ಶೆಟ್ಟರ್‌ ವಿಶ್ವಾಸಘಾತಕ, ರಕ್ತದಲ್ಲಿ ಬರೆದುಕೊಡ್ತೀನಿ ಗೆಲ್ಲಲ್ಲ : ಬಿಎಸ್‌ವೈ

By Kannadaprabha NewsFirst Published Apr 26, 2023, 12:47 AM IST
Highlights

‘ಶೆಟ್ಟರ್‌ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಗೆಲ್ಲಲು ಬಿಡಬಾರದು. ಇದನ್ನು ಸವಾಲಾಗಿ ಸ್ವೀಕರಿಸಿ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ. ಶೆಟ್ಟರ್‌ ಅವರು ಪಕ್ಷದ್ರೋಹ ಮಾಡಿದ್ದಾರೆ. ಹೀಗಾಗಿ, ಲಿಂಗಾಯತ ಸಮಾಜದ ಬಾಂಧವರು ಇಂಥವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ (ಏ.26) : ‘ಶೆಟ್ಟರ್‌ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಗೆಲ್ಲಲು ಬಿಡಬಾರದು. ಇದನ್ನು ಸವಾಲಾಗಿ ಸ್ವೀಕರಿಸಿ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ. ಶೆಟ್ಟರ್‌ ಅವರು ಪಕ್ಷದ್ರೋಹ ಮಾಡಿದ್ದಾರೆ. ಹೀಗಾಗಿ, ಲಿಂಗಾಯತ ಸಮಾಜದ ಬಾಂಧವರು ಇಂಥವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yadiyurappa) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಜಗದೀಶ ಶೆಟ್ಟರ್‌(Jagadish shetar) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವುದರಿಂದ ಉಂಟಾಗಿರುವ ಡ್ಯಾಮೇಜ್‌ ಕಂಟ್ರೋಲ್‌ಗೆ ಇದೀಗ ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂಟ್ರಿ ಕೊಟ್ಟಿದ್ದಾರೆ. ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿ, ಲಿಂಗಾಯತ ಸಮುದಾಯದ(Lingayata community) ಮುಖಂಡರ ಸಭೆ ನಡೆಸಿದರು. ಬುಧವಾರ ಅವರು ನಗರದಲ್ಲಿ ಬಿಜೆಪಿ ಪರ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ.

Latest Videos

ಲಿಂಗಾಯತ ಸಿಎಂ ಬಗ್ಗೆ ಮಾತಾಡಿ ಸಿದ್ದು ಸಂಕಷ್ಟದಲ್ಲಿದ್ದಾರೆ: ಸಿಎಂ

ಈ ಮಧ್ಯೆ, ಲಿಂಗಾಯತರ ಸಭೆಯಲ್ಲಿ ಮಾತನಾಡಿ, ಶೆಟ್ಟರ್‌ ಒಬ್ಬ ವಿಶ್ವಾಸಘಾತುಕ. ಬಿಜೆಪಿಯಲ್ಲಿ ಎಲ್ಲ ಸ್ಥಾನಮಾನ ಪಡೆದ ಶೆಟ್ಟರ್‌ ಪಕ್ಷಕ್ಕೆ ನಿಷ್ಠನಾಗಿ ಉಳಿಯಲಿಲ್ಲ, ಕಾಂಗ್ರೆಸ್‌ಗೆ ಹೋಗಿದ್ದಾರೆ. ಇಂತಹ ಪಕ್ಷದ್ರೋಹಿಗಳನ್ನು ಸಮಾಜ ಬಾಂಧವರೆಲ್ಲರೂ ಒಟ್ಟಾಗಿ ಸೋಲಿಸಬೇಕಿದೆ. ಲಿಂಗಾಯತ ಸಮುದಾಯವೇ ಒಟ್ಟಾಗಿ ಶೆಟ್ಟರ್‌ನ್ನು ಸೋಲಿಸುವ ಮೂಲಕ ನಮ್ಮ ಸಮಾಜದ ಶಕ್ತಿ ಪ್ರದರ್ಶನ ನಡೆಸಬೇಕು ಎಂದು ಕರೆ ನೀಡಿದರು.

ಶೆಟ್ಟರ್‌ ಅವರು ಪಕ್ಷ ಹಾಗೂ ಲಿಂಗಾಯತರಿಗೆ ಏನು ದ್ರೋಹ ಮಾಡಿದ್ದಾರೆ ಎಂಬುದನ್ನು ತಿಳಿಸಲು ಈ ಸಭೆ. ನಾವು ಅವರಿಗೆ ಏನು ಕಡಿಮೆ ಮಾಡಿದ್ದೇವು?. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಎಲ್ಲ ಹಂತದ ಸ್ಥಾನಮಾನ ಅನುಭವಿಸಿದ್ದರು. ಆದರೆ, ಇದಕ್ಕೆ ಋುಣಿಯಾಗಿರಲಿಲ್ಲ. ನಿಮ್ಮ ಬದಲು ನಿಮ್ಮ ಪತ್ನಿಗೆ ಟಿಕೆಟ್‌ ನೀಡುತ್ತೇವೆ. ನೀವು ಕೇಂದ್ರಕ್ಕೆ ಬನ್ನಿ ಎಂದು ಮೋದಿಯವರೇ ಅಮಿತ್‌ ಶಾ ಮೂಲಕ ಮನವಿ ಮಾಡಿದ್ದರು. ಆದರೆ, ಶೆಟ್ಟರ್‌ ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಇಂಥವರನ್ನು ಸಮಾಜ ಬಾಂಧವರು ಎಂದಿಗೂ ಕ್ಷಮಿಸಲ್ಲ; ಕ್ಷಮಿಸಲೂ ಬಾರದು ಎಂದರು.

ಶೆಟ್ಟರ್‌ ಹೆಸರು ಹೇಳಲೂ ನನಗೆ ಇಷ್ಟವಿಲ್ಲ ಎಂದು ಏಕವಚನದಲ್ಲೇ ಸಂಬೋಧಿಸಿದ ಅವರು, ಈ ಬಾರಿ ಸೆಂಟ್ರಲ್‌ ಕ್ಷೇತ್ರದಲ್ಲಿ ಮಹೇಶ ಟೆಂಗಿನಕಾಯಿ ಕಣಕ್ಕಿಳಿದಿದ್ದಾರೆ. ಇವರೂ ಲಿಂಗಾಯತರೇ. ಇವರನ್ನು ಅತ್ಯಧಿಕ ಮತಗಳಿಂದ ಆರಿಸಿ ತರುವ ಮೂಲಕ ಶೆಟ್ಟರ್‌ಗೆ ಪಾಠ ಕಲಿಸಿ ಎಂದರು.

ರಕ್ತದಲ್ಲಿ ಬರೆದುಕೊಡುವೆ:

ಪಕ್ಷದ್ರೋಹ ನಡೆಸಿರುವ ಶೆಟ್ಟರ್‌ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಇದನ್ನು ನಾನು ರಕ್ತದಲ್ಲಿ ಬರೆದುಕೊಡುವೆ ಎಂದು ಆಕ್ರೋಶಭರಿತರಾಗಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಸಮಾಜ ಬಾಂಧವರು ಈ ಸತ್ಯಾಂಶವನ್ನು ಅರಿತುಕೊಂಡು ಬರುವ ಚುನಾವಣೆಯಲ್ಲಿ ಶೆಟ್ಟರ್‌ಗೆ ದಯನೀಯ ಸ್ಥಿತಿಯಲ್ಲಿ ಸೋಲನ್ನು ತೋರಿಸಬೇಕು. ಅಂದಾಗ ನನಗೆ ತೃಪ್ತಿ ಎಂದು ಕಿಡಿ ಕಾರಿದರು.

ಇಂದು ರೋಡ್‌ ಶೋ:

ಬುಧವಾರ ಸ್ಥಳೀಯ ಲಿಂಗರಾಜನಗರದಲ್ಲಿ ಮತ್ತೊಮ್ಮೆ ಸಭೆ ನಡೆಸುತ್ತೇನೆ. ನಂತರ, ಹುಬ್ಬಳ್ಳಿಯ ಸೆಂಟ್ರಲ್‌ ಕ್ಷೇತ್ರದಲ್ಲಿ ರೋಡ್‌ ಶೋ ಆಯೋಜಿಸಿದ್ದು, ಸಮಾಜ ಬಾಂಧವರು ಈ ರೋಡ್‌ಶೋದಲ್ಲಿ ಪಾಲ್ಗೊಳ್ಳುವ ಮೂಲಕ ಲಿಂಗಾಯತ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕು. ಈ ರೋಡ್‌ ಶೋ ನೋಡಿ ಶೆಟ್ಟರ್‌ಗೆ ಸೋಲಿನ ನಡುಕ ಕಾಣಬೇಕು. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಈ ಬಗ್ಗೆ ಪ್ರಧಾನಿ ಮೋದಿಗೆ ನಾನು ಮಾತು ಕೊಟ್ಟಿದ್ದೇನೆ. ಅದನ್ನು ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಶೆಟ್ಟರ್ ಬೇರೆ ಟೀಂ ಸೇರಿದ್ರೂ ಈ ಸಲವೂ ಕಪ್‌ ನಮ್ದೆ; ಪ್ರಲ್ಹಾದ್ ಜೋಶಿ

ನನಗೆ ಅನ್ಯಾಯ ಮಾಡಿಲ್ಲ:

ಕಾಂಗ್ರೆಸ್ಸಿನವರಿಗೆ ಯಾಕೋ ನನ್ನ ಮೇಲೆ ಕನಿಕರ ಬಂದಂತೆ ಕಾಣುತ್ತಿದೆ. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಪಕ್ಷವು ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಯುವಕರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ನಾನೇ ಸ್ವಯಂಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಮೋದಿ ಅವರಿಗೆ ತಿಳಿಸಿ ರಾಜೀನಾಮೆ ನೀಡಿದ್ದೇನೆ. ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಭ್ಯರ್ಥಿಗಳಾದ ಮಹೇಶ ಟೆಂಗಿನಕಾಯಿ, ಡಾ.ಕ್ರಾಂತಿಕಿರಣ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸೇರಿದಂತೆ ಸಾವಿರಾರು ಲಿಂಗಾಯತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!