ಬೀದರ್‌ನಲ್ಲಿ ಇಂದು 2ನೇ ಹಂತದ ಪಂಚರತ್ನ ಯಾತ್ರೆ ಆರಂಭ: ಎಚ್‌.ಡಿ.ಕುಮಾರಸ್ವಾಮಿ

By Govindaraj SFirst Published Jan 5, 2023, 9:04 AM IST
Highlights

ಜೆಡಿಎಸ್‌ನ ಎರಡನೇ ಹಂತದ ಪಂಚರತ್ನ ರಥಯಾತ್ರೆ ಗುರುವಾರ ಉತ್ತರ ಕರ್ನಾಟಕದ ಬೀದರ್‌ ಜಿಲ್ಲೆಯಿಂದ ಪ್ರಾರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 
 

ಬೆಂಗಳೂರು (ಜ.05): ಜೆಡಿಎಸ್‌ನ ಎರಡನೇ ಹಂತದ ಪಂಚರತ್ನ ರಥಯಾತ್ರೆ ಗುರುವಾರ ಉತ್ತರ ಕರ್ನಾಟಕದ ಬೀದರ್‌ ಜಿಲ್ಲೆಯಿಂದ ಪ್ರಾರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಥಯಾತ್ರೆ ಆರಂಭವಾಗಲಿದೆ. ಬೀದರ್‌ ಮತ್ತು ಕಲಬುರಗಿಯಲ್ಲಿ ಜ.13ರವರೆಗೆ ನಡೆಯಲಿದೆ. ಬೀದರ್‌ ಜಿಲ್ಲೆಯಲ್ಲಿ ನಾಲ್ಕು ದಿನ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಐದು ದಿನ ರಥಯಾತ್ರೆ ನಡೆಯಲಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜ.14 ರಿಂದ 16ರವರೆಗೆ ವಿರಾಮ ಇರಲಿದೆ. ಜ.17ರಿಂದ ಇಂಡಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ರಥಯಾತ್ರೆ ನಡೆಯಲಿದೆ. ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಳೆ ಮೈಸೂರು ಭಾಗದಲ್ಲಿ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಶಕ್ತಿ ಇಲ್ಲ ಎನ್ನುವುದು ನಮ್ಮ ವಿರೋಧಿಗಳ ಅಭಿಪ್ರಾಯ. ಆದರೆ, ಆ ಭಾಗದಲ್ಲಿ ಕನಿಷ್ಠ 35 ಸ್ಥಾನ ಉತ್ತರ ಕರ್ನಾಟಕದಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತೇವೆ. ನಾವು ನಮ್ಮ ವಿಚಾರಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ, ಯಾವುದೂ ಇರುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದು ನಮ್ಮ ಕುಟುಂಬ ಮತ್ತು ಜೆಡಿಎಸ್‌ ಕುರಿತು ಟೀಕೆ ಮಾಡಿರುವುದಕ್ಕೆ ಈಗಾಗಲೇ ಹೇಳಿದ್ದೇನೆ. ಸ್ವತಂತ್ರ ಸರ್ಕಾರ ತರುವುದು ನಮ್ಮ ಗುರಿ. ಜೆಡಿಎಸ್‌ ಪಕ್ಷವನ್ನು 35 ಸೀಟುಗಳಿಗೆ ಕಟ್ಟಿಹಾಕುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಕೊನೆ ಪಕ್ಷ ಅಷ್ಟುಸೀಟು ಗೆಲ್ಲುತ್ತೇವೆ ಎಂದಿದ್ದಾರೆ. ಅದಕ್ಕೆ ನಾನು ಆಭಾರಿ ಎಂದು ಟಾಂಗ್‌ ಕೊಟ್ಟರು.

ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್‌ ಶಾಗೆ ಎಚ್‌ಡಿಕೆ ತಿರುಗೇಟು

ಬಿಜೆಪಿ -ಕಾಂಗ್ರೆಸ್‌ ರೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ಮಾಡಿಕೊಂಡು ಹೋಗುತ್ತಿಲ್ಲ. ಪಂಚರತ್ನ ನಮ್ಮ ಕಾರ್ಯಕ್ರಮ ಮಾತ್ರ. ಜನರಿಗೆ ಅದನ್ನು ಮಾತ್ರ ಹೇಳುತ್ತೇವೆ. ಈಗಾಗಲೇ ಪಂಚರತ್ನ ರಥಯಾತ್ರೆಯ ಮೊದಲ ಹಂತಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 34 ದಿನಗಳ 34 ಕ್ಷೇತ್ರಗಳ ರಥಯಾತ್ರೆಯಲ್ಲಿ ಬಹುತೇಕ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ರಾಜಾ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

ಎಚ್‌ಡಿಕೆಯವರಿಂದ ಕ್ಷೇತ್ರದ 12 ಸಾವಿರ ರೈತರ ಸಾಲಮನ್ನಾ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಲಬುರ್ಗಾ ಕ್ಷೇತ್ರದ 12 ಸಾವಿರ ರೈತರ ಸಾಲಮನ್ನಾ ಮಾಡಿದ್ದರು ಎಂದು ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಮಲ್ಲನಗೌಡ್ರು ಕೋನನಗೌಡ್ರು ಹೇಳಿದರು. ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜರುಗಿದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡಿ ಅವರನ್ನು ಋುಣಮುಕ್ತ ಮಾಡಿದ್ದರು. ಯಲಬುರ್ಗಾ ಕ್ಷೇತ್ರದಲ್ಲಿ 12 ಸಾವಿರ ರೈತರು ಅದರ ಸದುಪಯೋಗ ಪಡೆದಿದ್ದರು. ನಂತರ ಆಡಳಿತಕ್ಕೆ ಬಂದ ಯಾವ ಸರ್ಕಾರ ಸಹ ರೈತರ ಸಾಲಮನ್ನಾ ಮಾಡಲು ಮುಂದೆ ಬಂದಿಲ್ಲ. ಅಲ್ಲದೆ ಭಾನಾಪುರದ ಗೊಂಬೆ ಕ್ಲಸ್ಟರ್‌ನ್ನು ಸಹ ಕುಮಾರಸ್ವಾಮಿ ಅವರು ಜಾರಿಗೆ ತಂದರು. 

ದೇವೇಗೌಡರ ಉಗುರಿಗೂ ಅಮಿತ್‌ ಶಾ ಸಮ ಅಲ್ಲ: ಎಚ್‌.ಡಿ.ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿದ್ದ ಕೃಷ್ಣಾ ಬೀ ಸ್ಕೀಂಗೆ ಅನುಮೋದನೆ ನೀಡಿ .200 ಕೋಟಿ ಕಾಮಗಾರಿ ಆರಂಭಕ್ಕೆ ನೀಡಿದರು. ಜನರಿಗೆ ಉದ್ಯೋಗ ನೀಡಲು ನೇಮಕಾತಿಗಳು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜರುಗಿವೆ. ಅಲ್ಲದೆ ಹಲವಾರು ಜನಪರ, ರೈತಪರ ಕಾರ್ಯ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು. ಕುಮಾರಸ್ವಾಮಿ ಅವರ ಆಡಳಿತ ಭ್ರಷ್ಟಾಚಾರ ರಹಿತ ಆಗಿದೆ. ಅವರ ಆಡಳಿತದಲ್ಲಿ ಇದ್ದಂತ ಸುವ್ಯವಸ್ಥೆ ಉಳಿದ ಪಕ್ಷಗಳು ಆಡಳಿತಕ್ಕೆ ಬಂದಾಗ ಉಳಿದಿಲ್ಲ. ಬಡಜನರ ಕಷ್ಟಕ್ಕೆ ಆಸರೆ ಆಗಲು ಅವರು ಜನತಾ ದರ್ಶನ ಮಾಡಿದರು. ತಾವು ಸಿಎಂ ಆಗಿದ್ದರೂ ಸಾಮಾನ್ಯನಂತೆ ಇದ್ದು, ಸರ್ಕಾರ ನಡೆಸಿದರು. ಮತ್ತೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಅವರು ಸಿಎಂ ಆಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.

click me!