
ಮೈಸೂರು (ಮೇ.7): ‘ನಾನು ಹೈಕಮಾಂಡ್ ಮಾತನ್ನು ಮಾತ್ರ ಕೇಳುತ್ತೇನೆ. ಹೈಕಮಾಂಡ್ ಹೇಳಿದರೆ ಐದು ವರ್ಷವೂ ಸಿಎಂ ಆಗಿರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನೀವು ಎಷ್ಟು ಬಾರಿ ಈ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ. 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ನೀವೇ ಇರಿ ಎಂದರೆ ಇರುತ್ತೇನೆ. ಎಲ್ಲಾ ತೀರ್ಮಾನ ಮಾಡುವುದು ಹೈಕಮಾಂಡ್ ಮಾತ್ರ. ಈ ವಿಷಯದಲ್ಲಿ ಬೇರೆ ಯಾರು, ಏನೇ ಮಾತನಾಡಿದರೂ ಅದು ಅವರ ವೈಯುಕ್ತಿಕ ಅಭಿಪ್ರಾಯ ಮಾತ್ರ’ ಎಂದು ಸ್ಪಷ್ಟಪಡಿಸಿದರು.
ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ನನ್ನನ್ನು ಈವರೆಗೂ ದೆಹಲಿಗೆ ಬನ್ನಿ ಎಂದು ಕರೆದಿಲ್ಲ. ನಾನು ಕೂಡ ಅಪಾಯಿಂಟ್ಮೆಂಟ್ ಕೇಳಿಲ್ಲ. ಅವರು ನನ್ನನ್ನು ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ಅಪಾಯಿಂಟ್ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯಾ?, ಸಂಪುಟ ವಿಸ್ತರಣೆಯಾ?, ಯಾವ ವಿಷಯದ ಚರ್ಚೆ ಎಂಬುದು ಗೊತ್ತಾಗಲಿದೆ. ನಾನಾಗಿಯೇ ಹೋಗಬೇಕಾದಲ್ಲಿ ರಾಹುಲ್ ಅವರು ಸಮಯ ಕೊಟ್ಟಾಗ ಹೋಗುವೆ. ಅವರು ನನ್ನನ್ನು ಕರೆದೇ ಇಲ್ಲ ಎಂದ ಮೇಲೆ ಸಭೆಯ ಅಜೆಂಡಾ ಫಿಕ್ಸ್ ಆಗುವುದು ಹೇಗೆ?. ಅವರು ಕರೆದರೆ ಮಾತ್ರ ನಾನು ಹೋಗುವುದು. ಸದ್ಯಕ್ಕಂತೂ ದೆಹಲಿ ಪ್ರವಾಸ ಇಲ್ಲ’ ಎಂದು ಹೇಳಿದರು.
‘ಸಿಎಂ ಕುರ್ಚಿಯ ವಿಚಾರಕ್ಕೆ ತೆರೆ ಬೀಳುತ್ತದೆಯೇ?’ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ತೀರ್ಮಾನಿಸಬೇಕು, ಅದರಂತೆ ನಡೆದುಕೊಳ್ಳುತ್ತೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.