Karnataka Politics: '2023ಕ್ಕೆ ಕುಮಾರಣ್ಣನೇ ಮುಖ್ಯಮಂತ್ರಿ ಆಗ್ತಾರೆ'

By Kannadaprabha NewsFirst Published Sep 25, 2022, 11:45 AM IST
Highlights

2023ರ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಣ್ಣ ಸಿಎಂ, ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಶಾಸಕ ಡಾ.ದೇವಾನಂದ ಚವ್ಹಾಣ ವಿಶ್ವಾಸ

ವಿಜಯಪುರ(ಸೆ.25):  2023ಕ್ಕೆ ಕುಮಾರಣ್ಣನೇ ಸಿಎಂ ಆಗುತ್ತಾರೆ. ಸಮ್ಮಿಶ್ರ ಬರುವುದು ಖಚಿತ. ಅದರಲ್ಲಿ ಯಾರೂ ಹಣೆಬರಹ ಬದಲಾವಣೆ ಬದಲಾಗುವುದಿಲ್ಲ. ಯಾರು ಏನೇ ಹೇಳಿದರೂ ಕುಮಾರಣ್ಣನೇ ಸಿಎಂ. ನಾನು ಬೇರೆ ಪಕ್ಷ ಸೇರುವ ಕುರಿತು ಮಹೂರ್ತ ಇನ್ನೂ ಕೂಡಿ ಬಂದಿಲ್ಲ ಎಂದು ನಾಗಠಾಣ ಜೆಡಿಎಸ್‌ ಶಾಸಕ ಡಾ.ದೇವಾನಂದ ಚವ್ಹಾಣ ತಿಳಿಸಿದರು. ವಿಜಯಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಪಕ್ಷ ಸೇರುವಂತೆ ನನಗೆ ಆಫರ್‌ ಬಂದಿವೆ. ಆದರೆ, ಅವುಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನಾನು ಈಗ ಜೆಡಿಎಸ್‌ನಲ್ಲಿದ್ದೇನೆ. ಇಲ್ಲಿಯೇ ಮುಂದುವರಿಯುತ್ತೇನೆ. ಮುಂದಿನ ನಿರ್ಧಾರ ಯಾರ ಕೈಯಲ್ಲಿಯೂ ಇಲ್ಲ ಎಂದರು.

ನಾನು ಯಾವ ಪಕ್ಷದಲ್ಲಿ ಇರಬೇಕು ಎಂಬುದನ್ನು ಕ್ಷೇತ್ರದ ಜನರು ನಿರ್ಧರಿಸ್ತುತಾರೆ. ಆ ನಿರ್ಣಯವನ್ನು ನಾನು ತೆಗೆದುಕೊಳ್ಳುವುದಿಲ್ಲ. ಜನರ ನಿರ್ಧಾರವೇ ನನ್ನ ನಿರ್ಧಾರವಾಗಿರುತ್ತದೆ. ಪ್ರಸ್ತುತ ಜೆಡಿಎಸ್‌ನಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಜೆಡಿಎಸ್‌ನಲ್ಲಿ ಕಾರ್ಯಕರ್ತರೇ ಮುಖಂಡರು. ಜೆಡಿಎಸ್‌ ಕಾರ್ಯಕರ್ತರ ನಿಲುವು ಗಟ್ಟಿಯಾಗಿದೆ. ಜೆಡಿಎಸ್‌ನಲ್ಲಿ ಇರುವಷ್ಟು ಘನತೆ ಮತ್ತು ಗೌರವ ಬೇರೆ ಯಾವ ಪಕ್ಷದಲ್ಲಿಯೂ ಇಲ್ಲ. ದೇವೇಗೌಡ, ಕುಮಾರಣ್ಣ, ಇಬ್ರಾಹಿಂ ಎಲ್ಲರೂ ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ. ಅವರೆಲ್ಲರ ಬಗ್ಗೆ ನನಗೆ ಬಹಳಷÜು್ಟಗೌರವವಿದೆ. ಅವರೂ ಕೂಡ ನನಗೆ ಅಷ್ಟೇ ಗೌರವ ಕೊಡುತ್ತಾರೆ ಎಂದು ಚವ್ಹಾಣ ಹೇಳಿದರು.

ಕಲಾಪ ಮುಗಿಯುತ್ತಿದ್ದಂತೆ ವಿದ್ಯುತ್‌ ದರ ಏರಿಕೆ: ಎಚ್‌ಡಿಕೆ ಕಿಡಿ

ಸಚಿವ ಕಾರಜೋಳ ವಿರುದ್ಧ ಆಕ್ರೋಶ

ನಾನು ಯಾವುದೋ ಮೂಲದಿಂದ ಅನುದಾನ ತಂದಿದ್ದೇನೆ. ಎಲ್ಲ ಕ್ಷೇತ್ರಗಳಿಗೆ ತಲಾ .25 ಕೋಟಿ ಅನುದಾನ ನೀಡಿದ್ದಾರೆ. ನನಗೆ ಅದರಲ್ಲಿ .5 ಕೋಟಿ ಕಡಿಮೆ ಮಾಡಿ ಕೇವಲ .20 ಕೋಟಿ ನೀಡಿದ್ದಾರೆ. ಆದರೆ, ನಾನು ಬೇರೆ ಮೂಲಗಳಿಂದ ಅದರ ನಾಲ್ಕು ಪಟ್ಟು ಹೆಚ್ಚಿಗೆ ಹಣ ತಂದು ಕೆಲಸ ಮಾಡಿದ್ದೇನೆ ಎಂದರು. ಇದಕ್ಕೆ ಬಿಜೆಪಿ ಸರ್ಕಾರದ ತಾರತಮ್ಯ ಧೋರಣೆಯೇ ಕಾರಣವಾಗಿದೆ.

ಕ್ಷೇತ್ರದಲ್ಲಿ ನನ್ನ ಕೆಲಸಗಳು ಮಾತನಾಡುತ್ತಿವೆಯೇ ಹೊರತು ನಾನು ಮಾತನಾಡುತ್ತಿಲ್ಲ. ಕಳೆದ 70 ವರ್ಷಗಳಲ್ಲಿ  ಆಗದ ಕೆಲಸಗಳನ್ನು ನಾನು ಮಾಡಿದ್ದೇನೆ. ವಿಜಯಪುರನ ನಗರದಲ್ಲಿ ಅಭಿವೃದ್ಧಿಯಾಗದ ವಾರ್ಡುಗಳಲ್ಲಿ ಕೂಡ ನಾನು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಈ ಕುರಿತು ಮತಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ ಎಂದರು.

ನಾಗಠಾಣದಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲಿನ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹೀಗಾಗಿ ಎಲ್ಲ ಗ್ರಾಮಸ್ಥರಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರ ಮತ್ತು ಸ್ಥಳೀಯ ಶಾಸಕರ ಜವಾಬ್ದಾರಿ. ಅದನ್ನು ಬಿಟ್ಟು ರಸ್ತೆಯ ಮೇಲೆ ಬಸ್‌ನಿಲ್ದಾಣ ನಿರ್ಮಿಸುತ್ತೇವೆ ಎಂದು ಹೇಳಿ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿದರೆ, ಅದು ಅವೈಜ್ಞಾನಿಕವಲ್ಲವೇ ಎಂದು ಪ್ರಶ್ನಿಸಿದರು.

ಇದೇ ವೇಳೆ ಸಚಿವ ಗೋವಿಂದ ಕಾರಜೋಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶಾಸಕ ಚವ್ಹಾಣ, ರಾಜ್ಯ ಸರ್ಕಾರದಲ್ಲಿ ಗೌರವಯುತ ಸಚಿವ ಸ್ಥಾನ ಹೊಂದಿರುವ ಒಬ್ಬರು, ತಮಗೆ ಸಂಬಂಧಪಡದ ಯಾವುದೋ ಇಲಾಖೆಯಿಂದ ಮಂಜೂರಾದ ಕಾಮಗಾರಿಗಳ ಲಾಭವನ್ನು ತಾವು ಪಡೆಯಲು ಹವಣಿಸುತ್ತಾರೆ. ಅವರು ಇಂಥ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯಬಾರದು. ಅವರಿಗೆ ಮಾಡಲು ಸಾಕಷ್ಟುಕೆಲಸಗಳಿವೆ. ಅದನ್ನು ಬಿಟ್ಟು ಅವರು ಇಂಥ ಕೆಲಸವನ್ನು ಮಾಡಬಾರದು. ಅವರು ತಮ್ಮ ಮಗನ ರಾಜಕೀಯ ಭವಿಷ್ಯ ರೂಪಿಸಲು ಈ ರೀತಿ ತಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೋರಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ .250 ಕೋಟಿ ಬಿಡುಗಡೆ ಮಾಡಿದ್ದರು. ಮೂರು ವರ್ಷಗಳವರೆಗೆ ಈ ಅನುದಾನವನ್ನು ತಡೆಹಿಡಿದವರು ಯಾರು? ಅದನ್ನು ಈಚೆಗಷ್ಟೇ ಘೋಷಣೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತಡೆಹಿಡಿದ ಕಾಮಗಾರಿಗಳನ್ನು ಈಗ ಘೋಷಣೆ ಮಾಡಿ ನಾವೇ ಮಾಡಿದ್ದೇವೆ ಎಂದು ಹೇಳಿಕೊಂಡು ತಿರುಗಿದರೆ, ಇವರೇನು ಮಾಡಿದಂತಾಯಿತು? ಇವರು ಇಂಥ ಕೆಲಸಗಳನ್ನೇ ಮಾಡುತ್ತ ಬಂದಿದ್ದಾರೆಯೇ ಹೊರತಾಗಿ, ಯಾವುದೇ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸದನದಲ್ಲಿ HDK Vs Ashwath Narayan: ರಾಜಕೀಯ ಹಗ್ಗ ಜಗ್ಗಾಟ ಜಗಜ್ಜಾಹೀರು!

ನಾಗಠಾಣ ಬಸ್‌ ನಿಲ್ದಾಣ ಕಾಮಗಾರಿ ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಾಪ್ತಿಗೆ ಬರುತ್ತದೆ. ಅವರು ಬಂದು ಕೆಲಸ ಮಾಡಲಿ. ಆದರೆ, ಏನೂ ಸಂಬಂಧ ಇರದವರು ಬಂದು ಭೂಮಿಪೂಜೆ ಮಾಡುತ್ತಾರೆ. ಚಣೇಗಾಂವ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಅದರ ಕಾಮಗಾರಿಯನ್ನು ಲೋಕೋಪಯೋಗಿ ಸಚಿವರು ಉದ್ಘಾಟಿಸಲಿ. ಅದನ್ನು ಬಿಟ್ಟು ಜಲಸಂಪನ್ಮೂಲ ಸಚಿವರು ಭೂಮಿಪೂಜೆ ಮಾಡುತ್ತಾರೆ ಎಂದರೆ, ಅದು ಕೀಳುಮಟ್ಟದ ರಾಜಕಾರಣವಲ್ಲದೇ ಮತ್ತೇನೂ ಸಲ್ಲ ಎಂದು ಹೇಳಿದರು.

ಅವರು ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಅವರಿಗೆ ತಮ್ಮ ಚಿರಂಜೀವಿಯ ಮೇಲೆ ಪ್ರೀತಿ ಇದ್ದರೆ, ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಘೋಷಣೆ ಮಾಡಲಿ ಎಂದು ಪರೋಕ್ಷವಾಗಿ ಸಚಿವ ಕಾರಜೋಳ ವಿರುದ್ಧ ಡಾ.ದೇವಾನಂದ ಚವ್ಹಾಣ ಸವಾಲು ಹಾಕಿದರು.

click me!