
ಕಲಬುರಗಿ, (ಜೂನ್.13): ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈಗಾಗಲೇ ಸ್ವತಃ ಸಿಎಂ ಬಿಎಸ್ವೈ, ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಷಯವು ಯೋಗ್ಯ ಮತ್ತು ಅಯೋಗ್ಯತೆ ಮೇಲೆ ನಿರ್ಧಾರವಾಗಲಿ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ಯೋಗ್ಯರಾಗಿದ್ದರೆ ಮುಂದುವರೆಸಲಿ. ಆ ಸ್ಥಾನಕ್ಕೆ ಅಯೋಗ್ಯರಾಗಿದ್ದರೆ ಅವರನ್ನು ತೆಗೆಯಲಿ ಎಂದು ಹೇಳಿದರು.
ಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಬಿಎಸ್ವೈ ಪರ ಮತ್ತೊಮ್ಮೆ ಅರುಣ್ ಸಿಂಗ್ ಬ್ಯಾಟಿಂಗ್
ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನ ನಿರ್ಧಾರ ಮಾಡುವುದು ಹೈಕಮಾಂಡ್. ನಾವು ಸ್ವಾಮಿಗಳು ಅಲ್ಲ. ನಾವು ಹೇಳಿದ ತಕ್ಷಣಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಮುಂದುವರೆಯುವುದಿಲ್ಲ ಎಂದೇನು ಇಲ್ಲ. ಆ ಸ್ವಾಮಿಗಳು ಬೆಂಬಲ ಕೊಟ್ಟರು. ಈ ಸ್ವಾಮಿಗಳು ಬೆಂಬಲ ಕೊಟ್ಟರು ಎನ್ನುವುದು ಸುಮ್ಮನೆ. ಅದು ವ್ಯರ್ಥ ಕೂಡ. ಮೇಲಿರುವವರು ಯಾರ ಮಾತನ್ನೂ ಕೇಳುವುದಿಲ್ಲ. ಅವರದ್ದೇ ಸಿದ್ಧಾಂತ ಇರುತ್ತದೆ. ತೆಗೆಯಬೇಕೆಂದರೆ ತೆಗೆದು ಬಿಡುತ್ತಾರೆ ಎಂದರು.
ಮುಖ್ಯಮಂತ್ರಿಗಳ ಪರವಾಗಿ ಸ್ವಾಮೀಜಿಗಳು ಮಾತನಾಡುವ ಪದ್ಧತಿ ಈ ಹಿಂದೆ ಇರಲಿಲ್ಲ. ಕಲಬುರಗಿ ಜಿಲ್ಲೆಯವರೇ ಆಗಿದ್ದ ವೀರೇಂದ್ರ ಪಾಟೀಲ ಮತ್ತು ಧರಂಸಿಂಗ್ ಕೂಡ ಮುಖ್ಯಮಂತ್ರಿಗಳಾಗಿದ್ದರು. ಇವರ ಪರವಾಗಿ ಯಾವ ಸ್ವಾಮಿ ಕೂಡ ಮಾತನಾಡಿರಲಿಲ್ಲ. ಧರಂಸಿಂಗ್ ಮನೆ ಸ್ವಾಮಿಗಳ ಕೇಂದ್ರವಾಗಿತ್ತು. ಆದರೂ, ಯಾವ ಸ್ವಾಮಿ ಮಾತನಾಡಿರಲಿಲ್ಲ ಎಂದು ತಿಳಿಸಿದರು.
ಈಗ ಯಡಿಯೂರಪ್ಪ ವಿಷಯ ಎಂದಾಗ ಎಲ್ಲಾ ಮಠಾಧೀಶರು ಮಾತನಾಡಲು ಶುರು ಮಾಡುತ್ತಾರೆ. ಯಾಕೆ ಎಲ್ಲ ಮಠಗಳಿಗೆ 50 ಲಕ್ಷ ರೂ. ಬರೆದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಎಂದೂ ಅವರು ಪ್ರಶ್ನಿಸಿದರು.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸುವುದಕ್ಕಾಲಿ ಅಥವಾ ತೆಗೆಯಲು ಸ್ವಾಮಿಗಳು ಮಾತನಾಡುವುದೇ ಸರಿಯಲ್ಲ. ಇದನ್ನು ನಿರ್ಧಾರ ಮಾಡುವುದಕ್ಕೆ ರಾಜಕೀಯ ಇದೆ. ಅವರ ಪಕ್ಷದ ವರಿಷ್ಠರು ಇದ್ದಾರೆ. ಅವರೇ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅಯೋಗ್ಯನಾಗಿದ್ದರೆ ತೆಗೆಯುತ್ತಾರೆ. ಯೋಗ್ಯತೆ ಇತ್ತು ಎಂದರೆ ಮುಂದುವರೆಸುತ್ತಾರೆ ಅಷ್ಟೇ. ಇದರ ಬಗ್ಗೆ ನಾವು ಮಠಾಧೀಶರು ತಲೆಕೆಡಿಸಿಕೊಳ್ಳಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.