
ಶಿವಮೊಗ್ಗ (ಜ.10): ಸ್ಯಾಂಟ್ರೋ ರವಿ ಕುರಿತು ಆಳವಾದ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಲು ಹೇಳಿದ್ದೇನೆ. ಅವನ ಹಿನ್ನೆಲೆ ಏನು? ಎಷ್ಟು ಕೇಸುಗಳಿವೆ, ಯಾರಾರಯರಿಗೆಲ್ಲ ಬ್ಲಾಕ್ಮೇಲ್ ಮಾಡಿದ್ದೇನೆ ಎಂಬೆಲ್ಲ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಸಿಎಂ ಗಮನಕ್ಕೂ ಈ ಎಲ್ಲ ವಿಚಾರಗಳನ್ನು ತಂದಿದ್ದೇನೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ಬಗ್ಗೆ ಕುಮಾರಸ್ವಾಮಿ ಅವರು ಅನೇಕ ವಿವಾದಗಳನ್ನು ಎತ್ತಿದ್ದಾರೆ. ಇದಕ್ಕೆ ನಮ್ಮದೇನು ತೊಂದರೆಯಿಲ್ಲ. ಯಾರಾರಯರೋ ನನ್ನ ಮನೆಗೆ ಸಮಸ್ಯೆ, ಬೇಡಿಕೆಗಳನ್ನು ಇಟ್ಟುಕೊಂಡು ಬರ್ತಾರೆ. ಬಂದವರು ಅನೇಕ ಬಾರಿ ಫೋಟೋ ತೆಗೆಸಿಕೊಳ್ಳುತ್ತಾರೆ. ಹಾಗೆಯೇ ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದರು. ಸಾವಿರಾರು ಜನ ಇವರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಆಗ ಅವರು ಹೀಗೆ ಫೋಟೋ ತೆಗೆಸಿಕೊಳ್ಳುವವರಿಗೆ, ಮನೆಗೆ ಬರುವವರಿಗೆ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಎಂದು ಹೇಳಿದ್ದರಾ? ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
ಜೈಲಿನಲ್ಲಿ ಅಕ್ರಮ ಚಟುವಟಿಕೆ ಸಹಿಸಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ
ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿ ಇರೋರು. ಆತ ನನ್ನ ಜೊತೆ ಇರುವ ಒಂದು ಫೋಟೋ ತೋರಿಸಿ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಕುಮಾರಸ್ವಾಮಿಗೆ ಯಾವ ಲಾಭವಾಗುತ್ತೋ ಗೊತ್ತಿಲ್ಲ. ಆದರೆ ಒಂದು ವಿಷಯ ಸರಿಯಾಗಿ ತಿಳಿದುಕೊಳ್ಳಬೇಕು. ಈವರೆಗೆ ನನ್ನ ಮನೆಗೆ ಬಂದವರು ಹಣದ ಗಂಟುಬಿಚ್ಚಿ, ಆಮಿಷ ತೋರುವ ಧೈರ್ಯ ಮಾಡಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಒಂದು ನೈತಿಕತೆ ಇಟ್ಕೊಂಡು ಬದುಕ್ತಿದ್ದೇನೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ವಶಕ್ಕೆ ಪಡೆಯಲು ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ: ಸ್ಯಾಂಟ್ರೋ ರವಿ ವಶಕ್ಕೆ ಪಡೆಯಲು ಮತ್ತು ಈ ಸಂಬಂಧ ವಿಚಾರಣೆ ನಡೆಸಲು ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಸ್ಯಾಂಟ್ರೋ ರವಿಗೂ, ಎಚ್.ಡಿ. ಕುಮಾರಸ್ವಾಮಿ ಅವರಿಗೂ ಯಾವ ಸಂಪರ್ಕ ಗೊತ್ತಿಲ್ಲ. ಅದು ನಮಗೆ ಗೊತ್ತಾಗಬೇಕಿದೆ. ಅವರಿಗೆ ಇಷ್ಟೊಂದು ಫೋಟೋ ಹೇಗೆ ಸಿಗುತ್ತೆ ಗೊತ್ತಿಲ್ಲ. ಅವರಲ್ಲಿರುವ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದರು.
ಬಾಂಬ್ ಸ್ಫೋಟ ಕುರಿತು ಕೂಲಂಕುಶ ತನಿಖೆ: ತುಂಗಾ ತೀರದಲ್ಲಿ ನಡೆದ ಪ್ರಾಯೋಗಿಕ ಬಾಂಬ್ ಬ್ಲಾಸ್ಟ್ ಮತ್ತು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಕುರಿತು ಎನ್ಐಎ ಕೂಲಂಕುಶವಾಗಿ ತನಿಖೆ ನಡೆಯುತ್ತಿದೆ. ಈ ಸಂಬಂಧ ಶಿವಮೊಗ್ಗ, ಹೊನ್ನಾಳಿ, ಉಡುಪಿ ಕಡೆಗಳಲ್ಲಿ ತನಿಖೆ ಮಾಡಿದ್ದಾರೆ. ಶಿವಮೊಗ್ಗ, ಉಡುಪಿಯಲ್ಲಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಂಧಿತ ವ್ಯಕ್ತಿ ಕಾಂಗ್ರೆಸ್ ಮುಖಂಡನ ಪುತ್ರ ಅನ್ನೋದು ಗೊತ್ತಾಗಿದೆ ಎಂದು ಹೇಳಿದರು. ಕಾಂಗ್ರೆಸ್ಗೆ ಮುಸ್ಲಿಂರ ಓಟು ಬೇಕು. ಹೀಗಾಗಿ ಆ ಸಮುದಾಯದ ಯಾರೇ ತಪ್ಪು ಮಾಡಿದರೂ ಖಂಡಿಸುವ ಶಕ್ತಿ ಅವರಿಗಿಲ್ಲ. ಆರ್ಎಸ್ಎಸ್ ತೆಗಳಿದರೆ ಒಂದು ಕೋಮಿನ ಮತ ತಮಗೆ ಸಿಗುತ್ತದೆ ಎಂದು ಭಾವಿಸಿದ್ದಾರೆ. ಇದು ಅವರ ಭ್ರಮೆ. ದೇಶದ ಜನರಿಗೆ ಇವೆಲ್ಲ ಅರ್ಥವಾಗಿದೆ.
ಆಸೆಯಿರುವ ಹಿರಿಯರನ್ನೇ ಸಚಿವರನ್ನಾಗಿಸಿ: ಶಾಸಕ ರಾಜೂಗೌಡ
ಹೀಗಾಗಿಯೇ ದೇಶದ ಎಲ್ಲೆಡೆಯಿಂದ ಕಾಂಗ್ರೆಸ್ ಅನ್ನು ಮುಕ್ತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಇನ್ನೂ ಸ್ವಲ್ಪ ಉಸಿರಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟವಿಚಾರ ಎಂದ ಅವರು, ತೀರ್ಥಹಳ್ಳಿ ಭಾಗದಲ್ಲಿ ಆನೆಯೊಂದು ಓಡಾಡುತ್ತಿದೆ. ಈ ಆನೆಯನ್ನು ಹಿಡಿಯಲು ಪ್ರಯತ್ನ ಸಾಗಿದೆ ಎಂದರು. ಗಡಿ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಡಿ ವಿವಾದ ಕೋರ್ಟ್ನಲ್ಲಿ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅಮಿತ್ ಶಾ ಸೂಚಿಸಿದ್ದಾರೆ. ಅದರಂತೆ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.