
ವಿಧಾನಸಭೆ (ಡಿ.7) : ನೀರಾವರಿ ವಿಚಾರಗಳ ಬಗ್ಗೆ ಈವರೆಗೆ ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸಿಯೇ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತಿಗೆ ಸಚಿವ ಕೆ.ಎಚ್.ಮುನಿಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ತಮ್ಮ ಮಾತು ಹಿಂಪಡೆಯುವಂತೆ ಒತ್ತಾಯಿಸಿದರು.
ಮೊದಲಿಗೆ ಶೂನ್ಯ ವೇಳೆಯಲ್ಲಿ ಕೊಬ್ಬರಿ ಬೆಲೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಜೆಡಿಎಸ್ನ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ ಅವರು ಕೊಬ್ಬರಿ ಬೆಂಬಲ ಬೆಲೆ ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಕ್ವಿಂಟಾಲ್ಗೆ 15 ಸಾವಿರ ರು. ಬೆಂಬಲ ಬೆಲೆ ಘೋಷಿಸುವುದಾಗಿ ಹೇಳಿದ್ದರು. ಮೊದಲು ನೀವು ಕೊಡಿ. ಇಲ್ಲದಿದ್ದರೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜ್ಯಸಭೆಯಲ್ಲಿ ಒತ್ತಾಯ ಮಾಡಿಸಿ ಎಂದರು.
ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್ ಹಾಕುವೆ: ಪ್ರಿಯಾಂಕ್ ಖರ್ಗೆ
ಇದಕ್ಕೆ ಕಿಡಿ ಕಾರಿದ ಕಾಂಗ್ರೆಸ್ ಸದಸ್ಯರು, ‘ನಿಮ್ಮ ಮಗ ಕೂಡ ಸಂಸದ. ನಿಮ್ಮ ತಂದೆ ರಾಜ್ಯಸಭೆ ಸದಸ್ಯರು. ಅವರೇ ಯಾಕೆ ಸಂಸತ್ ಹಾಗೂ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಬಾರದು. ರೈತರ ಬಗ್ಗೆ ನಿಮಗೆ ಕಾಳಜಿಯಿಲ್ಲವೇ’ ಎಂದು ತಿರುಗೇಟು ನೀಡಿದರು.
ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರು, ‘ಹಿಂದೆ ಕಾಂಗ್ರೆಸ್ಸಿನಿಂದ 28 ಸ್ಥಾನಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಂಸದರು ಗೆದ್ದು ಹೋಗುತ್ತಿದ್ದರು. ಆಗ ಯಾರೊಬ್ಬರೂ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿಲ್ಲ. ದೇವೇಗೌಡರು ಮಾತ್ರ ಮಾತನಾಡಿದ್ದಾರೆ’ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದ 4 ವರ್ಷ ಬೆಂಗ್ಳೂರಿನ ಗುಂಡಿ ಮುಚ್ಚಲಾಗಲಿಲ್ಲ: ಸಿಎಂ ತಿರುಗೇಟು!
ಕೆ.ಎಚ್. ಮುನಿಯಪ್ಪ, ನಾವು ಪ್ರತಿ ಬಾರಿಯೂ ನೀರಾವರಿ ವಿಚಾರಗಳಲ್ಲಿ ಮಾತನಾಡಿದ್ದೇವೆ. ಹಲವು ಬಾರಿ ಪಕ್ಷಬೇಧ ಮರೆತು ನಿಯೋಗ ಕೊಂಡೊಯ್ದಿದ್ದೇವೆ. ಮಹದಾಯಿ ಬಗ್ಗೆ ಪ್ರಧಾನಿ ಮೋದಿ ಅವರ ಬಳಿಗೆ ಹೋದರೆ ಅವರು ಗೋವಾದಲ್ಲಿ ತಮ್ಮ ಸರ್ಕಾರ ಇದೆ ಎಂದು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕುಮಾರಸ್ವಾಮಿ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.