
ಮಧುಗಿರಿ (ನ.24): 2023ರಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಜಾತ್ಯತೀತ ಜನತಾ ದಳದಿಂದ ಮಧುಗಿರಿ ಕ್ಷೇತ್ರದ ಅಭ್ಯರ್ಥಿ ನಾನೇ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ನೋವು ಕೊಡಲು ನನ್ನಿಂದ ಆಗದು. ಆದ ಕಾರಣ ಕಳೆದ ತಿಂಗಳು ಚುನಾವಣೆಯಿಂದ ಹಿಂದೆ ಸರಿಯುವ ಮಾತನಾಡಿದ್ದ ನಾನು ಅವರ ಸೂಚನೆ ಮೇರೆಗೆ ಮಧುಗಿರಿ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಘೋಷಿಸಿದರು.
ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ವೈಯಕ್ತಿಕ ಕಾರಣ ಮತ್ತು ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂದು ಈ ಹಿಂದೆ ತೀರ್ಮಾನಿಸಿ ಹೇಳಿಕೆ ಕೊಟ್ಟಿದ್ದೆ. ಆದರೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ನಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ನಮ್ಮ ಮನೆ ಮುಂಭಾಗ ನೀವೆ ಜೆಡಿಎಸ್ನಿಂದ ಸ್ಪರ್ಧಿಸುವಂತೆ ಹಠ ಹಿಡಿದು ಧರಣಿ ನಡೆಸಿದ್ದರಲ್ಲದೆ ವರಿಷ್ಠರ ಗಮನಕ್ಕೂ ತಂದಿದ್ದರು. ನಂತರ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮತ್ತು ಪುತ್ರನ ಜೊತೆ ಚರ್ಚಿಸಿ ನೀವೇ ಸ್ಪರ್ಧಿಸುವಂತೆ ತಿಳಿ ಹೇಳಿ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ
ಆದ್ದರಿಂದ ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಮಧುಗಿರಿ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ವೀರಭದ್ರಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಮಧುಗಿರಿಯನ್ನು ಕಂದಾಯ ಜಿಲ್ಲೆ ಮಾಡುವುದು, ಏಕಶಿಲಾ ಬೆಟ್ಟಕ್ಕೆ ರೋಪ್ವೇ ಮಾಡಿದಾಗ ಮಾತ್ರ ನನಗೆ ಸಮಾಧಾನವಾಗಲಿದ್ದು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಸಿಎಂ ಮಾಡುವುದು ನಮ್ಮ ಏಕೈಕ ಗುರಿ ಎಂದರು.
ಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಎಸ್.ಚಂದ್ರಶೇಖರಬಾಬು, ಕೆ.ನಾರಾಯಣ್, ನರಸಿಂಹಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜು, ಮುಖಂಡರಾದ ಗೋವಿಂದರೆಡ್ಡಿ, ಲಕ್ಷ್ಮೇನರಸಿಂಹರೆಡ್ಡಿ, ರಾಮಚಂದ್ರಪ್ಪ,ಎಸ್.ಆರ್.ನಾಗರಾಜು, ಜಬೀಉಲ್ಲಾಘಿ, ಬಾವಿಮನೆ ಕಾಂತಣ್ಣ, ಹಂಸರಾಜ್, ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ನಾಸೀರ್, ಕಂಭತ್ತನಹಳ್ಳಿ ರಘು, ಚೌಡಪ್ಪ, ಗಬಾಲಿ ರಾಜು, ಡೈರಿ ತಿಮ್ಮಣ್ಣ, ನಾಗಭೂಷಣ್, ಬಿ.ಎಸ್.ಶ್ರೀನಿವಾಸ್, ರಂಗನಾಥ್, ವೆಂಕಟಾಪುರ ಗೋವಿಂದರಾಜು, ಮಿಲ್ ಚಂದ್ರಣ್ಣ, ಡಿ.ವಿಹಳ್ಳಿ ರಾಮು, ದೇವು, ನರಸಪ್ಪ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮುಂಬರುವ ಚುನಾವಣೆಯಲ್ಲೂ ನೀವೇ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ನಾನು ಅವರ ಮನೆ ಮಗನಿದ್ದಂತೆ, ಅವರ ಕುಟುಂಬಕ್ಕೆ ನೋ ಎಂಬ ಪ್ರಶ್ನೆಯೇ ಇಲ್ಲ, ನಾನು ಈ ಹಿಂದೆ ಅಧಿಕಾರಿಯಾಗಿ ಕೆಲಸ ಮಾಡಿದ್ದು, ಆಕಸ್ಮಿಕವಾಗಿ ರಾಜಕೀಯಕ್ಕೆ ಬರಬೇಕಾಯಿತು. ರಾಜಕೀಯ ಹೊರತಾಗಿಯೂ ಕಾರ್ಯಕರ್ತರ ಮತ್ತು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಗಳಿಸಿದ್ದು, ಅವರ ಜೊತೆ ಸದಾ ಇರುತ್ತೇನೆಂದು ಹಿಂದೆಯೇ ಹೇಳಿದ್ದೇನೇ. ಅದೇ ರೀತಿ ಮುಂದೆಯೂ ಇರುತ್ತೇನೆ. ಕ್ಷೇತ್ರದ ಜನರ ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ
-ಎಂ.ವಿ.ವೀರಭದ್ರಯ್ಯ, ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.