
ಬೆಂಗಳೂರು (ಮಾ.06): ಸಾಮಾಜಿಕ ನ್ಯಾಯ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಅಥವಾ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪಾಗುತ್ತದೆ. ಆಮೇಲೆ ಅವರೆಲ್ಲೋ ಅಹಿಂದ ಎಲ್ಲೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಎಂಟು ವರ್ಷಗಳಿಂದ ಮುಖ್ಯಮಂತ್ರಿ ಆಗಿದ್ದಾರೆ. ದೇವರಾಜು ಅರಸು ಅವರ ದಾಖಲೆ ಮುರಿದಿದ್ದಾರೆ. ಅಹಿಂದ ನಾಯಕರು ಎಂದು ಹೇಳಿಕೊಳ್ಳುತ್ತಾರೆ. ಜಾತಿ ಜಾತಿಯ ಹೆಸರು ಹೇಳಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಆದರೂ ಈವರೆಗೆ ಒಳ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎಂಬುದನ್ನು ಅಕ್ಷರಶಃ ಪಾಲಿಸಿ ಅದರಂತೆ ನಡೆದವರು ದೇವೇಗೌಡರು ಮಾತ್ರ. ತಳಮಟ್ಟದ ಎಷ್ಟೋ ಸಮುದಾಯಗಳಿಗೆ ಅವರು ಮೀಸಲು ಸೌಲಭ್ಯ ನೀಡಿ ಅವಕಾಶದ ಬಾಗಿಲುಗಳನ್ನು ತೆರೆದರು. ಅದರ ಫಲ ಇವತ್ತು ಸರ್ಕಾರಿ ನೇಮಕಾತಿ, ವಿಧಾನಸಭೆಯಲ್ಲಿ ಕಾಣುತ್ತಿದ್ದೇವೆ. ಆದರೆ, ಯಾವ ಸಮುದಾಯಕ್ಕೂ ಏನೂ ಮಾಡದವರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ನಾನು ಬಹಳ ದಿನದಿಂದಲೂ ಕೇಳುತ್ತಿದ್ದೇನೆ. ಕಳೆದ ಎಂಟು-ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದ ಸಮುದಾಯಗಳು ಯಾವುವು? ಎಷ್ಟು ಪ್ರಮಾಣದಲ್ಲಿ ಪಡೆದಿದ್ದಾರೆ? ಎಂಬ ಬಗ್ಗೆ ಪಟ್ಟಿ ಕೊಡಿ ಎಂದು ಕೇಳುತ್ತಿದ್ದೇನೆ. ಬಹುಶಃ ಈ ಪಟ್ಟಿಯನ್ನು ಅವರು ಹೊರಕ್ಕೆ ಬಿಟ್ಟರೆ ಈ ಮುಖ್ಯಮಂತ್ರಿ ಅಸಲಿ ಬಣ್ಣ ಗೊತ್ತಾಗುತ್ತದೆ ಎಂದರು.
ರಾಜ್ಯದ ಎಲ್ಲಾ ಸಮುದಾಯಗಳಿಗೆ ನಾನು ಒಂದು ಕರೆ ನೀಡಲು ಬಯಸುತ್ತೇನೆ. ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಐದು ವರ್ಷಗಳ ಸರ್ಕಾರಕ್ಕೆ ಆಶೀರ್ವಾದ ಮಾಡಿ. ಇವರು ಮಾಡಿರುವ ಅನ್ಯಾಯ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.