್ನನ್ನು ಒಕ್ಕಲಿಗನೇ ಅಲ್ಲ ಎನ್ನುತ್ತಾನೆ," ಎಂದು ಏಕವಚನದಲ್ಲೇ ಕಿಡಿಕಾರಿದರು.
ಈ ಆಡಿಯೋ ವಿವಾದ ಹಾಗೂ ಎಸ್.ಆರ್. ವಿಶ್ವನಾಥ್ ಹೇಳಿಕೆಯನ್ನು ಖಂಡಿಸಿ ಈಗಾಗಲೇ ದಕ್ಷಿಣ ಕನ್ನಡ ಭಾಗದಲ್ಲಿ ಸದಾನಂದಗೌಡರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಇಡೀ ಬೆಳವಣಿಗೆ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಕುರಿತು ದೆಹಲಿಯ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸವಿಸ್ತಾರವಾದ ದೂರು ನೀಡುವುದಾಗಿ ಸದಾನಂದಗೌಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಈ ಆಂತರಿಕ ಯುದ್ಧ ಮತ್ತು ಆಡಿಯೋ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.