ಜೆಡಿಎಸ್‌ ಮುಖಂಡ ಇಂದು ಕಾಂಗ್ರೆಸ್‌ಗೆ: ಕುಮಾರಸ್ವಾಮಿಗೂ ನನಗೂ ಸಂಬಂಧವಿಲ್ಲ ಎಂದ ದಳ ನಾಯಕ

By Kannadaprabha NewsFirst Published Sep 15, 2023, 11:56 AM IST
Highlights

ಜೆಡಿಎಸ್‌ನ ಪ್ರಮುಖ ನಾಯಕರು ಅವರ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಅವರು ಈಗ ಪಕ್ಷದ ಬಗ್ಗೆ ಬೇಸರಗೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಪದ್ಮನಾಭನಗರ ಕ್ಷೇತ್ರವಷ್ಟೇ ಅಲ್ಲದೆ ಬೆಂಗಳೂರಿನ ಬೇರೆ ಕ್ಷೇತ್ರಗಳ ಬಿಜೆಪಿ-ಜೆಡಿಎಸ್‌ನ ನಾಯಕರು ಕಾಂಗ್ರೆಸ್‌ ಸೇರಲು ಆಸಕ್ತಿ ಹೊಂದಿದ್ದಾರೆ. ಶುಕ್ರವಾರ ಹಲವು ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ: ಡಿ.ಕೆ. ಸುರೇಶ್‌.

ಬೆಂಗಳೂರು(ಸೆ.15):  ಬೆಂಗಳೂರಿನಲ್ಲಿ ಪಕ್ಷದ ಬಲವರ್ಧನೆಗಾಗಿ ಹಾಗೂ ಕಾಂಗ್ರೆಸ್‌ನ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಜೆಡಿಎಸ್‌ ಮುಖಂಡರ ಪ್ರಸಾದ್ ಬಾಬು (ಕಬಡ್ಡಿ ಬಾಬು) ಅವರನ್ನು ಗುರುವಾರ ಭೇಟಿಯಾಗಿ ಪಕ್ಷ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, ಜೆಡಿಎಸ್‌ನ ಪ್ರಮುಖ ನಾಯಕರು ಅವರ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಅವರು ಈಗ ಪಕ್ಷದ ಬಗ್ಗೆ ಬೇಸರಗೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಪದ್ಮನಾಭನಗರ ಕ್ಷೇತ್ರವಷ್ಟೇ ಅಲ್ಲದೆ ಬೆಂಗಳೂರಿನ ಬೇರೆ ಕ್ಷೇತ್ರಗಳ ಬಿಜೆಪಿ-ಜೆಡಿಎಸ್‌ನ ನಾಯಕರು ಕಾಂಗ್ರೆಸ್‌ ಸೇರಲು ಆಸಕ್ತಿ ಹೊಂದಿದ್ದಾರೆ. ಶುಕ್ರವಾರ ಹಲವು ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್‌ ಬಲಪಡಿಸಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

Latest Videos

ಬಿಜೆಪಿ ಜತೆ ಮೈತ್ರಿ ಆಗದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ: ಮಾಜಿ ಸಂಸದ ಶಿವರಾಮೇಗೌಡ

ಪ್ರಸಾದ್‌ ಬಾಬು ಮಾತನಾಡಿ, ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ಜನಮನ್ನಣೆ ದೊರೆತಿದೆ. ಕಾಂಗ್ರೆಸ್‌ನ ತತ್ವ ಸಿದ್ಧಾಂತ ಒಪ್ಪಿ ಪಕ್ಷ ಸೇರಲು ತೀರ್ಮಾನಿಸಿದ್ದೇನೆ. ನನಗಾಗಿ ಯಾವುದೇ ಬೇಡಿಕೆಯನ್ನು ಕಾಂಗ್ರೆಸ್‌ ಮುಂದಿಟ್ಟಿಲ್ಲ. ಆದರೆ, ನನ್ನ ಮಗ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾನೆ. ಹೀಗಾಗಿ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡುವೆ ವಿಶ್ವಾಸವಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೂ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ನನಗೂ ಬೇರೆ ರೀತಿಯ ಸಂಬಂಧವಿಲ್ಲ. ಆದರೆ ಜೆಡಿಎಸ್‌ ಪಕ್ಷ ಬಿಟ್ಟರೂ ಅವರೊಂದಿಗೆ ಅದೇ ವಿಶ್ವಾಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಯಾರಾದರೂ ಅವರ ಬಗ್ಗೆ ನನ್ನ ಬಳಿ ಕೇಳಿದರೆ ಅವರು ನಮ್ಮ ನಾಯಕರು ಎಂದಷ್ಟೇ ಹೇಳುತ್ತೇನೆ ಎಂದು ಹೇಳಿದರು.

click me!