ರಾಯಚೂರು: ದೇವದುರ್ಗ ಗೆಲುವಿಗಾಗಿ ಜೆಡಿಎಸ್ ಹರಸಾಹಸ, ಶಾಸಕ ಶಿವನಗೌಡ ವಿರುದ್ಧ ಪ್ರತಿಭಟನೆ

Published : Nov 05, 2022, 09:23 AM IST
ರಾಯಚೂರು: ದೇವದುರ್ಗ ಗೆಲುವಿಗಾಗಿ ಜೆಡಿಎಸ್ ಹರಸಾಹಸ,  ಶಾಸಕ ಶಿವನಗೌಡ ವಿರುದ್ಧ ಪ್ರತಿಭಟನೆ

ಸಾರಾಂಶ

ಗೂಂಡಾಗಿರಿ ಅಳಿಸಿ ದೇವದುರ್ಗ ಉಳಿಸಿ ಹೋರಾಟ, ಜೆಡಿಎಸ್ ದೇವದುರ್ಗದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ನೇತೃತ್ವದಲ್ಲಿ ಹೋರಾಟ 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ನ.05): ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚಳಿಗಾಲದ ಚಳಿ ಹೆಚ್ಚಾದಂತೆ ರಾಜಕೀಯ ಚಟುವಟಿಕೆಗಳು ಸಹ ಹೆಚ್ಚಾಗುತ್ತಿವೆ. ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ವಿರುದ್ಧ ಈಗ ಜೆಡಿಎಸ್ ಪ್ರತಿಭಟನೆ ಶುರು ಮಾಡಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ. ಶಿವನಗೌಡ ನಾಯಕ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತು ಹೋಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಹೋಗಿದೆ. ಶಾಸಕರು ಜನಪರ ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡುತ್ತಿಲ್ಲ. ಸರ್ಕಾರದ ಹಣವನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ಶಾಸಕರ ನಡೆಯನ್ನ ಖಂಡಿಸಿ ದೇವದುರ್ಗದಲ್ಲಿ ಜೆಡಿಎಸ್ ನಾಯಕರು ವಾಲ್ಮೀಕಿ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಶಾಸಕ ಕೆ. ಶಿವನಗೌಡ ನಾಯಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ನಾಯಕಿ ಕರೆಮ್ಮ ಪ್ರತಿಭಟನೆಗೆ ಕಾರಣವೇನು? 

ಕಳೆದ 20 ವರ್ಷಗಳಿಂದ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆ. ಶಿವನಗೌಡ ನಾಯಕ ಆಡಳಿತ ನಡೆಸುತ್ತಾ ಬಂದಿದ್ದಾರೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಸ್ಪರ್ಧೆ ಮಾಡಿ ಗೆಲುವು ಸಾಧಿಸಬೇಕೆಂದು ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕಾಗಿ ಕಳೆದ 2-3 ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ವಿವಿಧ ಸಮುದಾಯಗಳನ್ನು ಭೇಟಿ ಮಾಡುವುದು, ಸಮಾವೇಶಗಳು ಮಾಡುವುದು, ಜನರ ಸಮಸ್ಯೆ ಗಳು ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಶುರು ಮಾಡಿದ್ದಾರೆ. ದೇವದುರ್ಗ ತಾಲೂಕಿನ ದ್ಯಾಮಲಾ ನಾಯಕ ತಾಂಡಾದ ಕಟ್ಟೆ ದೇವಸ್ಥಾನಕ್ಕೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಕರೆಮ್ಮ ದರ್ಶನಕ್ಕೆ ಹೋಗಿದ್ರು. ದೇವರ ದರ್ಶನಕ್ಕೆ ಹೋದ ವೇಳೆ ಅಲ್ಲಿಗೆ ಬಂದ ಬಿಜೆಪಿ ಕಾರ್ಯಕರ್ತರು ಕರೆಮ್ಮ ಮತ್ತು ಆಕೆಯ ಮಗಳ ಹಾಗೂ ಜೆಡಿಎಸ್ ಕಾರ್ಯಕರ್ತರ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಕರೆಮ್ಮ ಕಟ್ಟೆ ದೇವಸ್ಥಾನದ ಬಳಿಯೇ ಅಂದು ರಾತ್ರಿ ಪ್ರತಿಭಟನೆ ನಡೆಸಿ ಅಸಭ್ಯವಾಗಿ ನಡೆದುಕೊಂಡ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿದ್ರು. 

ಜೋಡೋ ಯಶಸ್ಸು: ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು..!

ಈ ಕುರಿತು ದೇವದುರ್ಗ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು. ಪೊಲೀಸರು ಅಸಭ್ಯವಾಗಿ ವರ್ತಿಸಿದವರನ್ನ ಬಂಧಿಸುವುದಾಗಿ ಭರವಸೆ ‌ನೀಡಿದರು. ಹೀಗಾಗಿ ಅಂದು ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಕರೆಮ್ಮ ಹೋರಾಟ ಕೈಬಿಟ್ಟಿದ್ರು. ಇತ್ತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಜೆಡಿಎಸ್ ಸಮಿತಿ ರಾಯಚೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ವಾಗ್ವಾಳಿ ನಡೆಸಿದರು. ಈಗ ದೇವದುರ್ಗ ತಹಸೀಲ್ದಾರ್ ಕಚೇರಿ ಎದುರು ಗೂಂಡಾಗಿರಿ ಅಳಿಸಿ ದೇವದುರ್ಗ ಉಳಿಸಿ ಹೋರಾಟ ಶುರು ಮಾಡಿದ್ದಾರೆ.

ದೇವದುರ್ಗದಲ್ಲಿ ರಾಜಕೀಯ ಹೈಡ್ರಾಮಾ ಶುರು!

ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಶಿವನಗೌಡ..ಕಳೆದ 20 ವರ್ಷಗಳಿಂದ ರಾಜಕೀಯ ನಡೆಸುತ್ತಾ ಇದ್ದಾರೆ. ಅತೀ ಹಿಂದುಳಿದ ಹಣೆಪಟ್ಟಿ ಹೊಂದಿರುವ ದೇವದುರ್ಗ ತಾಲೂಕು ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಅನುದಾನ ‌ನೀಡಿದೆ. ನಮ್ಮ ಬೊಮ್ಮಾಯಿ ಮತ್ತು ಮೋದಿ ಸರ್ಕಾರ ಬಂದ ಮೇಲೆ  ದೇವದುರ್ಗದಲ್ಲಿ ಶಿಕ್ಷಣ ಕ್ರಾಂತಿ ಆಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತಿವೆ ಎಂದು ಹೇಳುತ್ತಾ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಮತ್ತೆ ಶಾಸಕರಾಗಲು ಕಸರತ್ತು ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಳ್ಳಿ - ಹಳ್ಳಿಗೆ ಓಡಾಟ ಮಾಡಿ ಪಕ್ಷ ಸಂಘಟನೆ ಮಾಡಲು ಶಾಸಕ ಕೆ. ಶಿವನಗೌಡ ಮುಂದಾಗಿದ್ದಾರೆ. 

ಸದ್ಯ ಬಳ್ಳಾರಿಯಲ್ಲಿ ‌ನಡೆಯಲಿರುವ ಎಸ್ ಟಿ ಸಮಾವೇಶಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಓಡಾಟ ನಡೆಸುತ್ತಾ ಎಸ್ ಟಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ್ದಾರೆ. ಇನ್ನೂ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ಬಿ.ವಿ‌.ನಾಯಕ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಮಾತ್ರ ಹೈಕಮಾಂಡ್ ‌ಕಡೆ ಬೆರಳು ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವೂ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಇದ್ದು, ಇಲ್ಲದಂತೆ ಆಗಿದೆ‌. ಇನ್ನೂ ಕಳೆದ 3-4 ವರ್ಷಗಳಿಂದ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಓಡಾಟ ನಡೆಸಿದ ಕರೆಮ್ಮ. ಈ ಬಾರಿ ದೇವದುರ್ಗದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲ್ಲೇ ಬೇಕು ಅಂತ ಪಣತೊಟ್ಟು ಕ್ಷೇತ್ರ ಸುತ್ತಾಟ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ಸಂಗತಿ: ಸಚಿವ ಬೈರತಿ ಬಸವರಾಜ

ಜೆಡಿಎಸ್ ಹೈಕಮಾಂಡ್ ಕೂಡ ದೇವದುರ್ಗದ ಅಭ್ಯರ್ಥಿ ಕರೆಮ್ಮ ಎಂದು ಘೋಷಣೆ ಸಹ ಮಾಡಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಹೀಗಾಗಿ ಕರೆಮ್ಮ ದೇವದುರ್ಗದಲ್ಲಿ ಸಭೆ, ಸಮಾರಂಭ ಮಾಡುತ್ತಾ 2023ರ ಚುನಾವಣೆಗೆ ತಯಾರಿ ‌ನಡೆಸಿದ್ದಾರೆ. ಇದು ಹಾಲಿ ಶಾಸಕ ಕೆ. ಶಿವನಗೌಡ ನಾಯಕ ಬೆಂಬಲಿಗರ ಇರಿಸುಮುರಿಸು ಆಗುತ್ತಿದೆ. ಅಷ್ಟೇ ಅಲ್ಲದೇ ಜೆಡಿಎಸ್ ನಾಯಕಿ ಕರೆಮ್ಮ ತನ್ನ ಪ್ರತಿ ಸಭೆ ಮತ್ತು ಪ್ರತಿಭಟನೆ ವೇಳೆ ಶಾಸಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ದೇವದುರ್ಗ ತಾಲೂಕಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಜಟಾಪಟಿ ಶುರುವಾಗಿದೆ.

ಒಟ್ಟಿನಲ್ಲಿ 2023ರ ವಿಧಾನಸಭಾ ಚುನಾವಣೆಗೆ ಇನ್ನೂ 4-5 ತಿಂಗಳು ಬಾಕಿಯಿದೆ. ಈ ಬಾರಿ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದು ಕರೆಮ್ಮ ಶಾಸಕರ ವಿರುದ್ಧ ಹೋರಾಟದ ಹಾದಿಗೆ ಮುಂದಾಗಿದ್ದಾರೆ. ಆದ್ರೆ ಇತ್ತ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಮಾತ್ರ ದೇವದುರ್ಗದ ಜನರು ನನ್ನ ಕೈಬಿಡಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಯೋಜನೆಗಳು  ತಿಳಿಸುತ್ತಾ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಆದ್ರೆ ದೇವದುರ್ಗದ ಜನರು ಯಾರಿಗೆ ಕೈ ಹಿಡಿಯುತ್ತಾರೆ ಎಂಬುವುದು ‌ಕಾದು ನೋಡಬೇಕಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ