Latest Videos

ತುಮಕೂರಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಸೊಗಡು ಶಿವಣ್ಣ, ಮುದ್ದಹನುಮೇಗೌಡ ಬಂಡಾಯ

By Sathish Kumar KHFirst Published Apr 12, 2023, 5:50 PM IST
Highlights

ಬಿಜೆಪಿಯಿಂದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ತುಮಕೂರಿನ ಸೊಗಡು ಶಿವಣ್ಣ ಹಾಗೂ ಕುಣಿಗಲ್‌ನ ಎಂ.ಪಿ.ಮುದ್ದಹನುಮೇಗೌಡ ಅವರು ಬಂಡಾಯ ಎದ್ದು, ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.

ತುಮಕೂರು (ಏ.12):  ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಪಕ್ಷಕ್ಕೆ ರಾಜಿನಾಮೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಕುಣಿಗಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮುದ್ದಹನುಮೇಗೌಡ ಅವರು ಬಂಡಾಯ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಹೀಗಾಗಿ, ತುಮಕೂರಲ್ಲಿ ಬಂಡಾಯದ ಬಿಸಿಗೆ ಕಮಲ ಅರಳುವೇ ಅಥವಾ ಮುದುಡುವುದೇ ಕಾದುನೋಡಬೇಕಿದೆ.

ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಿದ್ದತೆ ಮಾಡಿಕೊಂಡಿದ್ದಾರೆ. ತುಮಕೂರಿನ ಎಂ.ಜಿ ರಸ್ತೆಯಲ್ಲಿರುವ ಮಾಕಂ ಕಲ್ಯಾಣ ಮಂಟಪದಲ್ಲಿ ನೂರಾರು ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ತಮಗೆ ತುಮಕೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಜ್ಯೋತಿ ಗಣೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಬಿಜೆಪಿಯನ್ನು ತೊರೆಯಲು ಮುಂದಾಗಿದ್ದಾರೆ.

ಸುಳ್ಯ ಶಾಸಕ ಎಸ್. ಅಂಗಾರ ರಾಜಕೀಯ ನಿವೃತ್ತಿ: ಬಿಜೆಪಿ ಅಭ್ಯರ್ಥಿಗೂ ಬೆಂಬಲಿಸಲ್ಲ

ರಾಜಿನಾಮೆ ಪತ್ರ ಹಿಡಿದುಕೊಂಡೇ ಸಭೆ: ಇನ್ನು ಸೊಗಡು ಶಿವಣ್ಣ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವ ನಿಟ್ಟಿನಲ್ಲಿ ರಾಜಿನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡೇ ಸಭೆ ಮಾಡುತ್ತಿದ್ದಾರೆ. ಇನ್ನು ಇವರ ನೂರಾರು ಬೆಂಬಲಿಗರೂ ಕೂಡ ರಾಜೀನಾಮೆ ಪತ್ರ ಬರೆದಿಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ ಸಾಮೂಹಿಕ ರಾಜಿನಾಮೆ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಮಟ್ಟದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಣಿಸುವ ನಿಟ್ಟಿನಲ್ಲಿ ಹಿರಿಯ ನಾಯಕರು ಹಾಗೂ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಗಣೇಶ್‌ ಯಾವ ರೀತಿ ಸರ್ಕಸ್‌ ಮಾಡುತ್ತಾರೆ ಎಂಬುದನ್ನು ಕಾದು ನೊಡಬೇಕಿದೆ. 

ತೋಟದ ಮನೆಯಲ್ಲಿ ಮುದ್ದಹನುಮೇಗೌಡ ಸಭೆ:  ಮತ್ತೊಂದೆಡೆ ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡ ಅವರೂ ಕೂಡ ಟಿಕೆಟ್‌ ಸಿಗದೇ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಎಂ.ಪಿ ಮುದ್ದಹನುಮೇಗೌಡ ಕೂಡ ತಮ್ಮ ಬೆಂಬಲಿಗರೊಂದಿಗೆ ತೋಟದ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ. ಇನ್ನು ಪಕ್ಷದಿಂದ ಟಿಕೆಟ್‌ ಕೈತಪ್ಪಿದ್ದು, ಕೃಷ್ಣಕುಮಾರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮುಂದೆ ಯಾವ ನಡೆಯನ್ನು ಕೈಗೊಳ್ಳಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. 

ರಾಜಕಾರಣದಲ್ಲಿ ನಾಲಿಗೆ ಹರಿಬಿಟ್ಟ ನಟಿ ಶೃತಿ ವಿರುದ್ಧ ಕೇಸ್‌ ದಾಖಲು

 

ಬಂಡಾಯ ಸ್ಪರ್ಧೆ ಬಗ್ಗೆ ಸಭೆಯಲ್ಲಿ ಚರ್ಚೆ: ಇನ್ನು ಮೂಲವಾಗಿ ಕಾಂಗ್ರೆಸ್‌ನಲ್ಲಿದ್ದ ಎಂ.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಇನ್ನು ಬಿಜೆಪಿಯಿಂದ ಟಿಕೆಟ್‌ ತಮಗೇ ಸಿಗುತ್ತದೆ ಎಂದು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಹುರುಪಿನಿಂದ ಭಾಗವಹಿಸುತ್ತಿದ್ದರು. ಆದರೆ, ಈಗ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಬಂಡಾಯವಾಗಿ ಸ್ಪರ್ಧೆ ಮಾಡಬೇಕೇ ಎಮದು ಚರ್ಚೆ ಮಾಡುತ್ತಿದ್ದಾರೆ. ಪಕ್ಷದ ಚಿಹ್ನೆ ಬಿಟ್ಟು ಹೋದರೂ ಗೆಲ್ಲುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ರಾಜೇಶ್‌ಗೌಡನಿಂದಲೂ ಅಸಮಾಧಾನ: ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಮತ್ತೊಮ್ಮ ಅಕಾಂಕ್ಷಿಯಾಗಿದ್ದ ರಾಜೇಶ್‌ಗೌಡ ಕೂಡ ತಮಗೆ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ರಾಜೇಶ್‌ಗೌಡ ಬೆಂಬಲಿಗರು ತುಮಕೂರು ಜಿಲ್ಲಾ ಬಿಜೆಪಿ ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಕುಣಿಗಲ್ ಕ್ಷೇತ್ರದಿಂದ ಡಿ ಕೃಷ್ಣಕುಮಾರ್ ಗೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಅಸಮಾಧಾನ ತೀವ್ರ ಭುಗಿಲೆದ್ದಿದೆ. ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ಪಕ್ಷ ಮೋಸ ಮಾಡಿದೆ ಎಂದು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

click me!