ನಾನು ದ್ವೇಷದ ರಾಜಕಾರಣ ಮಾಡಲ್ಲ: ಸಚಿವ ಕೆ.ಸಿ.ನಾರಾಯಣಗೌಡ

By Kannadaprabha NewsFirst Published Sep 20, 2022, 11:00 PM IST
Highlights

ರಾಜಕಾರಣ ನಿಂತ ನೀರಲ್ಲ. ಯಾರು ಮುನ್ನುಗ್ಗುತ್ತಾರೋ ಅವರಿಗೆ ಅವಕಾಶಗಳು ದೊರಕುತ್ತವೆ ಎಂದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ 

ಕೆ.ಆರ್‌.ಪೇಟೆ(ಸೆ.20): ವೈಯಕ್ತಿಕ ರಾಜಕಾರಣವನ್ನು ಬದಿಗೊತ್ತಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಕರೆ ನೀಡಿದರು. ಪಟ್ಟಣದ ಹೋಟೆಲ್‌ ರಾಮದಾಸ್‌ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ರಾಜಕಾರಣ ನಿಂತ ನೀರಲ್ಲ. ಯಾರು ಮುನ್ನುಗ್ಗುತ್ತಾರೋ ಅವರಿಗೆ ಅವಕಾಶಗಳು ದೊರಕುತ್ತವೆ ಎಂದರು. ಒಮ್ಮೆ ಶಾಸಕನಾಗುವ ಹಂಬಲದಿಂದ ನಾನು ರಾಜಕಾರಣಕ್ಕೆ ಬಂದವನು. ಕ್ಷೇತ್ರದ ಜನ ನನಗೆ ಒಂದಲ್ಲ ಸತತವಾಗಿ ಮೂರನೇ ಬಾರಿಗೆ ಕ್ಷೇತ್ರದ ಶಾಸಕನಾಗುವಂತೆ ಆಶೀರ್ವಾದ ಮಾಡಿದ್ದಾರೆ. ಜನಾಶೀರ್ವಾದದಿಂದ ಸಂಪುಟ ದರ್ಜೆಯ ಸಚಿವನಾಗಿ ಐದು ಖಾತೆಗಳನ್ನು ನಿರ್ವಹಿಸಿದ್ದೇನೆ ಎಂದರು.

ರಾಜಕೀಯವಾಗಿ ನಾನು ಈಗ ಸಂತೃಪ್ತ. ಪತ್ರಕರ್ತರ ಸಂಘ ಕ್ಷೇತ್ರದ ಎಲ್ಲ ರಾಜಕೀಯ ಮುಖಂಡರನ್ನು ಒಂದು ವೇದಿಕೆಗೆ ಕರೆ ತಂದಿದೆ. ಯಾರ ಹಣೆ ಬರಹ ಚನ್ನಾಗಿದೆಯೋ ಅವರು ಮುಂದಿನ ಶಾಸಕರಾಗುತ್ತಾರೆ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಚುನಾವಣೆ ವೇಳೆ ಹಣ ಹಂಚಿದರೆ ಅದನ್ನು ಹಿಡಿಸುವ ಕೆಲಸ ಮಾಡುವುದಿಲ್ಲ. ಜನತೆಯ ಅಭಿವೃದ್ಧಿಗಾಗಿ ಆರೋಗ್ಯಕರ ರಾಜಕಾರಣ ಮಾಡೋಣ ಎಂದು ವೇದಿಕೆಯಲ್ಲಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.

ಮಂಡ್ಯದಲ್ಲಿ ಶುರುವಾಯ್ತು ಆಣೆ ಪ್ರಮಾಣ ಪಾಲಿಟಿಕ್ಸ್: ಸುಮಲತಾ ಚ್ಯಾಲೆಂಜ್ ಸ್ವೀಕರಿಸಿದ ಪುಟ್ಟರಾಜು

ತಾಲೂಕು ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎಲ.ದೇವರಾಜು ಮಾತನಾಡಿ, ಪತ್ರಕರ್ತರು ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪತ್ರಕರ್ತರು ರಾಜಕಾರಣಿಗಳನ್ನು ಹೊಗಳುವುದನ್ನು ಬದಿಗಿಟ್ಟು ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿಯಾಗುವಂತೆ ಸಲಹೆ ನೀಡಿದರು.

ಸಮಾಜ ಸೇವಕ ವಿಜಯ ರಾಮೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳನ್ನು ಪತ್ರಕರ್ತರು ಅನಾವರಣ ಮಾಡದಿದ್ದರೆ ಜನಪ್ರತಿನಿಧಿಗಳು ಸರ್ವಾಧಿಕಾರಿಗಳಾಗುತ್ತಾರೆ ಎಂದರು.
ಮನ್ಮುಲ್ ನಿರ್ದೇಶಕ ಎಚ್‌.ಟಿ.ಮಂಜು ಮಾತನಾಡಿ, ಕೆಲವು ಪತ್ರಕರ್ತರು ವೈಯಕ್ತಿಕ ತೇಜೋವಧೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಇದನ್ನು ನಿಲ್ಲಿಸಿ ಸಮಾಜ ಮುಖಿ ಕೆಲಸ ಮಾಡಿ. ನಿಷ್ಟುರ ಬರವಣಿಗೆ ಮೂಲಕ ಜಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿ ಎಂದರು.

ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಕೆರಗೋಡು ಸೋಮಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಿಕ್ಕೇರಿ ಸುರೇಶ್‌, ಎಂಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ.ಅಶೋಕ್‌, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ ಅರವಿಂದ್‌, ಆರ್‌ಟಿಓ ಅಧಿಕಾರಿ ಮಲ್ಲಿಕಾರ್ಜುನ, ಜೆಡಿಎಸ್‌ ಯುವ ಮುಖಂಡ ಬಿ.ಎಂ.ಕಿರಣ್‌, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
 

click me!