ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ಕನ್ನಡಿಗ ಮಾಜಿ ಪ್ರಧಾನಿ ದೇವೇಗೌಡರು

By Sathish Kumar KHFirst Published Sep 3, 2023, 3:42 PM IST
Highlights

ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ಹಾಗೂ 'ಇಂಡಿ' ಒಕ್ಕೂಟದ (INDIA) ಬಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ (ಸೆ.03): ಲೋಕಸಭಾ ಚುನಾವಣೆಗೂ ಮುನ್ನವೇ ರಾಜಕೀಯ ಚದುರಂಗದಾಟ ಆರಂಭವಾಗಿದೆ. ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ಹಾಗೂ 'ಇಂಡಿ' ಒಕ್ಕೂಟದ (INDIA) ಬಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಾಸನ ತಾಲ್ಲೂಕಿನ, ಬೈಲಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿ ಒಕ್ಕೂಟದ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಾಂಬೆಯಲ್ಲಿ 28 ಗುಂಪಿನ ಒಂದು ದೊಡ್ಡ ಮಹಾಸಭೆ ನಡಿತು. ಸೆ.30 ರೊಳಗೆ ಎಲ್ಲಾ ಸೀಟ್ ನಿಗದಿ ಮಾಡ್ತಿವಿ ಅಂತ ಹೇಳಿದ್ದರು, ಈಗ ಏನಾಗಿದೆ. ಇನ್ನು ದೇಶದಲ್ಲಿ ಇಂಡಿ ಮೈತ್ರಿಕೂಟದಲ್ಲಿ ಒಂದು ಕಮಿಟಿ ಮಾಡಿದ್ದಾರೆ. ಅದರೆ, ಈ ಒಕ್ಕೂಟಕ್ಕೆ ಯಾರು ನಾಯಕರು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಈವರೆಗೂ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ? ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು.

Latest Videos

ಭಗವಂತ ನನಗೆ ಕೊಟ್ಟಿರುವ ಮೂರನೇ ಜನ್ಮವಿದು: ಮಾಜಿ ಸಿಎಂ ಕುಮಾರಸ್ವಾಮಿ ಭಾವುಕ ನುಡಿ

ಇನ್ನು ಒಕ್ಕೂಟದಲ್ಲಿ ಒಂದು ಕಮಿಟಿ ಮಾಡಿದ್ದಾರೆ, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಎರಡು ದಿನ ಬೊಂಬಾಯ್ ಮೀಟಿಂಗ್ ನಡೀತು. ಇನ್ನೂ ಚುನಾವಣೆ 7-8 ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೀನಿ ಎಂದು ಇಂಡಿ ಒಕ್ಕೂಟದ ಅಸಮಾಧಾನ ಹೊರ ಹಾಕಿದರು.

ಒನ್‌ ಟುವ ಒನ್‌ ಕ್ಯಾಂಡಿಡೇಟ್‌ ಆಯ್ಕೆ ಎಲ್ಲಿದೆ? 
ಇಂಡಿ ಒಕ್ಕೂಟದಲ್ಲಿ ಕೆಲ ಸ್ನೇಹಿತರಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಪದಗ್ರಹಣಕ್ಕೆ ಹಲವಾರು ನಾಯಕರು ಬಂದರು. ಆದರೆ ಈಗ ಸರ್ಕಾರ ಬೇರೆ, ಈಗಿನ ಸರ್ಕಾರದ ಉದ್ದೇಶವು ಅವರಿಗೆ ಗೊತ್ತಿದೆ. ಆದ್ದರಿಂದ ಇದರ ಉದ್ದೇಶದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ನಾನು ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಮಾಧ್ಯಮದ ಸುದ್ದಿಗಳನ್ನ ನೋಡಿದ್ರೆ, ಮೂರು ಬಾರಿ ಇಂಡಿಯಾದವರು ಮೀಟಿಂಗ್ ಮಾಡಿದ್ದಾರೆ. ಪ್ರಧಾನಮಂತ್ರಿ ‌ಅಭ್ಯರ್ಥಿ ಘೋಷಣೆ ಇರಲಿ, 28 ಪಾರ್ಟಿಗಳು ಸೇರಿ ಮೋದಿ, ಬಿಜೆಪಿಗೆ ಸೆಡ್ಡು ಹೊಡೆಯಲು ಹೊರಟಿದ್ದಾರೆ. ಸೆಪ್ಟೆಂಬರ್ ಒಳಗೆ ಒನ್ ಟು ಒನ್ ಕ್ಯಾಂಡಿಡೇಟ್‌ ಮಾಡುತ್ತೇವೆ ಎಂದಿದ್ದರು. ಈವರೆಗೆ ಏನೂ ಸುಳಿವಿಲ್ಲ. ಇನ್ನು ರಾಜ್ಯದಲ್ಲಿ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ನಾನು ಯಾರನ್ನೂ ಟೀಕಿಸಲು ಮಾತನಾಡೊಲ್ಲ ಎಂದು ಹೇಳಿದರು.

ಕಾವೇರಿ ಹೋರಾಟ ವಿಚಾರವಾಗಿ ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು: ಕಾವೇರಿ ನೀರಿನ ವಿಷಯದಲ್ಲಿ ನಿಮ್ಮ ‌ಮುಂದೆ ಹೇಳುವಷ್ಟು ಶಕ್ತಿ ಇಲ್ಲ. ಕುಮಾರಸ್ವಾಮಿಯವರು ಸಿದ್ದರಾಮಯ್ಯರವರ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ‌ ನಡೆದ ಮಾತಿನ ಸಾರಾಂಶವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಒಂದ್ಕಡೆ ಸುಪ್ರೀಂಕೋರ್ಟ್ ನಲ್ಲಿ ತೀರ್ಮಾನವನ್ನ ಕೊಡ್ಲಿಲ್ಲ. ಪ್ರಾಧಿಕಾರ ಇನ್ನೂ‌ ಏನೂ ತೀರ್ಮಾನ ಮಾಡಿಲ್ಲ. ಮಂಡ್ಯದಲ್ಲಿ ಕಾವೇರಿ ಹೋರಾಟ ನೆಡೀತಾ ಇದೆ. ನಾನು ಹೇಳ್ಬೇಕಾದ ಜವಾಬ್ದಾರಿ‌ ಇದೆ. ನಾನು ಇನ್ನು ಏನೂ ಮಾತನಾಡಿಲ್ಲ. ನಾನು ಮಾತನಾಡುವ ಟೈಮ್ ಬರಬೇಕು, ಬಂದಾಗ ಮಾತಾಡ್ತೇನೆ. ಈಗ ನಾನು ಏನೂ ಮಾತನಾಡೋದಿಲ್ಲ. ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನಿವೇಶ ಬಂದಾಗ ಮಾತನಾಡುತ್ತೇನೆ. ಈಗ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು. 

ಕೊನೆ ಉಸಿರಿನವರೆಗೂ ಪಕ್ಷಕ್ಕಾಗಿ ಹೋರಾಟ: ಚುನಾವನೆಗೂ ಪೂರ್ವದಲ್ಲಿ ಕೆಲವು ಆಯ್ದ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡುತ್ತೇನೆ. ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ‌ಪ್ರವಾಸ ಮಾಡ್ತಾ ಇದ್ದಾರೆ. ಈಗಾಗಲೇ ಎರಡು ಕಾರ್ಯಕ್ರಮಗಳನ್ನ ಘೋಷಿಸಿದ್ದಾರೆ. ನಮ್ಮ‌ ಒಬ್ಬ ಕಾರ್ಯಕಾರ್ತನೂ ಪಕ್ಷ ಬಿಡಲು ಅವಕಾಶ ಇಲ್ಲ. ನನ್ನ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಡುತ್ತಿದ್ದೇನೆ. 40 ವರ್ಷದಿಂದ ಪ್ರದೇಶಿಕ ಪಕ್ಷ ಉಳಿಸಲು ಹೋರಾಡುತ್ತೇನೆ. ನನಗೆ ಎಲ್ಲಿವರೆಗೂ ಕೈಕಾಲು ಆಡುತ್ತೋ ಅಲ್ಲಿವರೆಗೆ, ಕೊನೆ ಉಸಿರಿರೋವರೆಗೆ ಪಕ್ಷಕ್ಕಾಗಿ ಹೋರಾಡುತ್ತೇನೆ. 

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆಗೆ ಮುಕ್ತಿ: ಯುಪಿಐ ಸ್ಕ್ಯಾನ್‌ ಮಾಡಿ ಟಿಕೆಟ್‌ ತಗೊಳ್ಳಿ

ಕುಮಾರಸ್ವಾಮಿ ಆರೋಗ್ಯಕ್ಕಾಗಿ ಪ್ರಾರ್ಥನೆ:  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅನಾರೋಗ್ಯ ಕಾಣಿಸಿಕೊಂಡ ಬೆನ್ನಲ್ಲಿಯೇ ಅವರ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ತವರು ಜಿಲ್ಲೆ ಹಾಸನ ಸಮೀಪದ ಬೈಲಹಳ್ಳಿ ಲಕ್ಷ್ಮಿ ಜನಾರ್ಧನ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಎಚ್.ಡಿ.ದೇವೇಗೌಡರು ನಿನ್ನೆ ಪತ್ನಿ ಚೆನ್ನಮ್ಮ ಜೊತೆಗೂಡಿ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಇಂದು ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮಕ್ಕೆ ಭೇಟಿ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್ ಸಾಥ್ ನೀಡಿದ್ದಾರೆ. ಜೊತೆಗೆ, ಮೊಮ್ಮಗ ಪ್ರಜ್ವಲ್‌ರೇವಣ್ಣ ಸಂಸದ ಸ್ಥಾನ ಅಸಿಂಧು ಎಂದು ತೀರ್ಪು ಬಂದ ದಿನದಿಂದ ತವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕುಟುಂಬಕ್ಕೆ ಎದುರಾಗಿರೊ ಸಂಕಷ್ಟ ದೂರಾಗಲಿ ಎಂದು ದೇವರ ಮೊರೆ ಹೋಗಿದ್ದಾರೆ.

click me!