Latest Videos

ನನ್ನ ಬಳಿಯೂ ಪೆನ್‌ಡ್ರೈವ್‌ ಇದೆ: ಹೊಸ ಬಾಂಬ್‌ ಸಿಡಿಸಿದ ಲಕ್ಷ್ಮಣ ಸವದಿ

By Kannadaprabha NewsFirst Published Aug 8, 2023, 9:20 PM IST
Highlights

ನನ್ನ ಹತ್ತಿರವೂ ಒಂದು ಪೆನ್‌ಡ್ರೈವ್‌ ಇದೆ ಸಂದರ್ಭ ಬಂದರೆ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ 

ಅಥಣಿ(ಆ.08):  ಆ.11ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅನೇಕ ಸಚಿವರು, ಶಾಸಕರು ಅಥಣಿಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಥಣಿ ಮತಕ್ಷೇತ್ರದ ಜನರು, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.

ಅವರು ತಾಲೂಕಿನ ಕೊಕಟನೂರು ಗ್ರಾಮದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಬೇಕಿದ್ದ ಪಶು ವೈದ್ಯಕೀಯ ಮಹಾವಿದ್ಯಾಲಯ ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆ ಮಾಡಿರುವುದು ನಮ್ಮ ತಾಲೂಕಿನ ಹೆಮ್ಮೆ. ಕೊಕಟನೂರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಪಶು ವೈದ್ಯಕೀಯ ಮಹಾವಿದ್ಯಾಲಯದ ಉದ್ಘಾಟನೆಗೆ, ನೂತನ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಾಹನ ಚಾಲನಾ ತರಬೇತಿ ಕಚೇರಿ ಉದ್ಘಾಟನೆ ಮತ್ತು ಅಥಣಿ ಪಟ್ಟಣದಲ್ಲಿ ಬಸವೇಶ್ವರ ಕಂಚಿನ ಮೂರ್ತಿ ಅನಾವರಣ ಸೇರಿ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ನೂತನ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅನೇಕ ಸಚಿವರು ಮತ್ತು ಶಾಸಕರು ಆಗಮಿಸಲಿದ್ದಾರೆ.

ಸವದಿ ವಿರುದ್ಧ ಪ್ರತಿಷ್ಠೆಯ ಗ್ರಾಪಂ ಚುನಾವಣೆ ಗೆದ್ದ ಜಾರಕಿಹೊಳಿ..!

ತಾಲೂಕಿನಲ್ಲಿನ ವಿವಿಧ ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಚಾಲನೆ ದೊರೆಯಲಿದ್ದು, ಆದ್ದರಿಂದ ಸುವ್ಯವಸ್ಥಿತವಾಗಿ ಈ ಬೃಹತ್‌ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ ಲಕ್ಷ್ಮಣ ಸವದಿ ಅವರು ಎಲ್ಲರ ಸಲಹೆಗಳನ್ನು ಆಲಿಸಿದರು. ಎಲ್ಲರೂ ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಊರಿನಲ್ಲಿ ಇರುವ ಜ್ವಲಂತ ಸಮಸ್ಯೆಗಳನ್ನು ನನ್ನ ಮುಂದೆ ತಂದರೆ ಎಲ್ಲ ಸಮಸ್ಯೆಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಕೊಡುವ ಮೂಲಕ ಅವರ ಗಮನಕ್ಕೆ ತರಲಾಗುವುದು ಎಂದರು.

ಈ ವೇಳೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಗಂಳೆ, ಪರಪ್ಪಾ ಸವದಿ, ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಶ್ರೀಕಾತ ಪೂಜಾರಿ, ಆನಂದರಾವ ದೇಶಪಾಂಡೆ, ಶಾಮ ಪೂಜಾರಿ, ಚಿದಾನಂದ ಮುಕಣಿ, ಸುರೇಶಗೌಡಾ ಪಾಟೀಲ,ಬಸವರಾಜ ಬುಟಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎಲ್ಲರೂ ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಊರಿನಲ್ಲಿ ಇರುವ ಜ್ವಲಂತ ಸಮಸ್ಯೆಗಳನ್ನು ನನ್ನ ಮುಂದೆ ತಂದರೆ ಎಲ್ಲ ಸಮಸ್ಯೆಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಕೊಡುವ ಮೂಲಕ ಅವರ ಗಮನಕ್ಕೆ ತರಲಾಗುವುದು. ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  

ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು ರಾಜ್ಯದಲ್ಲಿ ಇದೇ ಮೊದಲು: ಬಿಜೆಪಿ ಇತಿಹಾಸ ಬರೆದಿದೆ: ಸವದಿ ಟಾಂಗ್

ನನ್ನ ಬಳಿಯೂ ಪೆನ್‌ಡ್ರೈವ್‌ಗಳಿವೆ

ಅಥಣಿ: ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷ ಇದೆಯೆಂದು ತೋರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪೆನ್‌ಡ್ರೈವ್‌ ಬಗ್ಗೆ ಮಾತನಾಡಿದ್ದಾರೆ, ಹೊರತು ಅವರ ಬಳಿ ಏನೂ ಪುರಾವೆಗಳಿಲ್ಲ, ನನ್ನ ಹತ್ತಿರವೂ ಒಂದು ಪೆನ್‌ಡ್ರೈವ್‌ ಇದೆ ಸಂದರ್ಭ ಬಂದರೆ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು.

ರಾಹುಲ್‌ ಅನರ್ಹತೆ ವಾಪಸ್‌ ಸ್ವಾಗತಾರ್ಹ

ರಾಹುಲ್‌ ಗಾಂಧಿ ಸಂಸತ್‌ ಸ್ಥಾನದ ಅನರ್ಹತೆ ವಾಪಸ್‌ ಪಡೆದಿರುವುದನ್ನು ಸ್ವಾಗತಿಸಿದ ಶಾಸಕ ಲಕ್ಷ್ಮಣ ಸವದಿ, ಪ್ರಜಾಪ್ರಭುತ್ವದ ಘನತೆಯನ್ನು ಸುಪ್ರೀಂ ಕೋರ್ಚ್‌ ಎತ್ತಿಹಿಡಿದಿದೆ.ಕೋರ್ಚ್‌ ಆದೇಶದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್‌ ಅನರ್ಹತೆ ವಾಪಸ್‌ ಪಡೆದಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿ ಸಹಜ, ಟೀಕೆ ಮಾಡಿರುವುದನ್ನು ದೊಡ್ಡ ವಿಷಯ ಮಾಡಿಕೊಂಡು ಮಾನಹಾನಿ ಕೇಸ್‌ ಹಾಕಲಾಗಿತ್ತು. ಆದರೆ ಯಾವತ್ತೂ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಹೀಗಾಗಿಯೇ ಅನರ್ಹತೆ ವಾಪಸ್‌ ಪಡೆಯಲಾಗಿದೆ ಎಂದರು.

click me!