
ತಿರುಪತಿ: ನಿನ್ನೆ ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ರಾಜ್ಯದ ಪುಣ್ಯಕ್ಷೇತ್ರ ತಿರುಪತಿಗೆ ಭೇಟಿ ನೀಡಿ ಏಳು ಕೊಂಡಲವಾಡ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿದ ಆಶೀರ್ವಾದ ಪಡೆದರು. ನಿನ್ನೆ ಸಂಜೆಯೇ ನಾಯ್ಡು ಅವರು ಕುಟುಂಬ ಸದಸ್ಯರ ಜೊತೆ ತಿರುಪತಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಕೊನೆಗೊಳಿಸಿ ಹಿಂದೂ ಧರ್ಮ ರಕ್ಷಣೆ ಮಾಡುವ ವಾಗ್ದಾನ ನೀಡಿದರು. ಅಪರಾಧಗಳನ್ನು ಎಂದಿಗೂ ಸಹಿಸಲಾಗದು. ಕೆಲವರು ಅಪರಾಧಗಳನ್ನು ಮಾಡಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ರಾಜಕೀಯ ಪಿತೂರಿಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಾನು ತಿರುಪತಿಯಿಂದಲೇ ಆಡಳಿತದ ಸ್ವಚ್ಛತೆಯನ್ನು ಶುರು ಮಾಡುವೆ ಎಂದು ಹೇಳಿದರು.
ದೇಶದ ರಾಜಕಾರಣದಲ್ಲಿ ಆಂಧ್ರ ಪ್ರದೇಶ ಪ್ರಮುಖ ಪಾತ್ರವಹಿಸುತ್ತಿದೆ. ಇವತ್ತಿನಿಂದ ಒಳ್ಳೆ ಆಡಳಿತವೂ ಆರಂಭವಾಗಿದೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವೆ 2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ 1 ಆಗಬೇಕು. ನಾನು ಆಂಧ್ರ ಪ್ರದೇಶವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವಾಗಿ ಮಾಡುವೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಕಾರ್ಯಕರ್ತನ ಗುರುತಿಸಿ ಸಚಿವನನ್ನಾಗಿ ಮಾಡಿದ ಬಿಜೆಪಿಯನ್ನು ಶ್ಲಾಘಿಸಿದ ನಾಯ್ಡು: ವೀಡಿಯೋ ವೈರಲ್
ಈ ಹಿಂದೆ ನಕ್ಸಲರು ನನ್ನ ಮೇಲೆ ದಾಳಿ ಮಾಡಿದಾಗ ದೇವರೇ ನನ್ನನ್ನು ರಕ್ಷಿಸಿದರು. ನಾನು ಈ ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದೆ. ರಾಜ್ಯದಲ್ಲಿ ಆರ್ಥಿಕ ಅಸಮಾನತೆಯನ್ನು ಹೊಗಲಾಡಿಸುವೆ. ಕೇವಲ ಸಂಪತ್ತನ್ನು ಸೃಷ್ಟಿಸುವುದಷ್ಟೇ ನನ್ನ ಗುರಿಯಲ್ಲ, ಅದನ್ನು ಬಡವರಿಗೂ ಹಂಚುವುದು ನನ್ನ ಉದ್ದೇಶ. ನನ್ನ ಮೊಮ್ಮಗ ದೇವಾಂಶ್ ಹುಟ್ಟಿದಾಗಿನಿಂದಲೂ ನಾನು ದೇಗುಲಕ್ಕೆ ಅನ್ನದಾನಕ್ಕೆ ಹಣ ದಾನ ಮಾಡುತ್ತಿದ್ದೇನೆ ನಾನು ಸಮಾಜವನ್ನು ಬಡತನದಿಂದ ಮುಕ್ತಗೊಳಿಸುವುದಕ್ಕೆ ನಾನು ಯಾವಾಗಲೂ ಕೆಲಸ ಮಾಡುತ್ತೇನೆ ಎಂದು ನಾಯ್ಡು ಹೇಳಿದರು.
ನಿನ್ನೆ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣವಚನ ಸ್ವೀಕರಿಸಿದರು. ಜನಸೇನಾದ ಮುಖ್ಯಸ್ಥ ನಟ ಪವನ್ ಕಲ್ಯಾಣ್ ಅವರು ಉಪ ಮುಖ್ಯಮಂತ್ರಿಯಾಗಿ ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ, ನಟ ಬಾಲಯ್ಯ, ಅಮಿತ್ ಷಾ, ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲಿಗೆ ಬೀಳಲು ಮುಂದಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಬ್ಬಿಕೊಂಡ ಪ್ರಧಾನಿ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.