Assembly election: ರಾಜ್ಯ ರಾಜಕಾರಣಕ್ಕೆ ಸುಮಲತಾ: ಕ್ಷೇತ್ರ ಆಯ್ಕೆ ಯಾವುದು?

By Ravi JanekalFirst Published Jan 21, 2023, 10:56 AM IST
Highlights

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಬರ್ತಾರೆ ಎನ್ನುವ ಸುದ್ದಿ ಬಂದಿರುವುದು ಮಂಡ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ಸುಮಲತಾ ಅಂಬರೀಶ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಈ ನಿಟ್ಟಿನಲ್ಲಿ ಸುಮಲತಾ ಬೆಂಬಲಿಗರು ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಜ.21): ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಬರ್ತಾರೆ ಎನ್ನುವ ಸುದ್ದಿ ಬರಲಾರಂಭಿಸಿವೆ. ಈ ನಿಟ್ಟಿನಲ್ಲಿ ಸುಮಲತಾ ಬೆಂಬಲಿಗರು ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. 

ಚುನಾವಣೆ ಸ್ಪರ್ಧೆ, ಪಕ್ಷ ಸೇರ್ಪಡೆ ಬಗ್ಗೆ ಬೆಂಬಲಿಗರು, ಆಪ್ತರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧಾರ ಮಾಡಿದ್ದಾರೆ. ಸುಮಲತಾ(Sumalata ambarish) ಆಪ್ತರಾದ ಹನಕೆರೆ ಶಶಿ(Hanakere shashi), ಬೇಲೂರ್ ಸೋಮಶೇಖರ್(Belur somashekhar) ನೇತೃತ್ವದಲ್ಲಿ ಸಭೆ ನಡೆಯಲಿದೆ. ಸುಮಲತಾ ಸೂಚನೆಯಂತೆ ಸಭೆ ಕರೆಯಲಾಗಿದೆ. ಮಂಡ್ಯದ 7 ಕ್ಷೇತ್ರಗಳಿಂದ ಸಭೆಗೆ ಆಗಮಿಸಲಿರುವ ಸುಮಲತಾ ಅಂಬರೀಶ್ ಅಭಿಮಾನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸುಮಲತಾಗೆ ರವಾನಿಸಲಿದ್ದಾರೆ.

ವಿಧಾನಸಭೆ ಚುನಾವಣೆಗೆ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ?

ಮತ್ತೆ ಮರುಕಳಿಸುತ್ತಾ ಐತಿಹಾಸಿಕ ಚುನಾವಣೆ? 

ಕಳೆದ ಬಾರಿ ಜನರ ಒತ್ತಾಯಕ್ಕೆ ಮಣಿದು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ವಿಧಾನಸಭೆಗೆ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿದೆ. ಪ್ರತಿ ಬಾರಿ ಈ ಪ್ರಶ್ನೆ ಬಂದಾಗಲೆಲ್ಲಾ ಜನರ ತೀರ್ಮಾನಕ್ಕೆ ತಲೆ ಬಾಗುವುದಾಗಿ ಸುಮಲತಾ ಹೇಳಿದ್ದಾರೆ. ಈ ನಡುವೆ ಸುಮಲತಾ ಬೆಂಬಲಿಗರು ಸದ್ದಿಲ್ಲದೆ ಚುನಾವಣಾ ತಯಾರಿ ಆರಂಭಿಸಿ, ಜನರ ಅಭಿಪ್ರಾಯ ಸಂಗ್ರಹಿಸಲು ಸಭೆ ನಡೆಸುತ್ತಿದ್ದಾರೆ.

ಪತಿ ಅಂಬರೀಶ್ ಪ್ರತಿನಿಧಿಸಿದ್ದ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ.?

ಒಂದು ವೇಳೆ ವಿಧಾನಸಭೆಗೆ ಸುಮಲತಾ ಎಂಟ್ರಿಯಾದರೆ ಯಾವ ಕ್ಷೇತ್ರ ಆಯ್ಕೆ ಮಾಡ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಹಾಗೇನಾದರೂ ಆದರೆ ಸುಮಲತಾ ಅವರ ಆಯ್ಕೆ ಮಂಡ್ಯ ಕ್ಷೇತ್ರ(Mandya Assembly Constituency) ಆಗಲಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ.‌ ಯಾಕೆಂದರೆ ಮಂಡ್ಯ ಕ್ಷೇತ್ರ ಸುಮಲತಾ ಅವರ ಪತಿ ಅಂಬರೀಶ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಹಾಗಾಗಿ ಆ ಕ್ಷೇತ್ರದಿಂದಲೇ ಸುಮಲತಾ ಕಣಕ್ಕಿಳಿತಾರೆ ಎನ್ನುವ ಲೆಕ್ಕಾಚಾರವಿದೆ. ಒಂದು ವೇಳೆ ಹಾಗೇನಾದರೂ ಆದರೆ ಮಂಡ್ಯ ಕ್ಷೇತ್ರ ಮತ್ತೆ ರಣರಣ ರಾಜಕೀಯಕ್ಕೆ ವೇದಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್‌

ಶಾಸಕರಾಗಿ ಸಚಿವರಾಗಿ ಸುಮಲತಾ ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ:

ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ ಆಪ್ತ ಹನಕೆರೆ ಶಶಿಕುಮಾರ್. ವಿಧಾನಸಭಾ ಚುನಾವಣೆ(Assembly election) ಸಮೀಪಿಸುತ್ತಿದೆ. ಸುಮಲತಾ ಅವರ ರಾಜಕೀಯ ನಿರ್ಧಾರಕ್ಕೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಸುಮಲತಾ ಅಂಬರೀಶ್ ಅಭಿಮಾನಿಗಳ ಸಭೆ ಕರೆಯಲಾಗುವುದು. ಸಭೆಯಲ್ಲಿ ಅವರ ಅಭಿಪ್ರಾಯ ಸಂಗ್ರಹಿಸಿ ಸುಮಲತಾ ಅವರಿಗೆ ಹೇಳುತ್ತೇವೆ.‌ ರಾಜ್ಯ ರಾಜಕೀಯಕ್ಕೆ ಸುಮಲತಾ ಅವರು ಬರಬೇಕು ಎಂಬುದು ಜನರ ಒತ್ತಾಸೆ. MP ಆಗಿ ಅವರು ಮಾಡಿರುವ ಕೆಲಸ ಜನಮೆಚ್ಚುಗೆ ಪಡೆದಿದೆ. MLA ಆದರೆ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಲಿದೆ. ಅಂಬರೀಶ್ ಅವರು ಮಂಡ್ಯ ಕ್ಷೇತ್ರ ಪ್ರತಿನಿಧಿಸಿದ್ದರು. ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರ ಸ್ಪರ್ಧೆ ಸೂಕ್ತ. ಮಂಡ್ಯ ಕ್ಷೇತ್ರ ಪ್ರತಿನಿಧಿಸಿದರೆ ಬಹುಮತದಿಂದ ಗೆಲ್ಲುತ್ತಾರೆ. ಮಂಡ್ಯದಿಂದ ಗೆದ್ದು, ಸಚಿವರಾಗಿ ಒಳ್ಳೆಯ ಕೆಲಸ ಮಾಡಬೇಕು. ಜನರ ನಿರ್ಧಾರಕ್ಕೆ ತಲೆಬಾಗುವುದಾಗಿ ಸುಮಲತಾ ಹೇಳಿದ್ದಾರೆ. ಕಳೆದ MP ಚುನಾವಣೆಯಲ್ಲೂ ಜನರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿದರು. ಆ ಸಂಧರ್ಭದ ಮತ್ತೆ ಮರುಕಳಿಸಬಹುದು ಎಂದು  ಸುಮಲತಾ ರಾಜ್ಯ ರಾಜಕಾರಣ ಎಂಟ್ರಿ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

click me!