ಎಚ್‌ಡಿಕೆ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ: ನಿಖಿಲ್ ಕುಮಾರಸ್ವಾಮಿ

By Kannadaprabha NewsFirst Published Jun 8, 2024, 9:02 AM IST
Highlights

ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಹಿರಿತನ ಆಧಾರದ ಮೇಲೆ ಅವರಿಗೆ ಮಂತ್ರಿಸ್ಥಾನ ಸಿಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. 

ಮಂಡ್ಯ (ಜೂ.08): ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಹಿರಿತನ ಆಧಾರದ ಮೇಲೆ ಅವರಿಗೆ ಮಂತ್ರಿಸ್ಥಾನ ಸಿಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಮೊದಲಾಗಲಿ ಅಥವಾ ಚುನಾವಣೆ ನಂತರವಾಗಲಿ ನಾನು ಮಂತ್ರಿಯಾಗಬೇಕು, ನನಗೆ ಈ ಖಾತೆಯೇ ಬೇಕು ಎಂದು ಬಿಜೆಪಿ ನಾಯಕರೆದುರು ಬೇಡಿಕೆ ಇಟ್ಟಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಮೂರು ಬಾರಿ ಸಂಸದರಾಗಿದ್ದಾರೆ. 

ಈ ಅನುಭವದ ಆಧಾರದ ಮೇಲೆ ಕೇಂದ್ರದ ನಾಯಕರು ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪರೋಕ್ಷವಾಗಿ ಸಚಿವ ಸ್ಥಾನ ಸಿಗುವ ಸುಳಿವು ನೀಡಿದರು. ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನದಿ ನೀರಿನ ವಿವಾದಕ್ಕೆ ಶಾಶ್ವತ ಪರಿಹಾರ ದೊರಕಿಸುವ ಸಂಕಲ್ಪ ಮಾಡಿದ್ದಾರೆ. ಮೇಕೆದಾಟು ಯೋಜನೆ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದು ವಿಶ್ವಾಸದಿಂದ ನುಡಿದರು. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಎರಡು ಉಪ ಚುನಾವಣೆ ನಡೆಯಬೇಕಿದೆ. ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. 

Latest Videos

ಶುದ್ಧ ಕುಡಿಯುವ ನೀರು ಘಟಕದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ: ಆತಂಕಕಾರಿ ವರದಿ!

ಮೈತ್ರಿ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ನನ್ನ ಆಸಕ್ತಿ ಪಕ್ಷ ಸಂಘಟನೆಯಲ್ಲಿದೆ. ಚನ್ನಪಟ್ಟಣ ಉಪಚುನಾವಣೆ ವಿಚಾರ ಮಾತನಾಡುವುದು ಈಗ ಅಪ್ರಸ್ತುತ. ಚನ್ನಪಟ್ಟಣದಲ್ಲಿ ಉಪ ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಮಾಡುತ್ತಾರೆ. ಇದಕ್ಕೆಲ್ಲಾ ಇನ್ನೂ 6 ತಿಂಗಳು ಕಾಲವಾಕಾಶ ಇದೆ. ಚರ್ಚೆ ಮಾಡೋಣ ಎಂದರು. ಸುಮಲತಾ ಬಿಜೆಪಿ ಸದಸ್ಯರು. ಅವರೂ ಕೂಡ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವನ್ನು ಬಯಸಿದ್ದರು. ಪ್ರಚಾರ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗದಿದ್ದರೂ ಅವರ ಬೆಂಬಲಿಗರಿಗೆ ಹೇಳಿದ್ದಾರೆ. 

ನಾನೇ ಸ್ವತಃ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಧನ್ಯವಾದ ಹೇಳುತ್ತೇನೆ ಎಂದು ನುಡಿದರು. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯಿತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ. ಈ ಬಾರಿ ಕುಮಾರಸ್ವಾಮಿ ಸ್ಪರ್ಧೆಗೆ ಮುಖಂಡರು-ಶಾಸಕರ ಅಪೇಕ್ಷೆ ಇತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಈ ಕಾರಣದಿಂದಲೇ ಮಹಿಳೆಯರು, ರೈತರು, ಹಿರಿಯರು ಸೇರಿದಂತೆ ಎಲ್ಲಾ ವರ್ಗದವರು ಕುಮಾರಸ್ವಾಮಿ ಅವರನ್ನು ಅಧಿಕ ಮತಗಳ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ ೫ ವರ್ಷ ಪ್ರಾಮಾಣಿಕ ಕೆಲಸ ಮಾಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಗಂಡಸ್ತನದ ಬಗ್ಗೆ ಮಾತನಾಡಿದ್ದರು. ಈಗ ಅದಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಜನಪ್ರತಿನಿಧಿಗಳು ಬಹಳ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಏನು ಬೇಕಾದ್ರು ಮಾತನಾಡಬಹುದು ಎಂಬ ಉದ್ದಟತನ ಬಿಡಬೇಕು ಎಂದರು.

ರಾಜ್ಯದಲ್ಲಿ ಸೋತಿರುವ ಲೋಕಸಭೆ ರಿಸಲ್ಟ್‌ ಬಗ್ಗೆ ವರದಿ ಕೇಳಿದ ರಾಹುಲ್‌ ಗಾಂಧಿ

ಮೃತರ ಕುಟುಂಬವರ್ಗದವರಿಗೆ ಸಾಂತ್ವನ: ಮಂಡ್ಯ ವಿಧಾನಸಭಾ ಕ್ಷೇತ್ರದ ಕೆರಗೋಡು ಹೋಬಳಿಯ ಚಿಕ್ಕ ಬಾಣಸವಾಡಿ ಗ್ರಾಮದ ಪಕ್ಷದ ಕಾರ್ಯಕರ್ತರಾದ ಮಂಜು ಹಾಗೂ ಅವರ ಪತ್ನಿ ಸುನೀತಾ ಅವರು ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಶುಕ್ರವಾರ ಅವರ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಂಡ್ಯ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ .ರಮೇಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಇತರರಿದ್ದರು.

click me!