
ಬೆಂಗಳೂರು(ಆ.13): ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದಾಗಿ ಸೋಲನುಭವಿಸಿ ಗೋವಿಂದರಾಜನಗರ ಕ್ಷೇತ್ರದ ಜನತೆಗೆ ಅಪಚಾರ ಮಾಡಿದ್ದು, ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮವರೇ ನನಗೆ ಮೋಸ ಮಾಡಿದ್ದು, ಎಲ್ಲರಿಗೂ ಗೊತ್ತು. ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಎರಡು ಕಡೆ ಸ್ಪರ್ಧಿಸಿದ್ದೆ. ಹೈಕಮಾಂಡ್ ನೀಡಿದ ಟಾಸ್ಕ್ ಅನ್ನು ನಾನೊಬ್ಬನೇ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದೆ. ಇಷ್ಟಾದರೂ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಒಂದು ಕಡೆ ಮೂರು ಸಾವಿರ ಮತದಿಂದ ಸೋತರೆ, ಮತ್ತೊಂದೆಡೆ 70 ಸಾವಿರ ಮತಗಳನ್ನು ಪಡೆದೆ. ನಾನು ಹೇಗೆ ಸೋಲನುಭವಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ಕಡಿಮೆ ಬೆಲೆಗೆ ನಿವೇಶನ ಕೊಡಿಸೋದಾಗಿ ವಿ.ಸೋಮಣ್ಣ ಪಿಎ ಹೆಸರಲ್ಲಿ ಕೂಲಿ ಕಾರ್ಮಿಕರಿಗೆ 4.5 ಲಕ್ಷ ರು. ವಂಚನೆ!
ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ:
‘ಚುನಾವಣೆ ವೇಳೆ ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ. ನನ್ನ ಗೆಲುವು ಖಚಿತವಾಗಿದ್ದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ತೆರಳಿದೆ. ಸೋಲುತ್ತೇನೆ ಎಂದು ಜೀವನದಲ್ಲಿ ನೆನೆಸಿರಲಿಲ್ಲ. ಆದರೆ, ಸೋಲನುಭವಿಸಬೇಕಾಯಿತು. ನನಗೆ ನಮ್ಮ ಪಕ್ಷದವರೇ ತೊಂದರೆ ಕೊಟ್ಟರು. ನನ್ನ ಪಾಡಿಗೆ ನಾನು ಇದ್ದೆ. ಗೋವಿಂದರಾಜ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ತೊಡಗಿಸಿಕೊಂಡಿದ್ದೆ. ಆದರೆ, ನನ್ನನ್ನು ಅಲ್ಲಿಂದ ತೆರವುಗೊಳಿಸಿ ಬೇರೆ ಎರಡು ಕಡೆ ಚುನಾವಣೆಗೆ ನಿಲ್ಲುವಂತೆ ಸೂಚಿಸಿದರು. ನಾನು ಅವರ ಮಾತು ಕೇಳಿದ್ದೆ ತಪ್ಪಾಯಿತು. ಬಂಗಾರದಂತಹ ಗೋವಿಂದರಾಜನಗರವನ್ನು ನಾನು ಕಳೆದುಕೊಂಡೆ’ ಎಂದು ಚುನಾವಣೆ ವೇಳೆ ಆಗಿರುವಂತಹ ತಪ್ಪುಗಳ ಬಗ್ಗೆ ಮೆಲುಕು ಹಾಕಿದರು.
‘ನಾನು 1983ರಿಂದ ಬೆಂಗಳೂರಲ್ಲಿ ಕೆಲಸ ಮಾಡಿದ್ದೇನೆ. ಸುಮಾರು 40 ವರ್ಷಕ್ಕಿಂತ ಹೆಚ್ಚು ಕಾಲ ದುಡಿದಿದ್ದೇನೆ. ಬಿಬಿಎಂಪಿ ಸದಸ್ಯನಾಗಿ, ವಿಧಾನಪರಿಷತ್ ಸದಸ್ಯನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದು ಹಳೆಯ ಮೆಲುಕು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.