ಮೈತ್ರಿಗೂ ಮುನ್ನ ಕೊಪ್ಪಳದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ..!

By Kannadaprabha NewsFirst Published Sep 27, 2023, 12:10 PM IST
Highlights

ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟಿಸಲಾಗುತ್ತಿದೆ. ಇದಕ್ಕಾಗಿ ಕೋರ್ ಕಮಿಟಿ ಸಭೆಗಳನ್ನು ಮತ್ತು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಮಾವೇಶ ನಡೆಸಲಾಗುತ್ತದೆ. ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮಾಡಿರುವ ಕಾರ್ಯಗಳು, ಜಾರಿ ಮಾಡಿದ ಯೋಜನೆಗಳು ಇನ್ಯಾವ ಸರ್ಕಾರದಲ್ಲೂ ಆಗಿಲ್ಲ. ಇದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ. 

ಕೊಪ್ಪಳ(ಸೆ.27):  ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯನ್ನೊಳಗೊಂಡು ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮತ್ತು ಕೋರ್ ಕಮಿಟಿ ಸಭೆ ಸೆ.27ರಂದು ಮಧ್ಯಾಹ್ನ 12 ಗಂಟೆಗೆ ಶಿವಶಾಂತ ಮಂಗಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಮುಖಂಡ ಹನುಮಂತಪ್ಪ ಆಲ್ಕೋಡ, ಮೈಸೂರು ಭಾಗದಷ್ಟೇ ಬಲಿಷ್ಠವಾಗಿ ಕಲ್ಯಾಣ ಕರ್ನಾಟಕದಲ್ಲೂ ಜೆಡಿಎಸ್ ಪಕ್ಷ ಸಕ್ರಿಯವಾಗಿದೆ. ಇಲ್ಲಿಯೂ ಜೆಡಿಎಸ್ ಕಾರ್ಯಕರ್ತರು, ಪದಾಧಿಕಾರಿಗಳು ಅತ್ಯಂತ ಚಟುವಟಿಕೆಯಿಂದ ಇದ್ದಾರೆ. ಹೀಗಾಗಿಯೇ ಕೊಪ್ಪಳದಲ್ಲಿ ವಿಭಾಗ ಮಟ್ಟದ ಕೋರ್ ಕಮಿಟಿ ಸಭೆ ನಡೆಸಲಾಗುತ್ತಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಡಿಎಂಕೆಯ ಬಿ ಟೀಂ: ಮಾಜಿ ಸಿಎಂ ಕುಮಾರಸ್ವಾಮಿ

ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟಿಸಲಾಗುತ್ತಿದೆ. ಇದಕ್ಕಾಗಿ ಕೋರ್ ಕಮಿಟಿ ಸಭೆಗಳನ್ನು ಮತ್ತು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಮಾವೇಶ ನಡೆಸಲಾಗುತ್ತದೆ. ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮಾಡಿರುವ ಕಾರ್ಯಗಳು, ಜಾರಿ ಮಾಡಿದ ಯೋಜನೆಗಳು ಇನ್ಯಾವ ಸರ್ಕಾರದಲ್ಲೂ ಆಗಿಲ್ಲ. ಇದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಟಿಕೆಟ್ ಕುರಿತು ಈಗಲೇ ಏನು ಹೇಳಲು ಆಗುವುದಿಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಟಿಕೆಟ್ ಹಂಚಿಕೆಯ ಕುರಿತು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಕೇವಲ ನಾಯಕರು ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಎಲ್ಲ ಜಿಲ್ಲಾ ಘಟಕಗಳ ಪದಾಧಿಕಾರಿಗಳನ್ನು ಸಹ ಅಭಿಪ್ರಾಯ ಪಡೆಯಲಾಗಿದೆ ಮತ್ತು ಸಮ್ಮತಿದ್ದಾರೆ. ಕೆಲವೊಂದು ಸಣ್ಣಪುಟ್ಟಣ ಸಮಸ್ಯೆಗಳು ಆಗುವುದು ಸಹಜ. ಅವುಗಳನ್ನು ಪಕ್ಷದ ವರಿಷ್ಠರು ಇತ್ಯರ್ಥ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದರೆ ಕೋಮುವಾದಿ ಪಕ್ಷದೊಂದಿಗೆ ಕೈಜೋಡಿಸುತ್ತದೆ ಎನ್ನುತ್ತಾರೆ. ಆದರೆ, ಈ ಹಿಂದೆ ಕಾಂಗ್ರೆಸ್ ನಲ್ಲಿದ್ದವರು ಬಿಜೆಪಿಗೆ ಹೋಗಿಯೇ ಇಲ್ಲವೇ? ಅನಿವಾರ್ಯವಾದಾಗ ದೇಶದ ಹಿತಕ್ಕಾಗಿ ಮತ್ತು ರಾಜ್ಯದ ಜನರ ಹಿತಕ್ಕಾಗಿ ಇಂಥ ನಿರ್ಧಾರ ಮಾಡಲಾಗುತ್ತದೆ ಎಂದರು.

ಅಧಿಕಾರದ ಆಸೆಗೆ ಬಿಜೆಪಿ ಸಂಗ ಮಾಡಿದ ಜೆಡಿಎಸ್‌ನ ನಿಜ ಬಣ್ಣ ಬಯಲು: ಸಚಿವ ತಿಮ್ಮಾಪೂರ

ಕೊಪ್ಪಳದಲ್ಲಿ ನಡೆಯುತ್ತಿರುವ ಕೋರ್ ಕಮಿಟಿ ಸಭೆ ಮತ್ತು ಕಾರ್ಯಕರ್ತರ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೋರ್ ಕಮಿಟಿ ಕೊಪ್ಪಳ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.

ಪಕ್ಷದ ಹೈಕಮಾಂಡ್ ಮೈತ್ರಿ ಮಾಡಿಕೊಂಡ ಮೇಲೆ ನಾವು ಸಹ ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಕೊಪ್ಪಳ ಟಿಕೆಟ್ ಕುರಿತು ಈಗಲೇ ಏನು ಹೇಳಲು ಆಗುವುದಿಲ್ಲ ಎಂದರು. ಶಾಸಕ ನೇಮಿರಾಜ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಇದ್ದರು.

click me!