
ಮೈಸೂರು (ನ.08): ಕೇಂದ್ರ ಸರ್ಕಾರವು ಈಗಾಗಲೇ ಕಬ್ಬಿಗೆ ಎಫ್.ಆರ್.ಪಿ ದರ ನಿಗದಿ ಮಾಡಿದೆ. ಹಣದ ಕೊರತೆ ಇದ್ದರೆ ನನ್ನ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಮುಖ್ಯಮಂತ್ರಿ ಹೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡೋದು ಸರಿಯಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇವರ ತಪ್ಪಿಗೆ ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಮಾಡಿದ್ದಾರೆ. ಅದಕ್ಕೆ ಪತ್ರ ಬರೆದಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಸ್ಕೀಮ್ ಉಸ್ತುವಾರಿ ನೋಡಿಕೊಳ್ಳಲು ಕ್ಯಾಬಿನೆಟ್ ಮಟ್ಟದ ಸ್ಥಾನಮಾನ ಕೊಟ್ಟು ದುಡ್ಡು ವೆಚ್ಚ ಮಾಡ್ತೀರಾ?ರೈತರಿಗೆ ಹಣ ಕೊಡಲು ಆಗಲ್ವಾ? ರೈತರ ಬಗ್ಗೆ ಅಸಡ್ಡೆ, ಕೆಲ ಒತ್ತಡಕ್ಕೆ ಮಣಿದಿರಬಹುದು. ಜನಪ್ರತಿನಿಧಿಗಳ ಕಾರ್ಖಾನೆ ಉಳಿಸುವ ಒತ್ತಡ ಇರಬಹುದು ಎಂದು ಅವರು ಆರೋಪಿಸಿದರು. ಈ ಸರ್ಕಾರದ ಬಗ್ಗೆ ಆಕ್ರೋಶವಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಸೀನಿಯರ್ ಲೀಡರ್ ಇದ್ದಾರೆ. ಎರಡು ಬಾರಿ ಸಿಎಂ ಆಗಿದ್ದಾರೆ. ಡಿಸಿಎಂ ಆಗಿದ್ದರು. ಹೆಚ್ಚು ಬಜೆಟ್ ಮಂಡನೆ ಮಾಡಿದ ಖ್ಯಾತಿ ಇದೆ.
ಸಿಎಂಗೆ ಕನಿಷ್ಠ ಏನು ತೀರ್ಮಾನ ಮಾಡಬೇಕು ಅಂತ ಗೊತ್ತಿಲ್ವಾ? ವಿರೋಧ ಪಕ್ಷದ ಪ್ರಮುಖರಿಗೆ ಆಹ್ವಾನ ಇದೆ. ಸಭೆ ಕರೆದಿದ್ದಾರೆ ಅಂತೆ. ಇದು ನಾವು ಮಾಡುವ ತೀರ್ಮಾನ ಅಲ್ಲ. ಸಿಎಂ ಮಾಡುವ ತೀರ್ಮಾನ. ಸಣ್ಣ ವಿಷಯವನ್ನು ದೊಡ್ಡದು ಮಾಡಿದ್ದಾರೆ ಎಂದು ಅವರು ಟೀಕಾಪ್ರಹಾರ ನಡೆಸಿದರು. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಅಂತಾರೆ. ಯಾವ ರಾಜ್ಯದಲ್ಲಿ ಸಿಎಂಗಳು ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ?ಸಿದ್ದರಾಮಯ್ಯ ಅವರಿಗೆ ರೈತರ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಇದೆ. ನಾನೇ ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ಎರಡು ಸಂದರ್ಭದಲ್ಲೂ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ನಾನೇ ಬಗೆಹರಿಸಿದ್ದೇನೆ. ಕೇಂದ್ರದ ಕಡೆ ನೋಡಲಿಲ್ಲ. ವೈಯಕ್ತಿಕ ನಿರ್ಧಾರ ಮಾಡಿದ್ದೆ ಎಂದು ಅವರು ತಿಳಿಸಿದರು. ಮೂರು ಪಕ್ಷಗಳಲ್ಲಿ ಸಕ್ಕರೆ ಮಾಲೀಕರಿದ್ದಾರೆ ಎನ್ನುವ ಆರೋಪವಿದೆ. ನಮ್ಮ ಪಕ್ಷದಲ್ಲಿ ಬಂಡಪ್ಪ ಕಾಶಪ್ಪನವರ್ ಕಾರ್ಖಾನೆ ಇರಿಸಿಕೊಂಡಿದ್ದರು. ಈಗ ಅವರು ಮಾರಾಟ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.