ನಾನು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಭ್ರಷ್ಟರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಸೆ.21): ನಾನು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಭ್ರಷ್ಟರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು. ಹಾಸನದಲ್ಲಿ ಮಾತನಾಡಿದ ದೇವರಾಜೇಗೌಡ, ಸಾರ್ವಜನಿಕ ವಲಯದಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಕೆಲವರು ಹೋರಾಟ ನಿಲ್ಲಿಸಿ ಮೌನವಾದರು ಅಂತಿದ್ದಾರೆ, ಆದರೆ ನಾನು ಯಾರೊಂದಿಗೂ ಹಣ ಪಡೆದೋ ಅಥವಾ ಬೇರಾವ ಕಾರಣದಿಂದಲೋ ತಟಸ್ಥನಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ, ಇಂಥವನನ್ನು ಬಿಜೆಪಿ ಗುರುತಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಅಭ್ಯರ್ಥಿ ಮಾಡಿತು. ಲೋಕಸಭೆ ಚುನಾವಣೆಯಲ್ಲಿ ಮೇಲ್ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಉಭಯ ಪಕ್ಷಗಳ ನಡುವೆ ಸಾಮರಸ್ಯ ಇರಲಿ, ಜೆಡಿಎಸ್ ಜೊತೆ ಕೆಲಸ ಮಾಡಿ ಎಂದು ಹೈಕಮಾಂಡ್ ಸೂಚನೆ ಮೇರೆಗೆ ನಾನದನ್ನು ಪಾಲಿಸುತ್ತಿದ್ದೇನೆ. ಇದು ಪಕ್ಷ ನಿಷ್ಠೆಯೇ ಹೊರತು ಬೇರೇನೂ ಅಲ್ಲ. ಕಳೆದ ಚುನಾವಣೆಯಲ್ಲಿ ಎನ್ಡಿಎ ಪರ ಕೆಲಸ ಮಾಡಿದ್ದೇನೆ ಎಂದರು. ನನ್ನ ಶಕ್ತಿ ಕುಂದಿಲ್ಲ, ನಾನು ರಾಜಿ ಮಾಡಿಕೊಂಡಿಲ್ಲ ಎಂದರು.
ನಾನು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಹೋಗಲ್ಲ, ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಹೆದರಿಲ್ಲ. ಹಣ ಆಮಿಷಕ್ಕೆ ನಾನು ಬಲಿಯಾಗಿಲ್ಲ, ನನ್ನನ್ನು ಜೈಲಿಗೆ ಕಳಿಸಿದ ಕರ್ನಾಟಕದ ಪ್ರಭಾವಿ ವ್ಯಕ್ತಿ ತನ್ನ ರಕ್ಷಣೆಗಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತಾಡಿದ್ದಾರೆ ಎಂದು ದೂರಿದರು. ಆದರೆ ಯಾರು ಎಂಬುದನ್ನು ಹೇಳಲಿಲ್ಲ. ಇದೇ ವೇಳೆ ಪಕ್ಷ ನನಗೆ ಏನು ಸೂಚನೆ ಕೊಡುತ್ತೋ ಅದನ್ನು ಪಾಲನೆ ಮಾಡುವೆ ಎಂದ ಅವರು, ನಾನು ಮೂಲೆ ಗುಂಪಾಗಿಲ್ಲ ಎಂದರು.
ದತ್ತಪೀಠ, ಮುಳ್ಳಯ್ಯನಗಿರಿ ಸೇರಿದಂತೆ ಗಿರಿ ಪ್ರದೇಶದ ಗ್ರಾಮಗಳಿಗೆ ಇಲ್ಲ ಸರ್ಕಾರಿ ಬಸ್: ಜನರ ಪರದಾಟ
ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ದ್ವೇಷ ರಾಜಕಾರಣ ಮಿತಿ ಮೀರಿದೆ. ಈಗ ವಿರೋಧ ಪಕ್ಷದ ವಿರುದ್ಧ ಪಿತೂರಿ ಮಾಡುತ್ತಿರುವವರು, ನಾಳೆ ಸ್ವ ಪಕ್ಷೀಯರ ವಿರುದ್ಧವೇ ಸೇಡಿನ ರಾಜಕಾರಣ ಮಾಡಬಹುದು. ಹುಷಾರಾಗಿರಿ ಎಂದು ಸಲಹೆ ನೀಡಿದರು. ಇದೇ ವೇಳೆ ಜಿಲ್ಲೆಯ ಕೆಲ ಅಧಿಕಾರಿಗಳು ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರೆ. ಇದು ತಪ್ಪು, ಸರ್ಕಾರ ಇಂದು ಇರಲಿದೆ, ನಾಳೆ ಹೋಗಲಿದೆ. ಆದರೆ ನಿಮ್ಮ ಆಡಳಿತ ವೈಖರಿ ಜನಪರವಾಗಿರಬೇಕು, ಅಧಿಕಾರಿಗಳು ಎಚ್ಚರವಹಿಸಿ ಎಂದರು.