ಹೈಕಮಾಂಡ್‌ ಯಾವ ಕ್ಷೇತ್ರ ಸೂಚಿಸುತ್ತದೆಯೋ ಅಲ್ಲಿಂದ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ

By Kannadaprabha NewsFirst Published Mar 19, 2023, 4:40 AM IST
Highlights

ಕಾಂಗ್ರೆಸ್‌ ಸಮೀಕ್ಷಾ ವರದಿಯಲ್ಲಿ ನಾನು ಕೋಲಾರದಿಂದ ಸ್ಪರ್ಧಿಸಿದರೆ ಸೋಲುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಸುಳ್ಳು. ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಕೋಲಾರ ವಿಚಾರ ಚರ್ಚೆಗೆ ಬರಲಿಲ್ಲ. 

ಬೆಂಗಳೂರು (ಮಾ.19): ‘ಕಾಂಗ್ರೆಸ್‌ ಸಮೀಕ್ಷಾ ವರದಿಯಲ್ಲಿ ನಾನು ಕೋಲಾರದಿಂದ ಸ್ಪರ್ಧಿಸಿದರೆ ಸೋಲುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಸುಳ್ಳು. ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಕೋಲಾರ ವಿಚಾರ ಚರ್ಚೆಗೆ ಬರಲಿಲ್ಲ. ಅಂತಿಮವಾಗಿ ಹೈಕಮಾಂಡ್‌ ಯಾವ ಕ್ಷೇತ್ರ ಸೂಚಿಸುತ್ತದೆಯೋ ಅಲ್ಲಿಂದ ಸ್ಪರ್ಧಿಸುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

‘ಕೋಲಾರದಲ್ಲಿ ಸ್ಪರ್ಧಿಸಿದರೆ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳಲ್ಲಿ ಬಂದಿದೆ ಎನ್ನುವುದೆಲ್ಲವೂ ಊಹಾಪೋಹ. ಕೋಲಾರದಲ್ಲಿ ನನಗೆ ಹಿನ್ನಡೆಯಾಗುತ್ತದೆ ಎಂದಾಗಲಿ, ಸ್ಪರ್ಧಿಸಬೇಡಿ ಎಂದಾಗಲಿ ಯಾರೂ ಹೇಳಿಲ್ಲ. ಊಹಾಪೋಹಗಳಿಗೆ ಬೆಲೆ ಕೊಡಬೇಕಾಗಿಲ್ಲ. ನನ್ನ ಕ್ಷೇತ್ರ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಕೋಲಾರ, ವರುಣ ಅಥವಾ ಬೇರೆ ಕ್ಷೇತ್ರವೇ ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ

ದಿಲ್ಲಿಯಿಂದ ಬೆಂಗಳೂರಿಗೆ ಮರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಕ್ಷೇತ್ರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಎರಡು ಕ್ಷೇತ್ರಗಳ ಸ್ಪರ್ಧೆ ಮಾಡುವಂತೆಯೂ ನನಗೆ ಯಾರೂ ಹೇಳಿಲ್ಲ. ನಾನು ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕಮಾಂಡ್‌ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ ಎಂದೇ ಹೇಳಿದ್ದೆ. ಹೀಗಾಗಿ ಯಾವ ಕ್ಷೇತ್ರ ಎಂಬುದನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ ಎಂದರು.

‘ವರುಣ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಉತ್ತರಿಸಿದ ಅವರು, ವರುಣ ಕ್ಷೇತ್ರದಿಂದ ಒಂದೇ ಹೆಸರು ಶಿಫಾರಸು ಮಾಡಲಾಗಿದೆ. ಅಲ್ಲಿ ಯತೀಂದ್ರ ಇದ್ದಾನೆ. ನಾನು ಎಲ್ಲಿ ನಿಲ್ಲಬೇಕು ಎನ್ನುವ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಹೇಳಿದರು. ತನ್ಮೂಲಕ ವರುಣ ಕ್ಷೇತ್ರದಲ್ಲಿ ಮಗನನ್ನೇ ಮುಂದುವರೆಸುವ ಬಗ್ಗೆಯೂ ಪರೋಕ್ಷವಾಗಿ ಆಸೆ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬರುವವರ ಬಗ್ಗೆಯೂ ಚರ್ಚೆ: ಬಿಜೆಪಿಯಿಂದ ಈಗಾಗಲೇ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಸೇರಿದಂತೆ ಹಲವರು ಬಂದಿದ್ದಾರೆ. ಇನ್ನೂ ಹಲವರು ಬರುವವರು ಇದ್ದಾರೆ. ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಹೇಳಿದರು. ತನ್ಮೂಲಕ ಪರೋಕ್ಷವಾಗಿ ಸಚಿವ ವಿ. ಸೋಮಣ್ಣ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸಿಇಸಿಯಲ್ಲಿ ಪರ-ವಿರೋಧ ಚರ್ಚೆಯಾಗಿರುವುದನ್ನು ಒಪ್ಪಿಕೊಂಡರು.

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಇಂದಿನ ಸಿದ್ದು ಕೋಲಾರ ಪ್ರವಾಸ ರದ್ದು: ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪಿಗೆ ನೀಡಿಲ್ಲ ಎಂಬ ಗುಸುಗುಸು ನಡುವೆಯೇ ಭಾನುವಾರ ನಿಗದಿಯಾಗಿದ್ದ ಕೋಲಾರ ಪ್ರವಾಸವನ್ನು ಸಿದ್ದರಾಮಯ್ಯ ರದ್ದುಗೊಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, :ಬೆಳಗಾವಿಯಲ್ಲಿ ನಡೆಯಲಿರುವ ರಾಹುಲ್‌ಗಾಂಧಿ ಯುವ ಕ್ರಾಂತಿ ರಾರ‍ಯಲಿಗೆ ಹೋಗಬೇಕಿರುವ ಹಿನ್ನೆಲೆಯಲ್ಲಿ ಕೋಲಾರ ಪ್ರವಾಸ ರದ್ದುಪಡಿಸಲಾಗಿದೆ. ಇನ್ನು ಕೋಲಾರದಲ್ಲಿ ನಾನು ಮನೆ ಮಾಡಿಲ್ಲ. ಮನೆ ಮಾಡಲು ನೋಡಿದ್ದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!