ಸಿಎಂ ಪಟಲಾಂ ಮಾಡಿದ ತಪ್ಪಿಗೆ ಅಮಾಯಕರ ಜೀವ ಹೋಗಿದೆ: ಕೇಂದ್ರ ಸಚಿವ ಸೋಮಣ್ಣ ಆರೋಪ

Kannadaprabha News   | Kannada Prabha
Published : Jun 09, 2025, 09:51 PM IST
v somanna

ಸಾರಾಂಶ

ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಅಮಾಯಕರ ಜೀವ ಹೋಗಿದೆ. ಸಿದ್ದರಾಮಯ್ಯ ಅವರಿಂದ ಇಂತಹ ದುರಾಡಳಿತ ನಿರೀಕ್ಷಿಸಿರಲಿಲ್ಲ. ಈಗಲಾದರೂ ಘಟನೆಯ ಹೊಣೆ ಹೊತ್ತುಕೊಳ್ಳಿ ಎಂದು ವಿ.ಸೋಮಣ್ಣ ಆಗ್ರಹಿಸಿದರು.

ಮೈಸೂರು (ಜೂ.09): ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಅಮಾಯಕರ ಜೀವ ಹೋಗಿದೆ. ಸಿದ್ದರಾಮಯ್ಯ ಅವರಿಂದ ಇಂತಹ ದುರಾಡಳಿತ ನಿರೀಕ್ಷಿಸಿರಲಿಲ್ಲ. ಈಗಲಾದರೂ ಘಟನೆಯ ಹೊಣೆ ಹೊತ್ತುಕೊಳ್ಳಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು 25 ಲಕ್ಷಕ್ಕೆ ಅಲ್ಲ, ಇಡೀ ಬಜೆಟ್‌ ಅನ್ನು ಪರಿಹಾರವಾಗಿ ನೀಡಿದರೂ, ಹೋಗಿರುವ ಜೀವ ಹಿಂದಕ್ಕೆ ಬರುತ್ತದೆಯೇ? ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ ಎಂದರು.

ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ನಿಮ್ಮ ಒಳ ಜಗಳ ನಿಮ್ಮ ಒಳ ಒಪ್ಪಂದಗಳು ನಿಮ್ಮ ನಡುವಿನ ಗೊಂದಲಗಳಿಂದ ಅಮಾಯಕರ ಜೀವ ಹೋಗಿದೆ. ಇದಕ್ಕೆ ಯಾರು ಹೊಣೆ ಮೊದಲು ಹೇಳಿ? ಸಿದ್ದರಾಮಯ್ಯನವರೇ ಇದಕ್ಕೆ ನೀವೆ ಅಲ್ಲವೆ ಹೊಣೆ? ಕಾಲ್ತುಳಿತ ಘಟನೆಗೆ ಡಾ. ರಾಜ್ ಕುಮಾರ್ ಅವರ ಸಾವಿನ ಘಟನೆಯನ್ನು ಹೇಗೆ ಹೋಲಿಕೆ ಮಾಡುತ್ತೀರಾ? ಡಾ. ರಾಜ್ ಕುಮಾರ್ ಅವರ ಸಾವಿನ ಸಂದರ್ಭವೇ ಬೇರೆ ಅವತ್ತಿನ ಪರಿಸ್ಥಿತಿಯೇ ಬೇರೆ‌ ಇವತ್ತಿನ ಪರಿಸ್ಥಿತಿಯೇ ಬೇರೆ. ನೀವು ಈಗ ಮಾಡಿರುವುದು ಪಾಪದ ಕೆಲಸ. ಮೊದಲು ಅದನ್ನು ನೀವು ಒಪ್ಪಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕುರ್ಚಿಗೆ ಅಂಟಿಕೊಂಡು ಸಿದ್ದರಾಮಯ್ಯ ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದು ಕೊಂಡಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಸಲುಗೆಯನ್ನು ಬೇರೆ ರಾಜ್ಯದ ಯಾವ ಸಿಎಂಗೂ ಕೊಟ್ಟಿಲ್ಲ. ಆದರೂ ಸಿದ್ದರಾಮಯ್ಯ ಇಂತಹ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ. ಒಂದು ಅರ್ಧ ದಿನ ಪ್ರಧಾನ ಮಂತ್ರಿಗಳ ಕಚೇರಿಗೆ ಬನ್ನಿ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಿ. ನೀವು ಕಾಂಗ್ರೆಸ್ ಮುಖ್ಯಮಂತ್ರಿ ಆಗಿರಬಹುದು ಪ್ರಧಾನಿ ಆಡಳಿತವನ್ನೂ ಸ್ವಲ್ಪ ಗಮನಿಸಿ ನೋಡಿ ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಹೊಂದಾಣಿಕೆಯೇ ಇಲ್ಲ. ಅಳಿ ಇಲ್ಲದ ಕಾರಣ ಆಡಳಿತ ಎಲ್ಲೆಲ್ಲೋ ಮುಗ್ಗರಿಸಿ, ಅಪಘಾತ ಮಾಡುತ್ತಿದೆ. ಇವರ ಈ ಅಧ್ವಾನದಲ್ಲಿ ಅಮಾಯಕರ ಜೀವ ಹೋಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಬೆಂಗಳೂರಿನ ಕಾಲ್ತುಳಿತಕ್ಕೆ ದೇಶದ ಬೇರೆ ಬೇರೆ ಭಾಗದ ಘಟನೆಯನ್ನು ನೀವು ಹೇಗೆ ಸಮರ್ಥನೆಗೆ ಬಳಸುತ್ತಿದ್ದೀರಾ. ನೀವು ಮಾಡಿರುವುದು ಪಾಪದ ಕೆಲಸ ಅಲ್ಲವೇ? ಇದಕ್ಕೆ ಸಮರ್ಥನೆಗಳು ಬೇಡ. ಮೊದಲು ನೈತಿಕ ಹೊಣೆ ಹೊತ್ತಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ನನಗೆ ಸಿದ್ದರಾಮಯ್ಯ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಆಡಳಿತ ಯಾವ ಪರಿಸ್ಥಿತಿಯಲ್ಲಿದೆ ನೋಡಿ. ಎರೆಡೂವರೆ ವರ್ಷದ ಸರ್ಕಾರದಲ್ಲಿ ಈ ರಾಜ್ಯಕ್ಕೆ ಯಾವ ಮೈಲಿಗಲ್ಲು ಕೊಟ್ಟಿದ್ದೀರಾ ನೀವೇ ನೋಡಿಕೊಳ್ಳಿ? ನಿಮ್ಮ ಪಟಲಾಮ್ ಮಾಡಿದ ತಪ್ಪಿಗ್ಗಾಗಿ ಅಧಿಕಾರಿಗಳನ್ನ ಬಲಿಪಶು ಮಾಡಿದ್ದು ಎಷ್ಟು ಸರಿ. ಆರ್.ಸಿ.ಬಿ ಅವರು ಗೆದ್ದರೂ ಅದರ ಕ್ರೆಡಿಟ್ ಪಡೆಯಲು ನೀವು ಪೈಪೋಟಿ ನಡೆಸಲು ಹೋಗಿ ಈ ಅವಘಡ ಮಾಡಿಕೊಂಡಿದ್ದೀರ. ಬೇರೆ ಯಾರೋ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ನೀವೇ ಅಚಾತುರ್ಯ ಮಾಡಿ ಅಮಾಯಕರ ಬಲಿ ಕೊಟ್ಟಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು