
ಬೆಂಗಳೂರು(ಡಿ.05): ಬೆಳಗಾವಿ ಅಧಿವೇಶನದ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಮಾತುಗಳ ನಡುವೆಯೇ ಹೈಕಮಾಂಡ್ ಎಲ್ಲ ಸಚಿವರಿಗೂ ತಮ್ಮ ಇಲಾಖೆಗಳ ಕಾರ್ಯಕ್ಷಮತೆ ವರದಿ ಕೇಳಿರುವ ಬಗ್ಗೆ ಕೆಲ ಸಚಿವರೇ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈಗಾಗಲೇ ತಾವು ವರದಿ ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಮಾಹಿತಿ ನೀಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇಲಾಖೆ ಕಾರ್ಯಕ್ರಮದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸುಧಾಕರ್, ಪಕ್ಷದ ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯಕ್ಷಮತೆ ನೋಡುತ್ತಿದೆ. ನಾನು ನನ್ನ ಇಲಾಖೆ ವರದಿ ನೀಡಿದ್ದೇನೆ. ಎಲ್ಲಾ ಮಂತ್ರಿಗಳು ತಮ್ಮ ತಮ್ಮ ವರದಿ ನೀಡುತ್ತಿದ್ದಾರೆ. ಸಚಿವರ ಕಾರ್ಯವೈಖರಿ ವರದಿ ಕೇಳುವುದರಲ್ಲಿ ತಪ್ಪಿಲ್ಲ. ಆ ಅಧಿಕಾರ ಪಕ್ಷಕ್ಕಿದೆ. ವರದಿ ಪಡೆದ ಬಳಿಕ ಯಾರಿಗೆ ಎಚ್ಚರಿಕೆ ಕೊಡಬೇಕು? ಯಾರಿಗೆ ಇನ್ನೂ ಹೆಚ್ಚಿನ ಕೆಲಸ ಕೊಡಬೇಕು, ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಸಿದ್ದರಾಮಯ್ಯ ಕೂಡ ಕಾಂಗ್ರೆಸ್ಗೆ ಹೊಸಬರಾಗಿದ್ದರು, ಅವರೇ ಸಿಎಂ ಆಗಿಲ್ಲವೇ: ಶಾಸಕ ಬಾಲಕೃಷ್ಣ
ಪಕ್ಷ ನಮ್ಮನ್ನು ಸಚಿವರನ್ನಾಗಿ ಮಾಡಿರೋದು ಕೇವಲ ಕಾರಲ್ಲಿ ಓಡಾಡಿಕೊಂಡು ಇರುವುದಕ್ಕಲ್ಲ. ಇಲಾಖಾ ಜವಾಬ್ದಾರಿಗಳ ಜೊತೆಗೆ ಪಕ್ಷದ ಪ್ರಣಾಳಿಕೆ ಹಾಗೂ ಜನರಿಗೆ ನಾವು ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಆದ್ಯತೆ ಆಗಿರುತ್ತದೆ. ಸರ್ಕಾರದ ಕಾರ್ಯಚಟುವಟಿಕೆಗಳು ಜನ ರಿಗೆ ತಲುಪಬೇಕು. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡಬೇಕು ಎಂಬ ಜವಾಬ್ದಾರಿ ಶಾಸಕರು, ಮಂತ್ರಿಗಳ ಮೇಲಿದೆ. ನಾವು ಇದನ್ನು ಸರಿಯಾಗಿ ನಿಭಾಯಿಸುತ್ತಿದ್ದೇ ವೆಯೇ?, ಇಲ್ಲವೇ? ಎನ್ನುವ ವರದಿ ಪಡೆಯುವ ಜವಾಬ್ದಾರಿ ಪಕ್ಷದ ನಾಯಕತ್ವದ್ದಾಗಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ನನ್ನ ಇಲಾಖೆ ಕಾರ್ಯಕ್ಷಮತಾ ವರದಿಯನ್ನು ಈಗಾಗಲೇ ಹೈಕಮಾಂಡ್ಗೆ ನೀಡಿದ್ದೇನೆ. ಆದರೆ, ಹೈಕ ಮಾಂಡ್ನವರು ನಿರ್ದಿಷ್ಟ ಫಾರ್ಮ್ಯಾಟ್ನಲ್ಲಿ ನೀಡು ವಂತೆ ಸೂಚಿಸಿದ್ದಾರೆ. ಅದರಂತೆ ಮತ್ತೊಮ್ಮೆ ವರದಿ ನೀಡುತ್ತೇನೆ ಎಂದರು.
ವರದಿ ಕೇಳಿರುವುದು ಸಂಪುಟ ಪುನಾರಚನೆ ಕಾರಣಕ್ಕಾ ಎಂಬ ಪ್ರಶ್ನೆಗೆ, ನನಗೆ ಯಾರೂ ಖುದ್ದು ಕರೆ ಮಾಡಿ ವರದಿ ಕೇಳಿಲ್ಲ. ಆದರೆ, ನಮಗೆ ಜವಾಬ್ದಾರಿ ನೀಡಿರುವ ಪಕ್ಷಕ್ಕೆ ನಮ್ಮ ಇಲಾಖಾ ಪ್ರಗತಿ ವರದಿ ನೀಡುವುದು ನಮ್ಮ ಜವಾಬ್ದಾರಿ ಅದನ್ನು ನೀಡಿದ್ದೇನೆ. ಇದನ್ನು ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸೇರಿಸುವುದು ಸರಿಯಲ್ಲ. ವರದಿ ನೋಡಿದ ಬಳಿಕ ಯಾವ್ಯಾವ ಸಚಿವರಿಗೆ ಏನೇನು ಸೂಚನೆ ನೀಡಬೇಕೋ ಅದನ್ನು ಹೈಕಮಾಂಡ್ ನಾಯಕರು ನೀಡುತ್ತಾರೆ ಎಂದರು.
ಸಚಿವ ಸಂಪುಟ ಪುನಾರಚನೆ: ಮಂತ್ರಿಗಿರಿಗಾಗಿ ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರ ಪೈಪೋಟಿ
ನನ್ನನ್ನೇ ಮಂತ್ರಿ ಮಾಡಲು ವರಿಷ್ಠರ ಬಳಿ ಹೇಳಿ: ಶಾಸಕ ಶಿವಲಿಂಗೇಗೌಡ
ಚನ್ನರಾಯಪಟ್ಟಣ: ಈ ಜಿಲ್ಲೆಯಲ್ಲಿ ನನಗಿಂತ ತಮಟೆ ಹೊಡೆಯುವ ಶಾಸಕ ಇದ್ದರೆ ಅವರ ಪರ ಹೇಳಿ. ಇಲ್ಲವೇ ನನ್ನನ್ನೇ ಮಂತ್ರಿ ಮಾಡುವಂತೆ ವರಿಷ್ಠರ ಬಳಿ ನನ್ನ ಪರ ಮಾತನಾಡಿ, ನಾನು ಗೂಟದ ಕಾರಿನಲ್ಲಿ ಬಂದರೆ ಹೇಗಿರುತ್ತೆ ಅಂತ ನೋಡಿ ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನನಗೆ ಅಧಿಕಾರ (ಸಚಿವ ಸ್ಥಾನದ) ಕೊಟ್ರೆ ಯಾಕೆ ಪಕ್ಷ ಸಂಘಟನೆ ಆಗಲ್ಲ. ನೀವೆಲ್ಲ ಈ ಬಗ್ಗೆ ಮಾತನಾಡಿ ಎಂದು ಮಾಜಿ ಶಾಸಕರಾದ ಎಂ. ಎ.ಗೋಪಾಲಸ್ವಾಮಿ ಮತ್ತು ಸಿ.ಎಸ್.ಪುಟ್ಟೇಗೌಡರನ್ನು ಆಗ್ರಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.