ಜನರ ಸಮಸ್ಯೆ ಅರಿಯಲು ಜೆಡಿಎಸ್‌ ಪಂಚರತ್ನ ಯಾತ್ರೆ: ಸಿಎಂ ಇಬ್ರಾಹಿಂ

By Kannadaprabha NewsFirst Published Feb 3, 2023, 8:00 PM IST
Highlights

ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ಮತ್ತು ಕುಮಾರಸ್ವಾಮಿ ಸೇರಿ ಜೋಡೆತ್ತಿನಂತೆ ದುಡಿಯುತ್ತಿದ್ದೇವೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ 

ಖಾನಾಪುರ(ಫೆ.03): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಗ್ರಹಿಸಿದರು. ಗುರುವಾರ ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಖಾನಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಉದ್ಯಮಿ ಹಾಗೂ ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ನಾಸೀರ ಬಾಗವಾನ ಅವರ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷ ಈಗಾಗಲೇ ರಾಜ್ಯಾದ್ಯಂತ ಪಂಚರತ್ನ ಯಾತ್ರೆಯನ್ನು ಕೈಗೊಂಡು ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿಯುವ ಪ್ರಯತ್ನ ಕೈಗೊಂಡಿದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ಮತ್ತು ಕುಮಾರಸ್ವಾಮಿ ಸೇರಿ ಜೋಡೆತ್ತಿನಂತೆ ದುಡಿಯುತ್ತಿದ್ದೇವೆ. ಜನರ ಆಶೀರ್ವಾದ ಸಿಕ್ಕರೆ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ, ಉಚಿತ ಆರೋಗ್ಯ ಸೇವೆ, ಉತ್ತಮ ಗುಣಮಟ್ಟದ ಶಿಕ್ಷಣ, 65 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮಾಸಿಕ 5 ಸಾವಿರ ಪಿಂಚಣಿ ಸೇರಿದಂತೆ ರೈತರ ಮತ್ತು ಬಡವರ ಉದ್ಧಾರಕ್ಕೆ ಅಗತ್ಯ ಯೋಜನೆಗಳನ್ನು ಜಾರಿಗೆ ತಂದು ಜನಪರ ಆಡಳಿತ ನೀಡುತ್ತೇವೆ ಎಂದರು.

ಬಾಗವಾನ ಅವರು ಮೊದಲೇ ಘೋಷಿಸಿದಂತೆ ಸರ್ವಧರ್ಮ ಸಮ್ಮೇಳನ ಮತ್ತು ಸಂತರ ಉತ್ಸವವನ್ನು ಆಯೋಜಿಸುವ ಮೂಲಕ ತಮ್ಮ ಜನ್ಮದಿನವನ್ನು ಅಪಾರ ಜನಸಾಗರದ ನಡುವೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಭವ್ಯ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಮುಖಂಡರ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ವಿವಿಧ ಭಾಗಗಳಿಂದ ಜೆಡಿಎಸ್‌ ಕಾರ್ಯಕರ್ತರು, ಬಾಗವಾನ ಅವರ ಅಸಂಖ್ಯಾತ ಅಭಿಮಾನಿಗಳು ತಂಡೋಪತಂಡವಾಗಿ ಬಂದಿದ್ದರು.

Union Budget: ಕೇಂದ್ರದ ಬಜೆಟ್‌ಗೆ ಪರ-ವಿರೋಧ

ಸರ್ವ ಧರ್ಮ ಸಮ್ಮೇಳನದ ಅಂಗವಾಗಿ ಲಕ್ಷ್ಮೇಶ್ವರದ ವಿಮಲ ರೇಣುಕಾ ವೀರಮುಕ್ತಿಮನಿ ಶ್ರೀ, ಬೆಳಗಾವಿ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಶ್ರೀ, ಮುತ್ನಾಳ ಕೇದಾರ ಶಾಖಾಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀ, ಹಿರೇಮುನವಳ್ಳಿ ಶಾಂಡಿಲ್ಯ ಮಠದ ಶಂಭುಲಿಂಗ ಶಿವಾಚಾರ್ಯ ಶ್ರೀ, ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವದೇವರು, ಹುಣಸಿಕಟ್ಟಿಹೊಸಮಠದ ಚಂಬಯ್ಯ ಶ್ರೀ, ಹಿಡಕಲ್‌ ಅಡವಿಶ್ವರ ಮಠದ ಶ್ರೀ, ಗುರುಸಿದ್ಧಯ್ಯ ಸಿದ್ಧಯ್ಯ ಸ್ವಾಮಿಜಿ, ಹಜರತ್‌ ಸಯ್ಯದ ಅರ್ಷಿಪಾ ಖಾದ್ರಿ ಹಿರೇಬಾಗೇವಾಡಿ ದರ್ಗಾ, ಸ್ಥಳೀಯ ಹಫೀಜ್‌ ಹಿದಾಯತ್‌ ಮುಲ್ಲಾ ಸೇರಿದಂತೆ ವಿವಿಧ ಧರ್ಮಗುರುಗಳನ್ನು ನಾಸೀರ ಬಾಗವಾನ ಸತ್ಕರಿಸಿದರು. ಗಂದಿಗವಾಡ ರಾಜಗುರು ಸಂಸ್ಥಾನ ಹಿರೇಮಠದ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಸೀರ ಬಾಗವಾನ, ತಮ್ಮ ಜನುಮದಿನದಂದು ತಮ್ಮನ್ನು ಹರಸಲು ತಮ್ಮ ಮೇಲಿನ ಪ್ರೀತಿ-ವಿಶ್ವಾಸದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನಸಮೂಹವನ್ನು ಕಂಡು ತಾವು ಮೂಕವಿಸ್ಮಿತರಾಗಿದ್ದು, ಇಂದು ನರೆದಿರುವ ಪ್ರತಿಯೊಬ್ಬರೂ ತಮಗೆ ಅಮೂಲ್ಯವಾದ ಮತವನ್ನು ಬಿಕ್ಷೆಯ ರೂಪದಲ್ಲಿ ನೀಡಿದರೆ ಆ ಮತದ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ತಮ್ಮೆಲ್ಲರ ಋುಣವನ್ನು ತೀರಿಸುವುದಾಗಿ ಹೇಳಿದರು.

ಸರ್ಕಾರದ ಎಡವಟ್ಟು: 40 ವರ್ಷ ವಾಸವಿರುವ ಜಿನರಾಳ ಗ್ರಾಮ ಖಾಲಿ ಮಾಡುವಂತೆ ನೋಟಿಸ್‌

ವೇದಿಕೆಯಲ್ಲಿ ವಿಧಾನ ಪರಿಷತ್‌ ಮಾಜಿ ಉಪಾಧ್ಯಕ್ಷ ಸಚ್ಚಿದಾನಂದ ಖೋತ, ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಮೇಘಾ ಕುಂದರಗಿ, ಬಸವಪ್ರಭು ಹಿರೇಮಠ, ಈರಯ್ಯ ಹಿರೇಮಠ, ವಿಶಾಲ ಪಾಟೀಲ, ರವಿ ಕಾಡಗಿ ಸೇರಿದಂತೆ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು, ಬಾಗವಾನ ಅವರ ಅಭಿಮಾನಿಗಳು, ಮತ್ತಿತರರು ಇತರರು ಇದ್ದರು. ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಎಂ.ಎಂ ಸಾಹುಕಾರ ಸ್ವಾಗತಿಸಿದರು. ಲಿಯಾಕಲಿ ಬಿಚ್ಚುನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹುಬ್ಬಳ್ಳಿ ವಂದಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ತಾಲೂಕಿನ ಹಲವು ಮುಖಂಡರನ್ನು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ನಾಸೀರ ಬಾಗವಾನ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಸಂಜೆ ಪಂಢರಪುರದ ಗುರುವರ್ಯ ಗೋಪಾಳದೇವ ತುಕಾರಾಮ ವಾಸ್ಕರ ಮಹಾರಾಜರ ಸಾನ್ನಿಧ್ಯದಲ್ಲಿ ಕೀರ್ತನೆ ಮತ್ತು ಸಾಧು ಸಂತರ ಸಮ್ಮೇಳನ ಜರುಗಿತು. ನಾಸೀರ ಬಾಗವಾನ ವಿವಿಧ ಗ್ರಾಮಗಳ ಸಾಧು ಸಂತರನ್ನು ಸನ್ಮಾನಿಸಿದರು. ರಾತ್ರಿ ಮಹಾರಾಷ್ಟ್ರದ ಪುಣೆಯ ಕಲಾವಿದರಿಂದ ಲಾವಣಿ ಆಯೋಜಿಸಲಾಗಿತ್ತು.

click me!