ಜೆಡಿಎಸ್‌, ಕಾಂಗ್ರೆಸ್‌ ಯಾತ್ರೆಗೆ ತೊಂದರೆ ಮಾಡಲ್ಲ: ಸಚಿವ ಸುಧಾಕರ್‌

By Govindaraj SFirst Published Dec 27, 2022, 2:20 AM IST
Highlights

ಜೆಡಿಎಸ್‌ ಪಕ್ಷದ ಪಂಚರತ್ನ ಯಾತ್ರೆಗೂ ಅಡ್ಡಿ ಪಡಿಸಲ್ಲ. ಕಾಂಗ್ರೆಸ್‌ನ ಬಸ್‌ ಯಾತ್ರೆಗೂ ತೊಂದರೆ ಮಾಡಲ್ಲ. ಆದರೆ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿ ಎಂಬುದಷ್ಟೇ ನಮ್ಮ ಕಳಕಳಿ ಮನವಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

ಸುವರ್ಣಸೌಧ (ಡಿ.27): ಜೆಡಿಎಸ್‌ ಪಕ್ಷದ ಪಂಚರತ್ನ ಯಾತ್ರೆಗೂ ಅಡ್ಡಿ ಪಡಿಸಲ್ಲ. ಕಾಂಗ್ರೆಸ್‌ನ ಬಸ್‌ ಯಾತ್ರೆಗೂ ತೊಂದರೆ ಮಾಡಲ್ಲ. ಆದರೆ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿ ಎಂಬುದಷ್ಟೇ ನಮ್ಮ ಕಳಕಳಿ ಮನವಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ವಿಪತ್ತು ನಿರ್ವಹಣಾ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಯಾತ್ರೆಗೂ ಅಡ್ಡಿಪಡಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಆ ಪಕ್ಷಗಳಲ್ಲಿ ಹಲವರು ಹಿರಿಯರಿದ್ದಾರೆ. ಅವರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಮಾಸ್ಕ್‌ ಧರಿಸಿ ಯಾತ್ರೆಗಳನ್ನು ನಡೆಸಲಿ ಎಂದು ಸಲಹೆ ಮಾಡಿದರು. ಯಾವುದೇ ಕಾರ್ಯಕ್ರಮಕ್ಕೂ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ಆತಂಕ ಬೇಡ, ಮುಂಜಾಗ್ರತೆ ಅಗತ್ಯ: ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕೋವಿಡ್‌ ವ್ಯಾಕ್ಸಿನೇಷನ್‌ ನೀಡಿಕೆ ಪ್ರಮಾಣ ತುಂಬಾ ಉತ್ತಮವಾಗಿ ಆಗಿದೆ. ಜತೆಗೆ ನಮ್ಮ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ. ಹಾಗಾಗಿ ಕೋವಿಡ್‌ ಬಂದರೆ ಯಾರೂ ಆತಂಕಪಡಬೇಕಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಪರಿಣಾಮದ ವಿಚಾರದಲ್ಲಿ ನಾವು ಚೀನಾಗೆ ಹೋಲಿಕೆ ಮಾಡುವುದು ಬೇಡ. ಈಗಾಗಲೇ ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್‌ ಉತ್ತಮ ರೀತಿಯಲ್ಲಿ ಆಗಿರುವುದರಿಂದ ಹಾಗೂ ಲಾಕ್‌ಡೌನ್‌ ತೆರವುಗೊಳಿಸಿ ಸಮುದಾಯದಲ್ಲಿ ಸಂಪೂರ್ಣ ಕೋವಿಡ್‌ ಹರಡಿಹೋಗಿರುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿದೆ. ನಾವು ಈಗ ಕೋವಿಡ್‌ ನಿಯಂತ್ರಣ ವಿಷಯದಲ್ಲೂ ಇತರೆ ದೇಶಗಳಿಗಿಂತ ಎರಡುಪಟ್ಟು ಹೆಚ್ಚು ಉತ್ತಮ ಶಕ್ತಿ, ಸೌಲಭ್ಯಗಳನ್ನು ಹೊಂದಿದ್ದೇವೆ ಎಂದರು.

‘ಹಾಗಾಗಿ ಸೋಂಕು ದೃಢಪಟ್ಟರೆ ಯಾರೂ ಗಾಬರಿಗೊಳ್ಳಬೇಕಿಲ್ಲ. ಸಾಮಾನ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು. ಜನ ಜಂಗುಳಿ ಇರುವೆಡೆ ಮಾಸ್‌್ಕ ಧರಿಸುವುದು ಒಳ್ಳೆಯದು. ಇನ್ನು ಆಸ್ಪತ್ರೆ ವ್ಯವಸ್ಥೆ ಹೇಗಿರಬೇಕೆಂದು ತಜ್ಞರ ಸಲಹೆ ಪಡೆದು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ತಿಳಿಸಿದರು.

ಅನುದಾನದ ಕೊರತೆಯಿಂದ 50 ಹೊಸ ತಾಲೂಕಲ್ಲಿ ಆಸ್ಪತ್ರೆಯಿಲ್ಲ: ಸಚಿವ ಸುಧಾಕರ್‌

ಕೋವಿಡ್‌ ತೀವ್ರವಾಗಿ ಬಾಧಿಸುತ್ತಿರುವ ಚೀನಾದಿಂದ ಬಂದಿರುವ ವ್ಯಕ್ತಿಗೆ ಸೋಂಕು ದೃಢಪಟ್ಟಿರುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ವ್ಯಕ್ತಿಯ ಸೋಂಕಿಗೆ ಯಾವ ತಳಿ ಕಾರಣ ಎಂಬುದು ಇನ್ನೂ ಪತ್ತೆಯಾಗಿಲ್ಲ. ಜೀನೋಮಿಕ್‌ ಸೀಕ್ವೆನ್ಸ್‌ ವರದಿಗಾಗಿ ಕಾಯುತ್ತಿದ್ದೇವೆ ಎಂದರು.

click me!