
ಉಡುಪಿ(ಏ.19): ರಾಜ್ಯದ ಗಮನ ಸೆಳೆದಿರುವ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಂಟ ಬಿಲ್ಲವ ಕದನದ ಕ್ಷೇತ್ರ ಎಂದು ಗುರುತಿಸಲಾದ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅದ್ದೂರಿಯಾಗಿಯೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರ ಪಾದಯಾತ್ರೆ ಹಾಗೂ ಸಮಾವೇಶದೊಂದಿಗೆ, ಉಡುಪಿ ಜಿಲ್ಲೆಯ ಮೊದಲ ಅದ್ದೂರಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕಾರ್ಕಳ ಇಂದು ಸಾಕ್ಷಿಯಾಗಿದೆ.
ಹಿಂದುತ್ವ ಹಿಂದುತ್ವ ಹಿಂದುತ್ವ... ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರ ಈ ಬಾರಿ ಹಿಂದುತ್ವದ ರಣಕಣವಾಗಿದೆ. ಬಿಜೆಪಿಯ ಫೈಯರ್ ಬ್ರಾಂಡ್ ಹಿಂದು ನಾಯಕ ಎಂದು ಕರೆಸಿಕೊಂಡಿರುವ ಸುನಿಲ್ ಕುಮಾರ್ ಗೆ, ಟಕ್ಕರ್ ನೀಡಲು ಈ ಬಾರಿ ಕಾಂಗ್ರೆಸ್ ಕೂಡ ಸಾಫ್ಟ್ ಹಿಂದುತ್ವದ ಮೊರೆ ಹೋಗಿದೆ. ಇನ್ನೊಂದೆಡೆ ಮುತಾಲಿಕ್ ತನ್ನ ಶಿಷ್ಯನ ವಿರುದ್ಧ ಕಾರ್ಕಳ ಕ್ಷೇತ್ರದಲ್ಲಿ ತೊಡೆ ತಟ್ಟಿದ್ದಾರೆ. ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡುವ ರೀತಿಯಲ್ಲಿ ಇಂದು ಕರಾವಳಿಯ ಪ್ರಭಾವಿ ನಾಯಕ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಕೊನೆಗೂ ಖಚಿತವಾಯ್ತು.. ಕಾರ್ಕಳದ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಲಿದೆ ಅಯೋಧ್ಯೆ ರಾಮನ ಮೂರ್ತಿ!
ಕಾರ್ಕಳದಸ್ವರಾಜ್ ಮೈದಾನದಿಂದ ಸುಮಾರು ಹದಿನೈದು ಸಾವಿರ ಕಾರ್ಯಕರ್ತರು ಮೆರವಣಿಗೆ ಮೂಲಕ ನಗರದ ಮಾರ್ಗಗಳಲ್ಲಿ ಸಂಚರಿಸಿದ್ದಾರೆ. ಮೆರವಣಿಗೆ ಉದ್ದಕ್ಕೂ ಬಿಜೆಪಿ ಬಾವುಟ ಹಾಗೂ ಕೇಸರಿ ಬಾವುಟಗಳು ರಾರಾಜಿಸಿದವು. ಪ್ರಧಾನಿ ಮೋದಿಗೆ ಜಯ ಘೋಷ ಕೂಗುತ್ತಾ ಕಾರ್ಯಕರ್ತರು ಕುಕ್ಕುಂದೂರು ಮೈದಾನ ತಲುಪಿದರು. ಹಿಂದುತ್ವದ ಜೊತೆಗೆ ಅಭಿವೃದ್ಧಿಯ ಅಜೆಂಡ ಇಟ್ಟುಕೊಂಡು ಸುನಿಲ್ ಕುಮಾರ್ 5 ವರ್ಷದ ಶಾಸಕತ್ವದಲ್ಲಿ ಗಮನ ಸೆಳೆದಿದ್ದಾರೆ. ಇದೇ ಆಧಾರದಲ್ಲಿ ಈ ಬಾರಿ ಮತ ಕೇಳುತ್ತಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬಹಿರಂಗ ಸಮಾವೇಶದಲ್ಲಿ, ಸಾವಿರಾರು ಕಾರ್ಯಕರ್ತರು ಭಾಗಿಯಾದರು. ಕಾರ್ಕಳ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಬಹುತೇಕ ಎಲ್ಲಾ ಜಾತಿಗಳ ಮುಖಂಡರು ಭಾಗವಹಿಸಿದ್ದರು. ಅದರಲ್ಲೂ ಬಂಟ ಸಮುದಾಯದ ಹಿರಿಯ ತಲೆಗಳು ಭಾಗವಹಿಸಿ ಸುನಿಲ್ ಕುಮಾರ್ ಗೆ ಬೆಂಬಲ ಯಾಚಿಸಿದರು. ಜಾತಿ ರಾಜಕಾರಣದಿಂದ ಹೊರಟಾದ ರಾಜಕೀಯ ನಡೆಸಬೇಕಾಗಿದೆ, ಅಭಿವೃದ್ಧಿಗೆ ಬೆಂಬಲ ನೀಡಲು ಸುನೀಲ್ ಕುಮಾರ್ ಜೊತೆಗೆ ಎಲ್ಲಾ ಜಾತಿಯವರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಬಂಟ ಬಿಲ್ಲವ ಮೊಗವೀರ ವಿಶ್ವಕರ್ಮ ಸೇರಿದಂತೆ ಕರಾವಳಿಯ ಪ್ರಭಾವಿ ಸಮುದಾಯಗಳ ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ಸುನಿಲ್ ಕುಮಾರ್ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ತಿರುಗೇಟು ನೀಡಿದರು. ಗುತ್ತಿಗೆದಾರನಾಗಿರುವ ಉದಯ ಶೆಟ್ಟಿ ಬಿಜೆಪಿ ಸರಕಾರದ ಫಲಾನುಭವಿ. ಯಾವೆಲ್ಲ ಶಾಸಕರಿಂದ ಏನೆಲ್ಲ ಕೆಲಸ ಮಾಡಿಕೊಂಡಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ದಾಖಲೆ ಸಹಿತ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದರು. ಹಿಂದುತ್ವದ ರಕ್ಷಣೆಗೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಆಡಳಿತಕ್ಕೆ ಬರಲೇಬೇಕು, ಡಬಲ್ ಇಂಜಿನ್ ಸರ್ಕಾರ ರಚಿಸುವ ನಿಟ್ಟಿನಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಕಾರ್ಯನೀಡಿದರು.
ಪ್ರಭಾವಿ ಶಾಸಕರಾದ ಸುನೀಲ್ ಕುಮಾರ್ ಏಕಮುಖ ಸ್ಪರ್ಧೆಯಿಂದ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಇತ್ತು. ಆದರೆ ಮುತಾಲಿಕ್ ಸ್ಪರ್ಧೆಯಿಂದ ಕಾರ್ಕಳ ಗಮನ ಸೆಳೆಯಿತು. ಇದೀಗ ಕಾಂಗ್ರೆಸ್ ಕೂಡ ಸಾಫ್ಟ್ ಹಿಂದುತ್ವದ ಮುಖವಾದ ಉದಯ್ ಕುಮಾರ್ ಗೆ ಟಿಕೆಟ್ ನೀಡಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಕಾರಣಕ್ಕೆ ಕಾರ್ಕಳ ಕ್ಷೇತ್ರ ಗಮನ ಸೆಳೆದಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.