ನಾನು ಲೀಡರ್ ಆಧಾರಿತ ರಾಜಕಾರಣಿಯಲ್ಲ: ಶಾಸಕ ಶಿವರಾಮ ಹೆಬ್ಬಾರ್

By Kannadaprabha NewsFirst Published Nov 13, 2023, 2:00 AM IST
Highlights

ನಾನು ಲೀಡರ್ ಆಧಾರಿತ ರಾಜಕಾರಣಿಯಲ್ಲ. ಜನಗಳ ಬೆಂಬಲಿತ ರಾಜಕಾರಣಿ. ಪಕ್ಷದಲ್ಲಿ ನನ್ನ ನಿರ್ಲಕ್ಷ್ಯ ಎಂದಿಗೂ ಆಗಿಲ್ಲ. ಜನ ಮಾತ್ರ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಮಾರ್ಮಿಕವಾಗಿ ಹೇಳಿದರು. 

ಶಿರಸಿ (ನ.13): ನಾನು ಲೀಡರ್ ಆಧಾರಿತ ರಾಜಕಾರಣಿಯಲ್ಲ. ಜನಗಳ ಬೆಂಬಲಿತ ರಾಜಕಾರಣಿ. ಪಕ್ಷದಲ್ಲಿ ನನ್ನ ನಿರ್ಲಕ್ಷ್ಯ ಎಂದಿಗೂ ಆಗಿಲ್ಲ. ಜನ ಮಾತ್ರ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಮಾರ್ಮಿಕವಾಗಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಂತ ನಾನು ಅನ್ಯ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಎಲ್ಲೂ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ: ನಾನು ಆಗ ಕಾಂಗ್ರೆಸ್ ಸೇರುತ್ತೇನೆ, ಈಗ ಬಿಜೆಪಿ ಬಿಡುತ್ತೇನೆ ಎಂದೆಲ್ಲ ಮಾಧ್ಯಮಗಳಲ್ಲಿ ಬರುತ್ತಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ ಎಂಬ ಮಾತೂ ಬರುತ್ತಿದೆ. ಆದರೆ ನಾನು ರಾಜೀನಾಮೆ ನೀಡಿದರೆ ತಾನೆ ಉಪ ಚುನಾವಣೆ ನಡೆಯುವುದು. ಆ ಶಕ್ತಿ, ದೈರ್ಯ ಇದ್ದಾಗ ಅಂತಹ ನಿರ್ಣಯ ಕೈಗೊಳ್ಳುತ್ತೇನೆ ಎಂದೂ ಸಹ ಅವರು ಹೇಳಿದರು. ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ನಡೆದ ಬೆಳವಣಿಗೆ ಬಗ್ಗೆ ಉತ್ತರಿಸಿದ ಹೆಬ್ಬಾರ, ಸಂಘಟನೆ ಯಾರನ್ನು ಬೇಕಾದರೂ ಕಿತ್ತು ಹಾಕಬಹುದು, ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು. ಅದು ಸಂಘಟನೆ ನಿರ್ಣಯ. ಅದನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಯಾರು ತೆಗೆದು ಹಾಕುತ್ತಾರೋ, ಒಳಗೆ ತೆಗೆದುಕೊಳ್ಳುತ್ತಾರೋ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದರು.

ಬರ ಅಧ್ಯಯನ ರಾಜಕೀಯ, ನಾಟಕೀಯ: ಸಚಿವ ಚಲುವರಾಯಸ್ವಾಮಿ

ನಾನು ದೆಹಲಿ ಪ್ರವಾಸದಲ್ಲಿದ್ದೆ: ಬರ ಅಧ್ಯಯನಕ್ಕೆ ಬಿಜೆಪಿ ಪ್ರಮುಖರ ತಂಡ ಶಿರಸಿ ಮತ್ತು ಮುಂಡಗೋಡ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ತಾವು ಪೂರ್ವ ನಿಗದಿತ ದೆಹಲಿ ಪ್ರವಾಸದಲ್ಲಿ ಇದ್ದೆ ಎಂದು ತಿಳಿಸಿದರು. ಯಲ್ಲಾಪುರ, ಶಿರಸಿ, ಮುಂಡಗೋಡ ಮತ್ತು ಹಳಿಯಾಳ ತಾಲೂಕುಗಳು ಅತಿ ಬರಪೀಡಿತ ಪ್ರದೇಶ ಎಂದು ಈಗಾಗಲೇ ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ ನಿಯಮಾವಳಿಗಳ ಪ್ರಕಾರ ಪರಿಹಾರ ಕಾರ್ಯ ತೆಗೆದುಕೊಳ್ಳಬೇಕಾಗಿದೆ. ಬರಗಾಲದಿಂದ ಬೆಳೆಯೇ ಇಲ್ಲದ ಇಂದಿನ ಪರಿಸ್ಥಿತಿಯಿಂದ ವಿಮಾ ಪರಿಹಾರ ನೀಡಲೇಬೇಕಾಗಿದೆ ಎಂದ ಅವರು, ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಒಳ್ಳೆ ಕೆಲಸ ಎಂದರು.

ಈಗ ಬಿಜೆಪಿಯದ್ದು ಅಪ್ಪ-ಮಕ್ಕಳ ಪಕ್ಷ ಎಂಬಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದು ತಾರ್ಕಿಕ ಪ್ರಶ್ನೆಯಾಗುತ್ತದೆ. ಒಮ್ಮೊಮ್ಮೆ ನಾವು ಏನು ಮಾತನಾಡಿರುತ್ತೇವೆಯೋ ಅದು ಇಂತಹ ಘಟನೆಗಳು ನಡೆದಾಗ ಉತ್ತರ ಕೊಡಲು ಉತ್ತರವೇ ಸಿಗುವುದಿಲ್ಲ. ಕಾಲವೇ ನಿರ್ಣಯಿಸುತ್ತದೆ ಎಂದು ಜಾರಿಕೊಂಡರು. ಕದಂಬೋತ್ಸವ ಸೇರಿದಂತೆ ಎಲ್ಲ ಉತ್ಸವ ಬರಗಾಲದ ಸನ್ನಿವೇಶದಲ್ಲಿ ಕಷ್ಟಸಾಧ್ಯ. ಮುಂದೆ ಕುಡಿಯುವ ನೀರಿಗೂ ಕಷ್ಟವಾಗಬಹುದು. ಜನರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಹಜ ಸ್ಥಿತಿಯಲ್ಲಿದ್ದಾಗ ಮಾಡಿದರೆ ಸರಿ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾಡಬೇಕೆ ಬಿಡಬೇಕೆ ಎಂಬುದನ್ನು ಸರ್ಕಾರದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

KGF​ನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ, ಕೋಚಿಮುಲ್​ ವಿಭಜಿಸಲ್ಲ: ಸಿಎಂ ಸಿದ್ದರಾಮಯ್ಯ

ಲೋಕಸಭಾ ಅಭ್ಯರ್ಥಿ ನಾನಲ್ಲ: ನಾನು ಯಾವುದೇ ಕಾರಣಕ್ಕೂ ಲೋಕಸಭಾ ಅಭ್ಯರ್ಥಿಯಲ್ಲ, ನನಗೆ ಯಾವ ಏಣಿ ಹತ್ತಬೇಕು ಎಂಬ ವಿವೇಚನೆಯಿದೆ ಎಂದ ಶಿವರಾಮ ಹೆಬ್ಬಾರ, ಮಾಜಿ ಸಚಿವ ಎಸ್.ಟಿ. ಸೋಮಶೇಖರ ನನಗೆ ತುಂಬಾ ಸ್ನೇಹಿತರು. ಹಾಗಂತ ಅವರು ನೀಡಿರುವ ಹೇಳಿಕೆ ನನ್ನದಲ್ಲ. ನಾನು ನೀಡಿದ ಹೇಳಿಕೆ ಅವರದ್ದಲ್ಲ ಎಂದರು.

click me!