
ಬೆಂಗಳೂರು (ಅ.31): ಒಳ ಮೀಸಲಾತಿ ಜಾರಿ ನಿರ್ಧಾರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಭಾಗ್ಯದ ಬಾಗಿಲು ತೆಗೆದಿದ್ದಾರೆ. ಈ ಕುರಿತು ರಚಿಸಲಿರುವ ಏಕ ಸದಸ್ಯ ಆಯೋಗವು ಮೂರು ತಿಂಗಳಲ್ಲಿ ವರದಿ ನೀಡಲಿದ್ದು, ನಾಲ್ಕನೇ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೆ ಬರಲಿದೆ' ಎಂದು ಮಾಜಿ ಸಚಿವ ಎಚ್. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಲಿತ (ಎಡಗೈ) ಸಮುದಾಯದ ಪರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರ ಬಡವರ, ತುಳಿತಕ್ಕೆ ಒಳಗಾದವರ ಪರವಾಗಿ ಕೆಲಸ ಮಾಡುತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಳ ಮೀಸಲಾತಿ ವಿಚಾರ ನಿರ್ಧಾರವಾಗುವ ತನಕ, ಹೊಸದಾಗಿ ನೇಮಕಾತಿ ಆದೇಶ ಹೊರಡಿಸಬಾರದೆಂದು ಹೇಳಿದ್ದಾರೆ. ಹೀಗಾಗಿ ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಚುನಾವಣೆಯ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಅಭಿನಂದನೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.
100 ಸಾಧಕರಿಗೆ ಸುವರ್ಣೋತ್ಸವ ಸಂಭ್ರಮ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
ಆತಂಕ ಬೇಡ, ತಾಳ್ಮೆ ವಹಿಸಿ: ಒಳ ಮೀಸಲಾತಿ ಮೂರು ತಿಂಗಳ ಬಳಿಕ ಶೀಘ್ರವೇ ಜಾರಿಗೆ ಬರಲಿದೆ. ಈ ವಿಚಾರ ದಲ್ಲಿ ಯಾವುದೇ ಆತಂಕ ಬೇಡ, ಮೂವತ್ತು ವರ್ಷ ಕಾದಿದ್ದೇವೆ. ಇನ್ನು ಮೂರು ತಿಂಗಳು ತಾಳ್ಮೆ ವಹಿಸಿದರೆ ಸಿಹಿ ಖಂಡಿತ ಎಂದು ಸಮುದಾಯಕ್ಕೆ ಕರೆ ನೀಡಿದರು. ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್ ಮಂಜುನಾಥ್ ಸೇರಿ ಹಲವರು ಹಾಜರಿದ್ದರು.
ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಿ, ಮೂರು ತಿಂಗಳೊಳಗೆ ದತ್ತಾಂಶದ ವರದಿ ತರಿಸಿಕೊಂಡು ಒಳಮೀಸಲಾತಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಜತೆಗೆ ಸರ್ಕಾರಿ ಉದ್ಯೋಗ ನೇಮಕಾತಿಗೆ ತಡೆ ಹಾಕಿರುವುದು ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಿಳಿಸಿದ್ದಾರೆ. ಕೆಪಿಎಸ್ಸಿ ಸೇರಿ ಎಲ್ಲ ರೀತಿಯ ನೇಮಕಾತಿಗಳ ಪ್ರಕ್ರಿಯೆಗೆ ತಡೆ ಹಾಕುವ ಜತೆಗೆ ಎಸ್ಸಿಪಿ, ಟಿಎಸ್ಪಿ ಹಣ ಹಂಚಿಕೆಗೂ ತಡೆ ಹಾಕುವ ನಿರ್ಧಾರ ಕೈಗೊಳ್ಳಬೇಕು. ಮುಖ್ಯವಾಗಿ ಮೂರು ತಿಂಗಳೊಳಗೆ ವರದಿ ತರಿಸಿಕೊಂಡು, 4ನೇ ತಿಂಗಳಲ್ಲಿ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
ಯಾವುದೇ ಕಾರಣಕ್ಕೂ ವಿಳಂಬ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ನೇಮಕಾತಿ ಆಗದ ಕಾರಣಕ್ಕೆ ವಯಸ್ಸಿನ ಮೀತಿಯನ್ನು ನಾಲ್ಕು ತಿಂಗಳು ಸಡಿಲಗೊಳಿಸಿ, ಎಲ್ಲ ವರ್ಗದ ವಿದ್ಯಾವಂತರಿಗೆ ನ್ಯಾಯ ಕಲ್ಪಿಸಬೇಕು. ಒಳ ಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ಸಹಸ್ರಾರು ಮಂದಿ, ಹತ್ತಾರು ಸಂಘಟನೆಗಳು ಹೋರಾಟ ನಡೆಸಿದ್ದು, ಅವರೆಲ್ಲರ ಆಶಯದಂತೆ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಕಲ್ಪಿಸಲು ಕ್ರಮಕೈಗೊಂಡಿರುವ ನಿರ್ಧಾರ ಸ್ವಾಗತರ್ಹ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.